ಗುಂಡ್ಯಾ ಅರಣ್ಯ ಪ್ರದೇಶದಲ್ಲಿ ಫಾರೆಸ್ಟ್ ಗಾರ್ಡ್ ಮೇಲೆ ದಾಳಿ ನಡೆಸಿದ ಕಾಡುಗಳ್ಳರು
ಮಂಗಳೂರು, ಆಗಸ್ಟ್ 02: ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದ ಲಾರಿಯನ್ನು ತಡೆದ ಫಾರೆಸ್ಟ್ ಗಾರ್ಡ್ ಗೆ ಕಾಡುಗಳ್ಳರು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯಾ ಎಂಬಲ್ಲಿ ನಡೆದಿದೆ.
ನಿನ್ನೆ ಬುಧವಾರ ತಡರಾತ್ರಿ ಗುಂಡ್ಯಾ ಚೆಕ್ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಗಾರ್ಡ್ ರಾಜೇಶ್ ಅಕ್ರಮವಾಗಿ ಬೆಲೆಬಾಳುವ ಮರ ಸಾಗಾಟ ನಡೆಸುತ್ತಿದ್ದ ಲಾರಿಯನ್ನು ತಡೆಹಿಡಿದಿದ್ದರು.
ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಮರಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆ ಪತ್ರಗಳನ್ನು ರಾಜೇಶ್ ಕೇಳಿದ ಸಂದರ್ಭದಲ್ಲಿ ಲಾರಿಯಲ್ಲಿದ್ದ ಮೂವರು ಕಾಡುಗಳ್ಳರು ರಾಜೇಶ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಕಲ್ಲಿನಿಂದ ಹಾಗು ರಾಡ್ ಗಳಿಂದ ಗಂಭೀರ ಹಲ್ಲೆ ನಡೆಸಿ ಲಾರಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಹಲ್ಲೆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ರಾಜೇಶ್ ಅವರ ಸಮವಸ್ತ್ರವನ್ನು ಮರಗಳ್ಳರು ಹರಿದು ಹಾಕಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರಾಜೇಶ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮರಗಳ್ಳರ ಹಲ್ಲೆಯಿಂದ ಗಾಯಗೊಂಡ ಫಾರೆಸ್ಟ್ ಗಾರ್ಡ್ ಅವರನ್ನು ನೋಡಲು ಕೆಳ ಹಂತದ ಅಧಿಕಾರಿಗಳು ಬಿಟ್ಟರೆ ಹಿರಿಯ ಅರಣ್ಯಾಧಿಕಾರಿಗಳು ಯಾರೊಬ್ಬರೂ ಆಸ್ಪತ್ರೆ ಕಡೆ ತಲೆ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಲಾಗಿದೆ. ಹಿರಿಯ
ಅಧಿಕಾರಿಗಳ ಈ ನಿರ್ಲಕ್ಷ ಅರಣ್ಯ ಇಲಾಖೆಯ ಸಿಬ್ಬಂದಿಗಳ ಅಸಮಾಧಾನಕ್ಕೂ ಕಾರಣವಾಗಿದೆ.












Click it and Unblock the Notifications