ಧರ್ಮಗಳ ಆಧಾರದಲ್ಲಿ ಆಡಳಿತ ನಡೆಸುವುದು ಈಚೆಗೆ ರೂಢಿಯಾಗಿದೆ: ಕನ್ಹಯ್ಯ ಕುಮಾರ್
ಮಂಗಳೂರು, ಆಗಸ್ಟ್ 11: "ದೇಶಭಕ್ತಿ ಹೆಸರಿನಲ್ಲಿ ಪ್ರಜಾಪ್ರಭುತ್ವ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ದೇಶದ್ರೋಹ" ಎಂದು ಜೆಎನ್ ಯು ವಿದ್ಯಾರ್ಥಿ ಸಂಘ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.
"ಕವಲು ದಾರಿಯಲ್ಲಿ ಭಾರತದ ಯುವಜನರು" ಎಂಬ ವಿಷಯದ ಕುರಿತು ಮಾತನಾಡಿದ ಕನ್ಹಯ್ಯ ಕುಮಾರ್, "ದೇಶದ ಮೇಲೆ ಪ್ರೀತಿ ಇದ್ದರೆ ಅಶಕ್ತರಲ್ಲಿ ಪ್ರಶ್ನೆ ಎತ್ತುವುದಲ್ಲ, ಬದಲಾಗಿ ಬಲಾಢ್ಯರಲ್ಲಿ ಪ್ರಶ್ನೆ ಎತ್ತಬೇಕಿದೆ. ಪ್ರಜಾಪ್ರಭುತ್ವ ಎನ್ನುವುದು ಮೊದಲು ನಮ್ಮಲ್ಲಿ, ನಮ್ಮ ಮನೆಯಲ್ಲಿ ಇರಬೇಕು. ಆಗ ಮಾತ್ರ ತಳಮಟ್ಟದಲ್ಲಿ ಸುಧಾರಣೆ ಸಾಧ್ಯ" ಎಂದು ಹೇಳಿದರು.

"ಧರ್ಮಗಳ ಆಧಾರದಲ್ಲಿ ಆಡಳಿತ ನಡೆಸುವುದನ್ನು ಇತ್ತೀಚೆಗೆ ರೂಢಿಸಿಕೊಳ್ಳಲಾಗಿದೆ. ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಆಶಾವಾದಿಗಳಾಗಿದ್ದು, ಇತಿಹಾಸದ ಸತ್ಯಗಳೊಂದಿಗೆ ವಾಸ್ತವವನ್ನು ಯುವ ಜನರ ಮುಂದಿಡುವ ಕಾರ್ಯವನ್ನು ನಾವಿಂದು ಮಾಡಬೇಕಾಗಿದೆ" ಎಂದು ಅವರು ಕರೆ ನೀಡಿದರು.

ಈ ಮಧ್ಯೆ ಕನ್ಹಯ್ಯ ಕುಮಾರ್ ವಿರುದ್ಧ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಸಂಘಟನೆಗಳ 39 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ 5 ಮಂದಿ ಎಬಿವಿಪಿ ಕಾರ್ಯಕರ್ತರು ಕನ್ಹಯ್ಯ ಕುಮಾರ್ ವಿರುದ್ಧ ಘೋಷಣೆ ಕೂಗಿದರು. ಸಭಾಂಗಣದ ಹೊರಗೆ ಪ್ರತಿಭಟನೆಗೆ ಮುಂದಾದ ಹಿಂದೂ ಜಾಗರಣಾ ವೇದಿಕೆ ಹಾಗೂ ರಾಮಸೇನೆಯ ಸುಮಾರು 39 ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದರು.












Click it and Unblock the Notifications