Get Updates
Get notified of breaking news, exclusive insights, and must-see stories!

ಉಳ್ಳಾಲದ ಕಡಲು ರಮಣೀಯ ಆದರೆ ಅಷ್ಟೇ ಅಪಾಯಕಾರಿ

ಮಂಗಳೂರು, ಜುಲೈ 4: ಉಳ್ಳಾಲದ ಕಡಲು ರುದ್ರರಮಣೀಯ ಆದರೆ ಅಷ್ಟೇ ಅಪಾಯಕಾರಿ ಕೂಡ. ಅದೆಷ್ಟೋ ಜೀವಗಳನ್ನು ಬಲಿ ಪಡೆದ ಕಡಲು ತನ್ನೊಡಲಿಗೆ ಜೀವಗಳನ್ನು ಸೆಳೆದುಕೊಳ್ಳುವ ವೇಳೆ ಜಾತಿ, ಧರ್ಮ, ಮತ ನೋಡುವುದಿಲ್ಲ. ಅಬ್ಬರದ ಅಲೆಗಳು ಬಂದು ಬಡಿದಾಗ ಅದೆಂಥಹ ಧೈರ್ಯವಂತರೂ ಕಂಗಾಲಾಗುತ್ತಾರೆ.

ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿರುವ ಉಳ್ಳಾಲದ ಕಡಲ ತೀರ ಇನ್ನೂ ಪ್ರವಾಸೋದ್ಯಮ ಅಭಿವೃದ್ಧಿ ಕೇಂದ್ರವಾಗಿ ರೂಪುಗೊಂಡಿಲ್ಲ. ಹೀಗಾಗಿ ಪ್ರವಾಸೋದ್ಯಮ ಕೇಂದ್ರದ ಆಕರ್ಷಣೆ ಪಡೆಯುವ ಮುನ್ನವೇ ಇಲ್ಲಿನ ಕಡಲ ಸೊಬಗನ್ನು ನೋಡಲು ಬರುವ ಅದೆಷ್ಟೋ ಮಂದಿ ಇಲ್ಲಿ ನೀರಾಟಕ್ಕಿಳಿದು ನೀರುಪಾಲಾಗುತ್ತಾರೆ.

ಬೇಸಿಗೆ ಕಾಲದಲ್ಲಿ ಶಾಂತವಾಗಿರುವ ಕಡಲು ಮಳೆಗಾಲದಲ್ಲಿ ಉಗ್ರವಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿ ಜೀವರಕ್ಷಕರಾಗಿ ಕೆಲಸ ಮಾಡುತ್ತಿರುವ ಮೀನುಗಾರರು ಮಳೆಗಾಲದಲ್ಲಿ ಇತ್ತ ಸುಳಿಯುವುದೂ ಇಲ್ಲ. ಪ್ರವಾಸಿಗರೇ ಎಚ್ಚರವಹಿಸಿ ಕಡಲಿಗೆ ಇಳಿಯದಿರುವುದು ಒಳ್ಳೆಯದು.

ಸೆಳೆಯುವ ಬೀಚ್

ಸೆಳೆಯುವ ಬೀಚ್

ಐತಿಹಾಸಿಕವಾಗಿರುವ ಉಳ್ಳಾಲ ದರ್ಗಾ, ಪುರಾಣ ಪುಣ್ಯ ಕ್ಷೇತ್ರ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಸಹಜವಾಗಿಯೇ ಬೀಚಿಗೆ ಭೇಟಿ ಕೊಡುತ್ತಾರೆ. ಬೆಂಗಳೂರು, ಉತ್ತರ ಕರ್ನಾಟಕ ಮತ್ತು ದೇಶಾದ್ಯಂತ ಆಗಮಿಸುವ ಮಂದಿ ಉಳ್ಳಾಲ ಕಡಲಿನ ವೀಕ್ಷಣೆಗೆ ಬಂದೇ ಬರುತ್ತಾರೆ. ವಿದೇಶಿಗರೂ ಕೂಡಾ ಇಲ್ಲಿಗೆ ಆಗಮಿಸುತ್ತಾರೆ.

ಬೇಸಿಗೆಯಲ್ಲಿ ಕಡಲ ಅಬ್ಬರ ಜೋರಾಗದೇ ಇದ್ದರೂ ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಉಳ್ಳಾಲ ದರ್ಗಾಕ್ಕೆ ಭೇಟಿ ನೀಡುವ ಪ್ರವಾಸಿಗರು ಉಳ್ಳಾಲ ಮೊಗವೀರಪಟ್ಣ, ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಸೋಮೇಶ್ವರ ಬೀಚಿನಲ್ಲಿ ಸಮುದ್ರಕ್ಕಿಳಿಯುತ್ತಾರೆ. ಇಲ್ಲಿನ ಕಡಲು ಭಾರೀ ಆಳ ಮತ್ತು ಬೀಚ್ ಬದಿಯ ಮರಳು ಕುಸಿದು ಸಮುದ್ರ ಪಾಲಾಗುವ ಅಪಾಯವಿದೆ.

ನೂರಾರು ಮಂದಿಯ ಪ್ರಾಣ ರಕ್ಷಿಸಿದ ಈಜುಗಾರರು

ನೂರಾರು ಮಂದಿಯ ಪ್ರಾಣ ರಕ್ಷಿಸಿದ ಈಜುಗಾರರು

ಮೊಗವೀರ ಪಟ್ಣದ ಜೀವರಕ್ಷಕ ಈಜುಗಾರರ ಸಂಘ ಮತ್ತು ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಇಲ್ಲಿ ನೂರಾರು ಮಂದಿಯ ಪ್ರಾಣವನ್ನು ರಕ್ಷಿಸಿದ್ದಾರೆ. ಇವರ ಎಚ್ಚರಿಕೆಯ ಹೊರತೂ ಕಡಲಿಗೆ ಇಳಿದು ಅದೆಷ್ಟೋ ಮಂದಿ ನೀರು ಪಾಲಾದವರೂ ಇದ್ದಾರೆ.

ಆದರೆ ಇಂತಹ ಈಜುಗಾರರನ್ನು ಸರಕಾರ ಗುರುತಿಸುವ ಕೆಲಸ ಮಾಡಿಲ್ಲ. ಕನಿಷ್ಟ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕೂಡಾ ಗುರುತಿಸದೇ ಇರುವುದು ನೋವಿನ ಸಂಗತಿ.

ಮೀನುಗಾರಿಕೆ ವೃತ್ತಿ ಮಾಡುವ ಇವರು ಹೆಚ್ಚಿನ ಹೊತ್ತನ್ನು ಕಡಲಲ್ಲೇ ಕಳೆಯುವವರು. ತಮ್ಮ ಪ್ರಾಣದ ಹಂಗನ್ನೂ ಮರೆತು ಇನ್ನೊಬ್ಬರ ಜೀವ ರಕ್ಷಣೆಗಾಗಿ ಧಾವಿಸುತ್ತಾರೆ.

ಪ್ರತೀ ವರ್ಷ 50ಕ್ಕೂ ಹೆಚ್ಚು ಜನರ ರಕ್ಷಣೆ

ಪ್ರತೀ ವರ್ಷ 50ಕ್ಕೂ ಹೆಚ್ಚು ಜನರ ರಕ್ಷಣೆ

ಪ್ರತೀ ವರ್ಷ ಮೊಗವೀರಪಟ್ಣದಲ್ಲಿ 50ಕ್ಕೂ ಹೆಚ್ಚು ನೀರುಪಾಲಾಗುತ್ತಿದ್ದವರನ್ನು ಇಲ್ಲಿನ ಜೀವರಕ್ಷಕರ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಉತ್ಸವ, ಜಾತ್ರೆ ಸಂದರ್ಭದಲ್ಲೂ ಇಲ್ಲಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಆದರೆ ಪೊಲೀಸರು ಇಲ್ಲಿ ಪ್ರವಾಸಿಗರ ಜೀವ ರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ.

"ನೀರುಪಾಲಾದ ಬಳಿಕ ರಕ್ಷಣೆ ಮಾಡಲು ಬಂದರೆ ಪ್ರಯೋಜನವೇನು. ಇಲ್ಲಿ ಕನಿಷ್ಠ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿದೆ," ಎನ್ನುತ್ತಾರೆ ಸ್ಥಳೀಯ ಮೀನುಗಾರ ಮೊಗವೀರಪಟ್ಣದ ಪ್ರಸಾದ್ ಸುವರ್ಣ.

ಸಮುದ್ರಕ್ಕಿಳಿಯದಂತೆ ನಿರ್ಬಂಧ

ಸಮುದ್ರಕ್ಕಿಳಿಯದಂತೆ ನಿರ್ಬಂಧ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚುಗಳಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ ಇತರ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಈ ನಿರ್ಬಂಧಿತ ಆದೇಶವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಕಡಲ ಕಿನಾರೆಗಳಿಗೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ಕಡಲ ಕಿನಾರೆಗಳಲ್ಲಿ ನಿಯೋಜಿಸಿರುವ ಗೃಹ ರಕ್ಷಕ, ಪೊಲೀಸ್ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.

ಅಪಾಯಕಾರಿ ಸ್ಥಳಗಳಿಗೆ ಕಾಲಿಡಬೇಡಿ

ಅಪಾಯಕಾರಿ ಸ್ಥಳಗಳಿಗೆ ಕಾಲಿಡಬೇಡಿ

ಕಡಲ ಕಿನಾರೆಗಳಲ್ಲಿ ಅಪಾಯಕಾರಿ ಸ್ಥಳ ಎಂದು ಗುರುತಿಸಿದ ಪ್ರದೇಶವನ್ನು ಮೀರಿ ಪ್ರವೇಶಿಸುವಂತಿಲ್ಲ. ಈ ನಿರ್ಬಂಧಿತ ಆದೇಶವನ್ನು ಉಲ್ಲಂಘಿಸಿ ಅತಿಕ್ರಮಿಸಿ ಪ್ರವೇಶಿಸಿದಲ್ಲಿ ಅಂತಹವರನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಒಪ್ಪಿಸಲು ಕಡಲ ಕಿನಾರೆಗಳಲ್ಲಿ ನಿಯೋಜಿಸಿದ ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು, ಪ್ರವಾಸಿ ಮಿತ್ರರಿಗೆ ಅಧಿಕಾರವನ್ನು ನೀಡಲಾಗಿದೆ.

ಈ ನಿರ್ಬಂಧಿತ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಆದೇಶವು ಜೂನ್ 30ರಿಂದ 2017 ಆಗಸ್ಟ್ 30ರವರೆಗೂ ಜಾರಿಯಲ್ಲಿರುತ್ತದೆ ಎಂದು ದ ಕ ಜಿಲ್ಲಾಧಿಕಾರಿ ಜಗದೀಶ ಆದೇಶ ಹೊರಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+