ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಯುಪಿಎ ಸರ್ಕಾರದ ಕೂಸು: ನಳಿನ್ ಕುಮಾರ್ ಕಟೀಲ್
ಮಂಗಳೂರು ಜನವರಿ 16: ವಿಜಯ ಬ್ಯಾಂಕ್ ನೊಂದಿಗೆ ಬ್ಯಾಂಕ್ ಆಫ್ ಬರೋಡಾ ವಿಜಯಾ ಬ್ಯಾಂಕ್ ವಿಲೀನಗೊಳಿಸುವ ಬಗ್ಗೆ ನನಗೆ ನೋವಿದೆ. 'ವಿಜಯಾ' ಎಂಬ ಹೆಸರು ಉಳಿಸಲು ತಾನು ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯಾ ಬ್ಯಾಂಕ್ ವಿಲೀನದ ವಿರುದ್ಧ ಧ್ವನಿ ಎತ್ತುವ ಕಾಂಗ್ರೆಸ್ಸಿಗರು ಹಣಕಾಸು ಸಮಿತಿಯ ಅಧ್ಯಕ್ಷ ವೀರಪ್ಪ ಮೊಯ್ಲಿ ಏಕೆ ಈ ಬಗ್ಗೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ಬ್ಯಾಂಕ್ ವಿಲೀನ ಪ್ರಕ್ರಿಯೆ ಯುಪಿಎ ಸರ್ಕಾರದ ಕೂಸು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ಅನುಷ್ಠಾನಗೊಳಿಸುತ್ತಿದೆ ಅಷ್ಟೆ ಎಂದು ಅವರು ಸ್ಪಷ್ಟ ಪಡಿಸಿದರು. ವಿಲೀನಗೊಳಿಸುವ ಮುನ್ನ ಹಣಕಾಸು ಸಮಿತಿಯ ಮುಂದೆ ಪ್ರಸ್ತಾವವನ್ನು ಕಳುಹಿಸಲಾಗುತ್ತದೆ.

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಂಸದ ಎಂ. ವೀರಪ್ಪ ಮೊಯ್ಲಿ ಈ ಸಮಿತಿಯ ಅಧ್ಯಕ್ಷರು. ಸಮಿತಿಯಲ್ಲಿದ್ದ ಇತರ ಇಬ್ಬರು ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಕೂಡ ಮೊಯ್ಲಿ ಅದನ್ನು ವಿರೋಧಿಸಿಲ್ಲ ಎಂದು ಅವರು ತಿಳಿಸದರು.
ಇದನ್ನೆಲ್ಲಾ ಮರೆಮಾಚಿ ತನ್ನ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಕೂಗಾಡುವ ಕಾಂಗ್ರೆಸ್ಸಿಗರು ಮೊದಲು ವೀರಪ್ಪ ಮೊಯ್ಲಿಯ ಮೌನದ ಬಗ್ಗೆ ಉತ್ತರಿಸಲಿ ಎಂದು ಅವರು ಹೇಳಿದರು .
ಮುಲ್ಕಿ ಸುಂದರ ರಾಮ ಶೆಟ್ಟಿಯ ಹೆಸರನ್ನು ರಸ್ತೆಗಿಡುವ ವಿಚಾರದಲ್ಲಿ ಜಾತಿ ರಾಜಕೀಯ ಮಾಡಿದವರು ಯಾರು ? ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಕೇವಲ ಚುನಾವಣೆಯ ದೃಷ್ಟಿಯಿಂದ ಇಂತಹ ನಾಟಕಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಫೆಬ್ರವರಿ ಕೊನೆಯ ವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಆಗಮಿಸಿ ತಲಪಾಡಿ-ಕುಂದಾಪುರ ಹೆದ್ದಾರಿ ಮತ್ತು ತೊಕ್ಕೊಟ್ಟು-ಪಂಪ್ವೆಲ್ ಮೇಲ್ಸೇತುವೆ ಉದ್ಘಾಟಿಸಲಿದ್ದಾರೆ.
ಅಲ್ಲದೆ ಕುಲಶೇಖರ-ಕಾರ್ಕಳ ಚತುಷ್ಪಥ ರಸ್ತೆ, ಮುಲ್ಕಿ, ಕಟೀಲು, ಬಜ್ಪೆ, ಪೊಳಲಿ, ಬಿ.ಸಿ.ರೋಡು, ಮೆಲ್ಕಾರು, ಮುಡಿಪು, ಕೊಣಾಜೆ, ಕೆ.ಸಿ.ರೋಡ್ ಸಂಪರ್ಕಿಸುವ 'ಭಾರತ್ ಮಾಲಾ' ಯೋಜನೆ ಹಾಗೂ ಕೂಳೂರು ಜಟ್ಟಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು.
ಅಡ್ಡಹೊಳೆ-ಬಿಸಿರೋಡ್ ಕಾಮಗಾರಿಯು ತಾಂತ್ರಿಕ ಮತ್ತು ಕಾನೂನಾತ್ಮಕ ಕಾರಣದಿಂದ ಎರಡು ತಿಂಗಳು ಸ್ಥಗಿತಗೊಂಡಿತ್ತು. ಈ ಮಧ್ಯೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ ಆ್ಯಂಡ್ ಟಿ ಕಂಪೆನಿಯೊಂದಿಗೆ ಚರ್ಚೆ ನಡೆಸಿ ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದಾರೆ . ಅದರಂತೆ 2 ವಾರದೊಳಗೆ ಮತ್ತೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಯುವ ಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ವತಿಯಿಂದ ಜ. 21ರಂದು ನಗರದ ಕೆನರಾ ಕಾಲೇಜಿನ ಮೈದಾನದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications