ಮಂಗಳೂರು ಜೈಲೊಳಗೆ ಮಾರಕಾಸ್ತ್ರ ಎಸೆದವರು ಸಿಕ್ಕಿಬಿದ್ರು
ಮಂಗಳೂರು, ನವೆಂಬರ್ 17 : ಮಂಗಳೂರು ಜೈಲಿನಲ್ಲಿ ನಡೆದ ಕೈದಿಗಳ ಹತ್ಯೆ ಪ್ರಕರಣಕ್ಕೆ ಸಹಕಾರ ನೀಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಜೈಲಿನಲ್ಲಿರುವ ಕೈದಿಗಳಿಗೆ ಆಯುಧಗಳನ್ನು ಪೂರೈಕೆ ಮಾಡಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಆಕಾಶಭವನ ನಿವಾಸಿ ಮಹೇಶ್ ಕುಮಾರ್ (35), ಲತೀಶ್ (23), ಬಂಟ್ವಾಳದ ಸತೀಶ್ ಆಚಾರ್ಯ (42) ಮತ್ತು ಕಮಲಾಕ್ಷ ಪೂಜಾರಿ (42) ಬಂಧಿತ ಆರೋಪಿಗಳು. [ಮಂಗಳೂರು ಜೈಲೊಳಗೆ ಆಯುಧಗಳು ಬಂದಿದ್ದು ಹೇಗೆ?]

ಬಂಧಿತ ಆರೋಪಿಗಳ ಪೈಕಿ ಮಹೇಶ್ ಕುಮಾರ್ ಜೈಲಿನ ಗೋಡೆಯ ಮೂಲಕ ಆಯುಧವನ್ನು ಎಸೆದಿದ್ದು, ಈತನ ಜತೆಗೆ ಬಂದಿದ್ದ ಲತೀಶ್ ಆತನಿಗೆ ಸಹಕಾರ ನೀಡಿದ್ದ. ಈ ಆಯುಧವನ್ನು ಬಳಸಿ ಕೈದಿ ಮಾಡೂರು ಯೂಸೂಬ್ ಮತ್ತು ಗಣೇಶ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು. [ಮಂಗಳೂರು ಜೈಲಲ್ಲಿ ಹತ್ಯೆಯಾದವರು ಯಾರು?]
ಕಮ್ಮಾರಿಕೆ ಕೆಲಸ ಮಾಡುತ್ತಿರುವ ಸತೀಶ್ ಆಚಾರ್ಯ ಕೊಲೆಗೆ ಪೂರಕವೆಂಬಂತೆ ಸಣ್ಣದಾದ ಆಯುಧ ತಯಾರಿಸಿ ಒದಗಿಸಿದ್ದ. ಕಮಲಾಕ್ಷ ಪೂಜಾರಿ ಕೂಡ ಇದಕ್ಕೆ ಸಹಕಾರ ನೀಡಿದ್ದ. ಈ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. [ಮಂಗಳೂರು ಜೈಲಿನಲ್ಲಿ ಕೊಲೆ ಮಾಡಿಸಿದ್ದು ವಿಕ್ಕಿ ಶೆಟ್ಟಿ]
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲಿನಲ್ಲಿದ್ದ 5 ಮಂದಿಯ ಮೇಲೆ ಕೊಲೆ ಕೇಸು ದಾಖಲುಮಾಡಲಾಗಿದೆ. ಗಣೇಶ್ ಶೆಟ್ಟಿಯನ್ನು ಕೊಲೆಗೈದ ಆರೋಪಿಗಳ ವಿರುದ್ಧವು ತನಿಖೆ ನಡೆಸಲಾಗುತ್ತಿದೆ ಎಂದು ಮುರುಗನ್ ತಿಳಿಸಿದ್ದಾರೆ.
ಇಬ್ಬರ ಹತ್ಯೆ ನಡೆದಿತ್ತು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 2ರ ಸೋಮವಾರ ಬೆಳಗ್ಗೆ ನಡೆದ ಮಾರಾಮಾರಿಯಲ್ಲಿ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47)ಯನ್ನು ಹತ್ಯೆ ಮಾಡಲಾಗಿತ್ತು.












Click it and Unblock the Notifications