ಮಂಗಳೂರಿಗೂ ಕಾಲಿಟ್ಟ 'ಬ್ಲೂವೇಲ್', ಪೋಷಕರ ಎಚ್ಚರದಿಂದ ವಿದ್ಯಾರ್ಥಿ ಸೇಫ್
ಮಂಗಳೂರು, ಸೆಪ್ಟೆಂಬರ್ 1: ಸಾವಿನ ಆಟವೆಂದೇ ಕುಖ್ಯಾತಿ ಹೊಂದಿರುವ 'ಬ್ಲೂವೇಲ್' ಚಾಲೆಂಜ್ ಗೇಮ್ ಭೂತ ಈಗ ಮಂಗಳೂರಿಗೆ ಕಾಲಿಟ್ಟಿದೆ. ವಿದ್ಯಾರ್ಥಿಯೊಬ್ಬ ತನ್ನ ಕೈ ಕೊಯ್ದು ಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಪೋಷಕರ ಎಚ್ಚರದಿಂದಾಗಿ ವಿದ್ಯಾರ್ಥಿ ಬಚಾವಾಗಿದ್ದಾನೆ.
ಕೈ ಕೊಯ್ದುಕೊಂಡ ವಿದ್ಯಾರ್ಥಿ ಮಂಗಳೂರಿನ ಹೊರವಲಯದ ಕ್ರೈಸ್ತ ಶಿಕ್ಷಣ ಸಂಸ್ಥೆಯೊಂದರಲ್ಲಿ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ತಿಮಿಂಗಿಲ ಆಕಾರದಲ್ಲಿ ಕೈ ಕೊಯ್ದು ಕೊಂಡಿದ್ದ. ಇದನ್ನು ಕಂಡ ಹೆತ್ತವರು ವಿಚಾರಿಸಿದಾಗ 'ಬ್ಲೂವೇಲ್' ಗೇಮ್ ಆಟ ಎಂಬುದು ಬಹಿರಂಗವಾಗಿದೆ. ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಇದೇ ಕ್ರೈಸ್ತ ಶಾಲೆ ಮಕ್ಕಳಿಗೆ ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳ ಪೋಷಕರಿಗೆ ಜಾಗೃತಿ ಪತ್ರಗಳನ್ನು ಬರೆದಿತ್ತು. ಆದರೆ, ಇದೇ ಶಾಲೆಯ ವಿದ್ಯಾರ್ಥಿ ಈ ಸಾವಿನ ಆಟಕ್ಕೆ ಮನಸೋತು ಎಡವಟ್ಟು ಮಾಡಿಕೊಂಡಿದ್ದ. ಈ ಕಾರಣಕ್ಕೆ ಶಾಲೆ ಪೋಷಕರಿಗೆ ಪತ್ರ ಬರೆದಿತ್ತು ಎಂಬುದು ಈಗ ಬಹಿರಂಗವಾಗಿದೆ.
ಇದಕ್ಕೆ ಸಂಬಂಧಿಸಿ ಮಾತನಾಡಿರುವ ಮಂಗಳೂರಿನ ಪೊಲೀಸ್ ಆಯುಕ್ತ ಟಿಆರ್ ಸುರೇಶ್, "ಈ ಪ್ರಕರಣದ ಬಗ್ಗೆ ನಮಗೆ ಯಾವುದೇ ಮಾಹಿತಿ ಇದುವರೆಗೆ ಬಂದಿಲ್ಲ. ಆದರೆ, ನಾವು ಈಗ ಸೂಕ್ತ ತನಿಖೆಯನ್ನು ನಡೆಸುತ್ತೇವೆ," ಎಂದು ತಿಳಿಸಿದ್ದಾರೆ.












Click it and Unblock the Notifications