ಬೈದೆತಿ ಮೂರ್ತಿ ಬಳಿ ವಿಕೃತ ವರ್ತನೆ ಖಂಡನೀಯ : ನಳೀನ್ ಕುಮಾರ್ ಕಟೀಲ್
ಮಂಗಳೂರು, ಸೆಪ್ಟೆಂಬರ್ 12 : 'ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡುವ ಘಟನೆ ಕರಾವಳಿಯಲ್ಲಿ ಆಗಾಗ ನಡೆಯುತ್ತಿದೆ. ತುಳುನಾಡಿನ ಆರಾಧ್ಯ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಮೂರ್ತಿ ಬಳಿ ವಿಕೃತ ವರ್ತನೆ ತೋರಿ, ಫೋಟೊ ಅಪ್ಲೋಡ್ ಮಾಡಿರುವುದು ಆಘಾತಕಾರಿ ವಿಷಯವಾಗಿದೆ' ಎಂದು ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಇಂದು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಸಂಸದರು, 'ಈಗಾಗಲೇ ಪೋಲೀಸರು ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಹೀನ ಕೃತ್ಯ ಎಸಗಿದ ಮತಾಂಧ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

''ತಾಯಿ ದೇಯಿ ಬೈದೆತಿ ಮೂರ್ತಿ ಬಳಿ ಅನಾಗರಿಕ ವರ್ತನೆ ತೋರಿದ ಕೃತ್ಯವನ್ನು ಆಸ್ತಿಕರು ಸಹಿಸಲು ಸಾಧ್ಯವಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜದ ಶಾಂತಿ ಕದಡುವ ಇಂತಹ ಕೃತ್ಯ ಮರುಕಳಿಸದಂತೆ ಪೋಲೀಸರು ಎಚ್ಚರ ವಹಿಸಬೇಕೆಂದು' ಹೇಳಿದರು.
'ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡುವ ಘಟನೆ ಕರಾವಳಿಯಲ್ಲಿ ಆಗಾಗ ನಡೆಯುತ್ತಿದೆ. ಪ್ರಗತಿಪರರ ಹೆಸರಿನಲ್ಲಿ ಕೆಲವರು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾರಣ ಮತಾಂಧರು ನಿರಾಂತಕವಾಗಿ ಇಂತಹ ಕೃತ್ಯ ಎಸಗುತ್ತಿದ್ದಾರೆ' ಎಂದು ಆರೋಪಿಸಿದರು.
ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮ ಸ್ಥಳವಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದೇದಿ ಔಷಧೀಯ ವನವಿದೆ. ಈ ವನದಲ್ಲಿರುವ ದೇಯಿ ಬೈದೇದಿಯವರ ವಿಗೃಹಕ್ಕೆ ಯುವಕನೋರ್ವ ಅವಮಾನ ಮಾಡಿದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications