ಮದುವೆಗೆ ನಿರಾಕರಣೆ; ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಮಂಡ್ಯ, ನವೆಂಬರ್ 03: ಮದುವೆಯಾಗುತ್ತೇನೆಂದು ನಂಬಿಸಿದ ವ್ಯಕ್ತಿ ನಂತರ ಮದುವೆಗೆ ನಿರಾಕರಿಸಿದ್ದರಿಂದ ಬೇಸರಗೊಂಡ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೋರಾಪುರ ಗ್ರಾಮದಲ್ಲಿ ನಡೆದಿದೆ.
ನೇತ್ರಾವತಿ (30), ಮಕ್ಕಳಾದ ಶೋಭಿತಾ (09), ನಂದೀಶ್ (07) ಮೃತಪಟ್ಟವರು. ನೇತ್ರಾವತಿ ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ನಂತರ ಅದೇ ಗ್ರಾಮದ ಆನಂದ ಎಂಬಾತ ನೇತ್ರಾವತಿ ಅವರನ್ನು ಮದುವೆಯಗುವುದಾಗಿ ನಂಬಿಸಿದ್ದನು.
ಆದರೆ ಈಚೆಗೆ ಬೇರೆ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಈ ಸಂಬಂಧ ಗ್ರಾಮದಲ್ಲಿ ರಾಜಿ ಪಂಚಾಯ್ತಿಯನ್ನೂ ನಡೆಸಲಾಗಿತ್ತು. ಆದರೆ ಅಲ್ಲೂ ನ್ಯಾಯ ಸಿಗದಿದ್ದರಿಂದ ಮನನೊಂದ ನೇತ್ರಾವತಿ ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ವಸ್ಥಗೊಂಡಿದ್ದ ಇವರನ್ನು ಗ್ರಾಮಸ್ಥರು ತಕ್ಷಣವೇ ಮಂಡ್ಯ ಮೆಡಿಕಲ್ ಕಾಲೇಜು, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನೇತ್ರಾವತಿ ಹಾಗೂ ಮಗಳು ಶೋಭಿತಾ ಸೋಮವಾರ ಸಾವನ್ನಪ್ಪಿದ್ದರು.

ಇಂದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗ ನಂದೀಶ್ ಕೂಡ ಸಾವನ್ನಪ್ಪಿದ್ದಾನೆ. ಈ ಘಟನೆ ಕುರಿತಂತೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications