ಮದ್ದೂರಿನ ಕಾಮುಕ ಮೊಹಮದನಿಗೆ ಬಿತ್ತೂ ಗೂಸಾ!
ಮಂಡ್ಯ, ಜನವರಿ,11: ಜನಸಂದಣಿ ಸ್ಥಳವಾದ ಬಸ್ ನಿಲ್ದಾಣ, ಸಂತೆಗಳಲ್ಲಿ ಅಡ್ಡಾಡುತ್ತಾ, ಮಹಿಳೆಯರ ಮೈಕೈ ಮುಟ್ಟುತ್ತಾ ಅಸಹ್ಯವಾಗಿ ವರ್ತಿಸಿ ಮುಜುಗರವನ್ನುಂಟು ಮಾಡುತ್ತಿದ್ದ ಕಾಮುಕನನ್ನು ಕಂಬಕ್ಕೆ ಕಟ್ಟಿಹಾಕಿ ಸಾರ್ವಜನಿಕರೇ ಗೂಸ ನೀಡಿದ ಘಟನೆ ಮದ್ದೂರಿನಲ್ಲಿ ನಡೆದಿದೆ.[ಮಂಗಳೂರಿನಲ್ಲಿ ಬಯಲಾಯ್ತು ಜ್ಯೋತಿಷಿ ಕಾಮಚೇಷ್ಟೆ]
ಮದ್ದೂರಿನ ರಾಂರಹೀಂ ನಗರದ ನಿವಾಸಿ ಮೊಹಮದ್(22) ಸಾರ್ವಜನಿಕರಿಂದ ಗೂಸಾ ತಿಂದ ಕಾಮುಕ. ಈತ ಸದಾ ನಶೆಯ ಮತ್ತಿನಲ್ಲಿರುತ್ತಿದ್ದನು. ನಶೆಗಾಗಿ ಪಂಚರ್ ಸಲ್ಯೂಷನ್ ಸೇವಿಸುತ್ತಿದ್ದ ಎನ್ನಲಾಗಿದೆ. ನಶೆಯಲಿದ್ದಾಗ ಸಂತೆ ಇನ್ನಿತರ ಜನಸಂದಣಿಯಿರುವ ಸ್ಥಳದಲ್ಲಿ ಅಡ್ಡಾಡುತ್ತಾ ಮಹಿಳೆಯರ ಮೈಕೈ ಎದೆಯನ್ನು ಸ್ಪರ್ಶಿಸಿ ವಿಕೃತ ಸುಖಪಡುತ್ತಿದ್ದನು. ಈತನ ಕಾಟಕ್ಕೆ ಸಿಲುಕಿದ ಕೆಲವು ಹೆಣ್ಣುಮಕ್ಕಳು ಮುಜುಗರದಿಂದ ಹೇಳಿಕೊಳ್ಳದೆ ಸುಮ್ಮನಾಗಿ ಬಿಡುತ್ತಿದ್ದರು. ಇದನ್ನೇ ಉಪಯೋಗಿಸಿಕೊಂಡು ತನ್ನ ಕಾಮ ಚೇಷ್ಟೆಯನ್ನು ಮುಂದುವರೆಸಿದ್ದನು ಎನ್ನಲಾಗಿದೆ.[ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮೈದುನ ನಾದಿನಿ ಜೋಡಿ]
ಮಂಗಳವಾರ ಮದ್ದೂರು ಪಟ್ಟಣದ ಸಂತೆಗೆ ಬಂದು ತನ್ನ ಕಾಮಚೇಷ್ಟೆ ಆರಂಭಿಸಿದ್ದನು. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಜಾಡಿಸಿದ್ದರು. ಈ ಸಂದರ್ಭ ತಪ್ಪಿಸಿಕೊಳ್ಳಲು ಆತ ಮುಂದಾಗುತ್ತಿದ್ದಂತೆ ಸುತ್ತುವರೆದ ಸಾರ್ವಜನಿಕರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಗೂಸ ನೀಡಿ ಬಳಿಕ ಮದ್ದೂರು ಪಟ್ಟಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಶಕ್ಕೆ ಪಡೆದ ಪೊಲೀಸರು ಆತನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.