ಈ ಜಿಲ್ಲೆಯಲ್ಲಿ ₹957.39 ಕೋಟಿ ವೆಚ್ಚದ 2 ಬೃಹತ್ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ, ಯಾವ್ಯಾವ ಮಾರ್ಗ?- ಮಾಹಿತಿ ತಿಳಿಯಿರಿ
ಮಂಗಳೂರು, ಡಿಸೆಂಬರ್, 28: ಈಗಾಗಲೇ ರಾಜ್ಯದ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನು ಕೆಲವು ಈಗಷ್ಟೇ ಆರಂಭವಾಗುತ್ತಿವೆ. ಹಾಗೆಯೇ ಇದೀಗ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಸಲ್ಲಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವನೆಗಳಲ್ಲಿ ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 957.39 ಕೋಟಿ ರೂಪಾಯಿ ವೆಚ್ಚದ ಎರಡು ಬೃಹತ್ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ 28.490 ಕಿಲೋ ಮೀಟರ್ ದ್ವಿಪಥ ಅಭಿವೃದ್ಧಿ 613.65 ಕೋಟಿ ರೂಪಾಯಿ ವೆಚ್ಚದ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು-ಮೂಡಿಗೆರೆ-ತುಮಕೂರು ಸೆಕ್ಷನ್ನಲ್ಲಿ 11.20 ಕಿಲೋ ಮೀಟರ್ ಅಭಿವೃದ್ದಿ 343.73 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಅನುಮೋದನೆ ನೀಡಿದ್ದು, ಟೆಂಡರ್ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿ-ಮೈಸೂರು ರಸ್ತೆ ಚತುಷ್ಪಥ ಕಾಮಗಾರಿ ಒಟ್ಟು 71.60 ಕಿಲೋ ಮೀಟರ್ನ ಸಮಗ್ರ ಯೋಜನಾ ವರದಿ ತಯಾರಿಸಲು ಟೆಂಡರ್ ಕರೆಯಲಾಗಿದೆ. ಕಾಮಗಾರಿಗೆ 1,000 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಎಂದು ಅಂದಾಜಿಸಲಾಗಿದ್ದು, ಸಮಗ್ರ ಯೋಜನಾ ವರದಿ ಬಳಿಕ ನಿಖರ ವೆಚ್ಚ ತಿಳಿಯಬಹುದು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಈ ತಿಂಗಳಲ್ಲಿ ವಿದೇಶಗಳಿಗೆ ಪ್ರಯಾಣಿಸಿದವರೆಷ್ಟು?
ಸಾಮಾನ್ಯವಾಗಿ ಅಂತಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಬೇರೆ ದೇಶಗಳಿಗೆ ಇಂತಹ ತಿಂಗಳಿನಲ್ಲಿ ಇಂತಿಷ್ಟು ಪ್ರಯಾಣಿಕರು ಪ್ರಯಾಣ ಮಾಡಿರುತ್ತಾರೆ ಎನ್ನುವ ದಾಖಲೆ ಇರುತ್ತದೆ. ಅದೇ ರೀತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವೆಂಬರ್ನಲ್ಲಿ ಅತೀ ಹೆಚ್ಚು ಪ್ರಯಾಣಿಕರು ವಿದೇಶಗಳಿಗೆ ಪ್ರಯಾಣ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದು ದಾಖಲೆಯಾಗಿದೆ .
ನವೆಂಬರ್ ತಿಂಗಳಲ್ಲಿ ಒಟ್ಟು 3,98,792 ಪ್ರಯಾಣಿಕರು ಟರ್ಮಿನಲ್-2ರಿಂದ ವಿದೇಶ ಪ್ರಯಾಣ ಮಾಡಿದ್ದಾರೆ. 2022ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಪ್ರಯಾಣಿಕರ ಸಂಖ್ಯೆ ಶೇಕಡಾ 8.6ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರ ವರದಿ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 2023ರ ನವೆಂಬರ್ನಲ್ಲಿ 30,75,234 ಪ್ರಯಾಣಿಕರು ದೇಶದ ವಿವಿಧ ನಗರಗಳಿಗೆ ಸಂಚರಿಸಿದ್ದಾರೆ. ಇದೇ ವರ್ಷ ವಿಮಾನ ಸಂಚಾರ ಆರಂಭಿಸಿದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಹೆಚ್ಚು ವಿಮಾನಗಳು ಸಂಚರಿಸುತ್ತಿವೆ. ಆಗಸ್ಟ್ನಲ್ಲಿ ಕೇವಲ 145 ಪ್ರಯಾಣಿಕರು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಕ್ಟೋಬರ್ 3,338 ಪ್ರಯಾಣಿಕರು, ನವೆಂಬರ್ 4,622 ಪ್ರಯಾಣಿಕರು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ನವೆಂಬರ್ ತಿಂಗಳಿನಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ 31,447 ಪ್ರಯಾಣಿಕರು, ಕುಂದಾನಗರಿ ಬೆಳಗಾವಿಗೆ 32,059 ಪ್ರಯಾಣಿಕರು ಸಂಚರಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 44.7ರಷ್ಟು ಹೇಚ್ಚಳ ಆಗಿದೆ ಎಂದು ತಿಳಿದುಬಂದಿದೆ.












Click it and Unblock the Notifications