ಗಾಂಜಾ ಮಾರಾಟ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ
ಮಂಗಳೂರು, ಜನವರಿ 14: ಮಂಗಳೂರು ನಗರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ನೀಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 8 ಮಂದಿ ಯುವಕರನ್ನು ಗಾಂಜಾ ಸಮೇತ ಬಂಧಿಸಿದ್ದಾರೆ. ಮಂಗಳೂರು ನಗರದ ಮೋರ್ಗನ್ ಗೇಟ್ ಬಳಿಯ ಮೈದಾನದಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಹಾಗೂ ಸೇವನೆ ಮಾಡುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.
ದಾಳಿ ಸಂದರ್ಭದಲ್ಲಿ 8 ಮಂದಿ ಯುವಕರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಕ್ಷಯ್ ಕೆ ಪ್ರಸಾದ್ ಕೇರಳ ಕೊಲ್ಲಂ ನಿವಾಸಿ (22), ಮಂಗಳೂರಿನ ಕಣ್ಣೂರು ನಿವಾಸಿ ಜಾಫರ್ (22), ಕೇರಳದ ಕಣ್ಣೂರು ನಿವಾಸಿ ನಿಮಿಲ್ (21) , ಅಮಿತ್ ಶ್ರೀವತ್ಸನ್ (21), ಅಶ್ವಿನ್, (21), ಕೇರಳದ ಕೋಯಿಕೋಡ್ ನಿವಾಸಿ ಮೊಹಮ್ಮದ್ ಅಮೀರ್ (22) ಕೇರಳದ ಪತ್ತನತಿಟ್ಟಂ ನಿವಾಸಿ ಅಕಾಶ್ ಎಸ್ ನಾಯರ್, (23), ಹಾಗು ಕೇರಳದ ಕಣ್ಣೂರು ನಿವಾಸಿ ಅಕ್ಷಯ್, (22) ಎಂದು ಗುರುತಿಸಲಾಗಿದೆ.

ಬಂಧಿತರಿಂದ 500 ಗ್ರಾಂ ಗಾಂಜಾ, 8 ಮೊಬೈಲ್ ಫೋನ್ ಗಳು, ನಗದು, 2 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ವಿದ್ಯಾರ್ಥಿಗಳು ಕೇರಳದಿಂದ ಗಾಂಜಾವನ್ನು ಖರೀದಿ ಮಾಡಿ ತಂದು ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.
ಬಂಧಿತ ಆರೋಪಿಗಳ ಪೈಕಿ 7 ಮಂದಿ ಮಂಗಳೂರಿನ ಎರಡು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಹಾಗೂ ಒಂದು ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.












Click it and Unblock the Notifications