ಅಪರೂಪದ ಸಮಸ್ಯೆ; ವ್ಯಕ್ತಿಗೆ ಮರು ಜೀವ ಕೊಟ್ಟ ಕೆಎಂಸಿ ಆಸ್ಪತ್ರೆ
ಮಂಗಳೂರು, ಸೆಪ್ಟೆಂಬರ್ 23; ತೀವ್ರ ಉಸಿರಾಟದ ತೊಂದರೆಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ 54 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮೂಲಕ ಮರುಜೀವ ನೀಡುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ಯಶಸ್ವಿಯಾಗಿದೆ. ರೋಗಿ ಅತ್ಯಂತ ಅಪರೂಪದ ಮತ್ತು ಗಂಭೀರ ಸಮಸ್ಯೆ ಎದುರಿಸುತ್ತಿದ್ದು ಚಿಕಿತ್ಸೆ ನೀಡುವುದು ಸವಾಲಾಗಿತ್ತು.
ಹೊನ್ನಾವರದ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ರೋಗಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ರೋಗಿಯ ಆರೋಗ್ಯ ಸುಧಾರಿಸಲೇ ಇಲ್ಲ, ಬದಲಿಗೆ ಅವರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತಲೇ ಸಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲ್ಟಂಟ್ ಡಾ. ಹರೂನ್ ಹೆಚ್, ಇಂಟೆನ್ಸಿವಿಸ್ಟ್ ಡಾ. ದತ್ತಾತ್ರಯ ಪ್ರಭು ಹಾಗೂ ತುರ್ತು ಚಿಕಿತ್ಸಾ ತಂಡ ಒಟ್ಟಾಗಿ ರೋಗಿಯ ಆರೋಗ್ಯ ಸುಧಾರಣೆಗೆ ಅಗತ್ಯವಿರುವ ಚಿಕಿತ್ಸೆ ನೀಡಿತು.

ಈ ಕುರಿತು ಡಾ. ಹರೂನ್ ಹೆಚ್ ಮಾಹಿತಿ ನೀಡಿದ್ದಾರೆ, "ಕೆಎಂಸಿ ಆಸ್ಪತ್ರೆಗೆ ದಾಖಲಾದಾಗ ರೋಗಿಯು ಅತಿ ವೇಗವಾಗಿ ಉಸಿರಾಡುತ್ತಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿತ್ತು. ಇದರೊಂದಿಗೆ ಅವರು ತೀವ್ರ ಸ್ವರೂಪದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದುದರಿಂದ ಅದಕ್ಕೆ ಸಂಬಂಧಿಸಿದಂತೆಯೂ ಚಿಕಿತ್ಸೆ ನೀಡಲಾಯಿತು" ಎಂದರು.
"ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಸೈಟೋಕಿನ್ ಸ್ಟಾರ್ಮ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿದ್ದು, ವೆಂಟಿಲೇಟರ್ ನೆರವಿನ ಅಗತ್ಯ ಕೂಡ ಇತ್ತು. ನಿರಂತರವಾದ ಚಿಕಿತ್ಸೆ ಮತ್ತು ವಿಶೇಷ ಕಾಳಜಿಯಯಿಂದಾಗಿ ರೋಗಿಯನ್ನು ವೆಂಟಿಲೇಟರ್ ಸಪೋರ್ಟ್ನಿಂದ ಹೊರಗೆ ಕರೆತರಲಾಯಿತು. ಆದರೆ ಕೋವಿಡ್ನಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ, ಆಹಾರ, ನೀರು ನುಂಗಲು ಆಗದೆ ಬಹಳ ಕಷ್ಟ ಅನುಭವಿಸುತ್ತಿದ್ದರು" ಎಂದು ಹೇಳಿದರು.
ಕೆಎಂಸಿ ಆಸ್ಪತ್ರೆ ಕನ್ಸಲ್ಟಂಟ್ (ನ್ಯೂರೋಲಾಜಿಸ್ಟ್) ಡಾ. ರೋಹಿತ್ ಪೈ ಮಾತನಾಡಿ, "ನೀರನ್ನು ಕುಡಿಯಲು ಅಥವಾ ನುಂಗಲು ತೊಂದರೆಯಾಗುತ್ತಿದೆ ಎಂದು ರೋಗಿಯು ನಮ್ಮ ಬಳಿ ಹೇಳಿದಾಗ ನರಸ್ನಾಯುವಿನ ಸಮಸ್ಯೆ ಇರಬಹುದು ಎಂದು ನಾವು ಊಹಿಸಿದೆವು. ಅಲ್ಲದೆ ಅವರು ಕೋವಿಡ್ ಸಂಬಂಧಿ ಮೈಸ್ತೇನಿಯಾ ಗ್ರಾವಿಸ್ನಿಂದ ಕೂಡ ಬಳಲುತ್ತಿದ್ದರು" ಎಂದು ತಿಳಿಸಿದರು.
