ಉಡುಪಿ ಮುದ್ದಣ ಮಂಟಪದಲ್ಲಿ ಕೊಂಕಣಿ ಸಾಹಿತ್ಯ ಸಮಾವೇಶ
ಉಡುಪಿ, ನ.25: ಪ್ರಪ್ರಥಮ ಬಾರಿಗೆ ಕೊಂಕಣಿ ಭಾಷೆಯನ್ನಾಡುವ ನಾಡಿನ ಸುಮಾರು 30ಕ್ಕೂ ಅಧಿಕ ಪಂಗಡಗಳ ಮಹಿಳೆಯರ ಸಾಹಿತ್ಯ ಮತ್ತು ಸಂಸ್ಕೃತಿ ಸಮಾವೇಶ ಉಡುಪಿಯಲ್ಲಿ ಆಯೋಜನೆ ಗೊಂಡಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಈ ವಿಶಿಷ್ಟ ಕಾರ್ಯಕ್ರಮದ ಆಯೋಜನೆಯ ಹೊಣೆ ಹೊತ್ತಿದ್ದಾರೆ.
ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ ಸಂಧ್ಯಾ ಎಸ್. ಪೈ ಹಾಗೂ ಕಾರ್ಯಾಧ್ಯಕ್ಷೆ ಲಕ್ಷ್ಮೀ ಎ.ರಾವ್ ಅವರು ಈ ಸಮಾವೇಶದ ಬಗ್ಗೆ ವಿವರಣೆ ನೀಡಿದರು. ಕರ್ನಾಟಕ ರಾಜ್ಯ ಕೊಂಕಣಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ಸಮಾವೇಶ 'ಕೊಂಕಣಿ ಮಾತಾ' ನ.28 ಮತ್ತು 29ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದೆ ಎಂದರು.

ನ.28ರಂದು ಸಂಜೆ 5 ಗಂಟೆಗೆ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಟಿ ನೀತು ಹಾಗೂ ಐಶ್ವರ್ಯನಾಗ್ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾದಂಬರಿಗಾರ್ತಿ ಹಾಗೂ ಅಕಾಡಮಿ ಪ್ರಶಸ್ತಿ ವಿಜೇತ ಲೇಖಕಿ ಪದ್ಮಾ ಶೆಣೈ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ನ. 28ರಂದು ಮಧ್ಯಾಹ್ನ ಆಕರ್ಷಕ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಮೆರವಣಿಗೆಯನ್ನು 3:15ಕ್ಕೆ ಪರ್ಯಾಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ರಾಜಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಮಾತೃ ಭಾಷೆಯ 30 ಪಂಗಡಗಳ 70ಕ್ಕೂ ಅಧಿಕ ಪ್ರತಿಭಾನಿತ್ವ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗುವುದು. ನ.29ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಧ್ಯಾ ಪೈ ನುಡಿದರು.












Click it and Unblock the Notifications