ಚುನಾವಣೆ ಸ್ಪರ್ಧಿಸಲು ಮೋದಿ ಅನರ್ಹ: ಪೂಜಾರಿ
ಮಂಗಳೂರು, ಮಾ.28: ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ವಿರುದ್ಧ ವಾಕ್ಸಮರ ನಡೆಸಲು ಪೂರ್ವ ತಯಾರಿಯೊಂದಿಗೆ ಬಂದಿದ್ದ ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು.
2002ರ ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ದಳ(SIT) ಹಾಗೂ ಕೋರ್ಟಿನಿಂದ ಕ್ಲೀನ್ ಚಿಟ್ ಸಿಕ್ಕಿದ್ದರೂ ಪೂಜಾರಿ ಅವರ ಪ್ರಕಾರ ನರೇಂದ್ರ ಮೋದಿ ಅವರು ಚುನಾವಣೆಗೆ ಸ್ಪರ್ಧಿಸಲು ಕಾನೂನಿನ ರೀತಿಯಲ್ಲಿ ಅವಕಾಶವಿಲ್ಲವಂತೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ ಅವರು ಮೋದಿ ವಿರುದ್ಧ ದನಿ ಎತ್ತಿದರು. ಮೋದಿ ಅವರ ನೈಜ ವ್ಯಕ್ತಿತ್ವವನ್ನು ಮುಚ್ಚಿಡಲಾಗುತ್ತಿದೆ ಜನರಿಗೆ ಕಾಣುತ್ತಿರುವುದು ಮುಖವಾಡ ಮಾತ್ರ. ಗುಜರಾತಿನ ಅಭಿವೃದ್ಧಿ ಬಗ್ಗೆ ಸುಳ್ಳು ಮಾಹಿತಿ ನೀಡಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದರು. ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಅವರು ಸುದ್ದಿಗೋಷ್ಠಿ ವಿವರ ಮುಂದಿದೆ: ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು

ರೈತರಿಗೆ ಸರಿಯಾದ ವಿದ್ಯುತ್ ಸಿಕ್ಕಿಲ್ಲ
ಗುಜರಾತಿನ ರೈತರಿಗೆ ಸರಿಯಾದ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ರೈತರ ಜಮೀನುಗಳನ್ನು ದೈತ್ಯ ಉದ್ಯಮಿಗಳಿಗೆ ನೀಡಿ ಗಂಟು ಮಾಡುತ್ತಿದ್ದಾರೆ. ಸುಮಾರು 60,000ಕ್ಕೂ ಅಧಿಕ ಸಣ್ಣ ಉದ್ದಿಮೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಇದನ್ನು ಅಭಿವೃದ್ಧಿ ಎಂದು ದೇಶದ ಮುಂದೇ ತೋರಿಸುವ ಧೈರ್ಯ ಮೋದಿಗಿದೆಯೇ?

ನೈತಿಕ ಹೊಣೆ ಹೊತ್ತು ಮೋದಿ ಹಿಂದೆ ಸರಿಯಲಿ
ಗೋಧ್ರೋತ್ತರ ಹತ್ಯಾಕಾಂಡದ ನೈತಿಕ ಹೊಣೆ ಹೊತ್ತು ಮೋದಿ ಚುನಾವಣೆಗೆ ಸ್ಪರ್ಧಿಸದೆ ಹಿಂದೆ ಸರಿಯಬೇಕಿತ್ತು. ಆದರೆ, ಈಗಲೂ ಕಾಲ ಮಿಂಚಿಲ್ಲ. ಜನತೆಗೆ ಸತ್ಯ ಅರಿವಾಗಲಿದ್ದು, ಮೋದಿ ಎಂದಿಗೂ ಪ್ರಧಾನಿ ಪಟ್ಟಕ್ಕೇರುವುದು ಸಾಧ್ಯವಿಲ್ಲ ಎಂದು ಪೂಜಾರಿ ಕಿಡಿಕಾರಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ
ಒಬ್ಬ ವ್ಯಕ್ತಿಯನ್ನು ಪ್ರಧಾನಿ ಎಂದು ಬಿಂಬಿಸುತ್ತಾ ಉತ್ತಮ ಅಡಳಿತ ನೀಡುತ್ತೇವೆ ಎಂಬ ಭರವಸೆ ನೀಡದೆ ಮೋದಿ ಪ್ರಧಾನಿಯಾಗುವುದು ನಮ್ಮ ಗುರಿ ಎನ್ನುವ ಮೂಲಕ ಬಿಜೆಪಿ ಅಭ್ಯರ್ಥಿಗಳು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದ್ದಾರೆ. ರಾಷ್ಟ್ರದ ಚುನಾವಣಾ ವ್ಯವಸ್ಥೆ, ಸಂವಿಧಾನದ ನಿಯಮ, ಪ್ರಜಾಪ್ರಭುತ್ವದ ಮಹತ್ವದ ಪಾಠ ಬಿಜೆಪಿಗೆ ಬೇಕಾಗಿದೆ ಎಂದಿದ್ದಾರೆ.

ಸೋನಿಯಾ ಮಹಾನ್ ನಾಯಕಿ
ಬ್ರಾಹ್ಮಣರಿಗೂ ಮೀಸಲಾತಿ ಕಲ್ಪಿಸಿದ ಮಹಾನ್ ನಾಯಕಿ ಸೋನಿಯಾ ಗಾಂಧಿ, ಖಾಸಗಿ ರಂಗದಲ್ಲೂ ಮೀಸಲಾತಿ ನೀಡುವ ಯೋಜನೆ ಮಹತ್ವದ್ದಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಯನ್ನು ಈಡೇರಿಸುವ ಭರವಸೆಯನ್ನು ಜನತೆಗೆ ನೀಡುತ್ತೇನೆ. ಈ ಬಾರಿಯ ಚುನಾವಣೆ ಉದ್ಯಮಿಗಳು ಹಾಗೂ ಜನ ಸಮಾನ್ಯರ ನಡುವಿನ ಸಮರವಾಗಿದೆ ಎಂದರು.












Click it and Unblock the Notifications