"ಹೀಗಾಗಿ ಮೈಸ್ತೇನಿಯಾ ಗ್ರಾವಿಸ್ ಸಮಸ್ಯೆಗೆ ಚಿಕಿತ್ಸೆ ನೀಡಲು ಆರಂಭಿಸಿದಾಗ ರೋಗಿಯಲ್ಲಿ ಸಾಕಷ್ಟು ಚೇತರಿಕೆ ಲಕ್ಷಣಗಳು ಕಂಡುಬಂದವು. ಅವರಿಗೆ ನೀಡುತ್ತಿದ್ದ ಆಮ್ಲಜನಕದ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಲಾಯಿತು. ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂತು ಮತ್ತು ತಮ್ಮ ಸ್ಪೋ 2 (ಆಕ್ಸಿಜನ್ ಸ್ಯಾಚುರೇಷನ್) ಅನ್ನು ಕನಿಷ್ಠ ಆಮ್ಲಜನಕದೊಂದಿಗೆ ನಿರ್ವಹಿಸಲು ಆರಂಭಿಸಿದರು" ಎಂದು ವಿವರಣೆ ನೀಡಿದರು.
"ಕೋವಿಡ್ ಗುಣವಾದ ನಂತರ ಕಾಣಿಸಿಕೊಳ್ಳುವ ಸೋಂಕಿನಿಂದ ಉಂಟಾಗುವ ನರಮಂಡಲ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಈ ರೀತಿಯ ಇನ್ನೂ 2 ಕೇಸ್ಗಳು ಐಸಿಯುನಲ್ಲಿ ಇದ್ದವು. ವೆಂಟಿಲೇಟರ್ನಲ್ಲಿ ಇರುವ ರೋಗಿಗಳಲ್ಲಿ ಇಂತಹ ಸಮಸ್ಯೆಗಳ ಇರುವಿಕೆಯನ್ನು ಕಂಡುಹಿಡಿಯುವುದು ಕಷ್ಟದ ಕೆಲಸ. ಆದರೆ, ಇಲ್ಲಿ ಗಮನಿಸಬೇಕಾಗಿರುವ ಪ್ರಮುಖ ಅಂಶವೇನೆಂದರೆ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆ ಇರುವುದು ದೃಢಪಟ್ಟ ಬಳಿಕ ರೋಗಿಗೆ ಅಗತ್ಯವಿದ್ದ ಎಲ್ಲ ರೀತಿಯ ಚಿಕಿತ್ಸೆ ನೀಡಲಾಯಿತು" ಎಂದು ಕೆಎಂಸಿಯ ತುರ್ತು ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರಯ ಪ್ರಭು ಹೇಳಿದರು.
ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥರು ಹಾಗೂ ವೈದ್ಯಕೀಯ ಅಧೀಕ್ಷಕರಾಗಿರುವ ಡಾ. ಆನಂದ್ ವೇಣುಗೋಪಾಲ್ ಮಾತನಾಡಿ, "ರೋಗಿಯು ಕೋವಿಡ್ಗೆ ಸಂಬಂಧಿಸಿದ ಅತ್ಯಂತ ಅಪರೂಪದ ಮತ್ತು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದುದರಿಂದ ಇದೊಂದು ಕಠಿಣ ಮತ್ತು ಸವಾಲಿನ ಕೇಸ್ ಆಗಿತ್ತು. ರೋಗಿಗೆ ಐಸಿಯು ಮತ್ತು ವೆಂಟಿಲೇಟರ್ ನೆರವಿನ ಅಗತ್ಯವಿತ್ತು. ರೋಗಿಯು ಎದುರಿಸುತ್ತಿದ್ದ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಗುರುತಿಸಿ, ಕೂಡಲೇ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಅಪಾಯದಿಂದ ಪಾರುಮಾಡಿದ ಕೆಎಂಸಿ ಆಸ್ಪತ್ರೆಯ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಸಂಪೂರ್ಣ ತಂಡವನ್ನು ನಾನು ಅಭಿನಂದಿಸುತ್ತೇನೆ" ಎಂದರು.
ರೋಗಿಯು ಯಶಸ್ವಿಯಾಗಿ ಡಿಸ್ಚಾರ್ಜ್ ಆಗಿದ್ದು, ಮುಂದಿನ ಕೆಲವು ದಿನಗಳ ಕಾಲ ನಮ್ಮ ನಿರಂತರ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ರೋಗಿಯನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಅವರ ಪ್ರಾಣ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಎದುರಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದರ ಮಹತ್ವವನ್ನು ಈ ಪ್ರಕರಣ ತೋರಿಸಿಕೊಟ್ಟಿದೆ.












Click it and Unblock the Notifications