ನನಗೆ ಮಂಗಳೂರು ಇಷ್ಟ. ಮಂಗಳೂರು ಹೆವೆನ್ : ರಮ್ಯಾ
ಮಂಗಳೂರು, ಆಗಸ್ಟ್ 26 : 'ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೆ ಐ ಡೋಂಟ್ ಕೇರ್. ನಾನು ಮಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಮಂಗಳೂರು ಇಷ್ಟ. ಮಂಗಳೂರು ಹೆವೆನ್. ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ' ಎಂದು ನಟಿ ಮತ್ತು ಮಾಜಿ ಸಂಸದೆ ರಮ್ಯಾ ಹೇಳಿದರು.
'ಮಂಗಳೂರು ನರಕ' ಎಂದು ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರಮ್ಯಾ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಗುರುವಾರ ಸಂಜೆ ಮಂಗಳೂರಿಗೆ ಬಂದಿದ್ದ ರಮ್ಯಾ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು. ಹಿಂದೂಪರ ಸಂಘಟನೆಗಳ ಸದಸ್ಯರು ಕಪ್ಪು ಬಾವುಟ ಹಿಡಿದು ರಮ್ಯಾ ವಿರುದ್ಧ ಪ್ರತಿಭಟನೆ ನಡೆಸಿದರು.['ಮಂಗಳೂರು ನಿಜ ಸ್ವರ್ಗ, ಐ ಲವ್ ಮಂಗಳೂರು']
ಕದ್ರಿ ಕ್ರಿಕೆಟರ್ಸ್ ವತಿಯಿಂದ ಕದ್ರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಮ್ಯಾ ಅವರ ಮೇಲೆ ಕಲ್ಲು, ಶೂ ಮತ್ತು ಟೊಮ್ಯಾಟೊಗಳನ್ನು ಎಸೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾಯಿತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಆಯೋಜಕರು ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿ ರಮ್ಯಾರನ್ನು ವಾಪಸ್ ಕಳಿಸಿದರು.[ಮಾಜಿ ಸಂಸದೆ ರಮ್ಯಾ ಕಾರಿಗೆ ಹಿಂದೂ ಸಂಘಟನೆಗಳಿಂದ ಮುತ್ತಿಗೆ]
ಕದ್ರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ವಿಮಾನದಲ್ಲಿ ರಮ್ಯಾ ಆಗಮಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಅವರ ವಿರುದ್ಧ ಪ್ರತಿಭಟನೆ ನಡೆಯಿತು. ನಂತರ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಯಿತು....

'ನಾನು ಏನೂ ತಪ್ಪು ಮಾಡಿಲ್ಲ'
'ನಾನು ಏನೂ ತಪ್ಪು ಮಾಡಿಲ್ಲ. ನಾನು ಹೇಳಿದ್ದು ಸರಿಯಾಗಿಯೇ ಇದೆ. ನಾವು ಯಾವತ್ತೂ ಎಲ್ಲರಲ್ಲೂ ಒಳ್ಳೆಯದನ್ನು ನೋಡಬೇಕು, ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಲು ಪ್ರಯತ್ನಿಸಬೇಕು. ನಾನು ಸಾರ್ಕ್ ಕಾರ್ಯಕ್ರಮಕ್ಕೆ ಪಾಕಿಸ್ತಾನಕ್ಕೆ ಹೋದಾಗ ನನ್ನನ್ನು ಅಲ್ಲಿ ಅತ್ಯಂತ ಆದರದಿಂದ ನೋಡಿಕೊಂಡಿದ್ದಾರೆ. ಅದನ್ನು ನಾನು ಹೇಳಿದ್ದೇನೆ' ಎಂದು ರಮ್ಯಾ ಹೇಳಿದರು.

'ಇದರಲ್ಲಿ ಮಾಧ್ಯಮಗಳ ತಪ್ಪಿದೆ'
'ನನ್ನ ಹೇಳಿಕೆ ವಿವಾದವಾಗುವುದರಲ್ಲಿ ಮಾಧ್ಯಮಗಳ ತಪ್ಪಿದೆ. ಕೆಲವು ಲೋಕಲ್ ಚಾನೆಲ್ ಗಳು ಅದನ್ನು ಬೇರೆಯೇ ರೂಪದಲ್ಲಿ ಶೀರ್ಷಿಕೆ ನೀಡಿ ಪ್ರಕಟಿಸಿದವು. ಈ ಬಗ್ಗೆ ನಾನು ಅವರಲ್ಲಿ ಕೇಳಿದಾಗ " ಮೇಡಂ, ಹೆಡ್ಡಿಂಗ್ ಮಾತ್ರ ಆ ತರ ಇದೆ, ಒಳಗೆ ನೀವು ಹೇಳಿದ್ದನ್ನು ಸರಿಯಾಗಿ ಬರೆದಿದ್ದೇವೆ " ಎಂದು ಹೇಳಿದ್ದಾರೆ. ಆದರೆ ಇವತ್ತು ಹೆಡ್ಡಿಂಗ್ ನಿಂದಲೇ ಜನರಲ್ಲಿ ಗೊಂದಲ ಉಂಟಾಗುತ್ತದೆ' ಎಂದರು.

'ಪಾಕಿಸ್ತಾನದಲ್ಲೂ ಒಳ್ಳೆಯವರಿದ್ದಾರೆ'
'ಪಾಕಿಸ್ತಾನದಲ್ಲೂ ಒಳ್ಳೆಯವರಿದ್ದಾರೆ ಎಂಬ ನನ್ನ ಹೇಳಿಕೆಗೆ ನಾನು ಸಂಪೂರ್ಣ ಬದ್ಧಳಾಗಿದ್ದೇನೆ. ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೆ ಐ ಡೋಂಟ್ ಕೇರ್. ನಾನು ಮಂಗಳೂರಿನ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಮಂಗಳೂರು ಇಷ್ಟ. ಮಂಗಳೂರು ಹೆವೆನ್. ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ' ಎಂದರು.

'ಎಲ್ಲರಿಗೂ ಒಳ್ಳೆಯದಾಗಲಿ'
'ಯುವಜನತೆ ಶಿಕ್ಷಣದ ಕಡೆ, ತಮ್ಮ ಭವಿಷ್ಯ ರೂಪಿಸುವ ಬಗ್ಗೆ ಗಮನ ನೀಡಬೇಕು. ಆದರೆ ಇಂತಹ ಚಟುವಟಿಕೆಯಲ್ಲಿ ಅವರನ್ನು ನೋಡುವಾಗ ನೋವಾಗುತ್ತೆ. ಆದರೆ, ನಾನು ಅವರ ಬಗ್ಗೆ ಕೆಟ್ಟದ್ದನ್ನು ಹೇಳುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದೇ ಹಾರೈಸುತ್ತೇನೆ. ಇವತ್ತಲ್ಲ ನಾಳೆ ಎಲ್ಲರಿಗೂ ನನ್ನ ಹೇಳಿಕೆ ಸರಿ ಎಂದು ಗೊತ್ತಾಗುತ್ತೆ' ಎಂದು ಹೇಳಿದರು.

ಪ್ರತಿಭಟನೆ ನಡೆಸಿದವರು ವಶಕ್ಕೆ
ರಮ್ಯಾ ವಿರುದ್ಧ ಪ್ರತಿಭಟನೆ ನಡೆಸಿ, ಮೊಟ್ಟೆ ತೂರಿದವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕಾರ್ಯಕ್ರಮ ಮೊಟಕು
ಕದ್ರಿ ಕ್ರಿಕೆಟರ್ಸ್ ವತಿಯಿಂದ ಕದ್ರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಮ್ಯಾ ಅವರ ಮೇಲೆ ಕಲ್ಲು, ಶೂ ಮತ್ತು ಟೊಮ್ಯಾಟೊಗಳನ್ನು ಎಸೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾಯಿತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಆಯೋಜಕರು ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿದರು.












Click it and Unblock the Notifications