ಮಂಡ್ಯ: ಅತ್ಯಾಚಾರ ಎಸಗಿ ಮಹಿಳೆಯ ಬರ್ಬರ ಹತ್ಯೆ
ಮಂಡ್ಯ, ಅಕ್ಟೋಬರ್ 31 : ಜಿಲ್ಲೆಯ ಮದ್ದೂರಿನ ಹಳೇ ವೈದ್ಯನಾಥಪುರ ರಸ್ತೆಯ ಕಾರಬಿ ಬಳಿ ಮಹಿಳೆಯೊಬ್ಬರ ಶವ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ.
ಸಹೋದರನ ಕಣ್ಣೆದುರಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ದುಷ್ಕರ್ಮಿಗಳು ಹಾಡಹಗಲೇ ಮಹಿಳೆ ಮೇಲೆ ಆತ್ಯಾಚಾರ ಎಸಗಿ ಬಳಿಕ ಕುಡುಗೋಲಿನಿಂದ ಕತ್ತು ಕೈ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪಟ್ಟಣದ ಪೇಟೆ ಸೆಸ್ಕ್ ಕಚೇರಿ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದ ರಾಜು ಎಂಬುವರ ಪತ್ನಿ ಸವಿತಾ(40) ಎಂಬಾಕೆಯೇ ಕೊಲೆಗೀಡಾದ ಮಹಿಳೆ.
ಮಧ್ಯಾಹ್ನದ ವೇಳೆಯಲ್ಲಿ ಜಾನುವಾರುಗಳಿಗೆ ಹುಲ್ಲು ತರಲೆಂದು ಕರಾಬಿ ನಾಲಾ ಬಯಲಿಗೆ ತೆರಳಿದಾಗ ಯಾರೋ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ಬಳಿಯಿದ್ದ ಕುಡುಗೋಲಿನಿಂದಲೇ ಕತ್ತು ಹಾಗೂ ಎಡಗೈ ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ರೈತ ಆತ್ಮಹತ್ಯೆ: ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ರೈತನೊಬ್ಬ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ನಡೆದಿದೆ.
ಮಾರಸಿಂಗನಹಳ್ಳಿಯಲ್ಲಿ ಗ್ರಾಮದ ನಿವಾಸಿ ಗೂಳಿಗೌಡ ಅವರ ಪುತ್ರ ಎಂ.ಜಿ.ಶಿವಕುಮಾರ್(43) ಎಂಬುವರೇ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ರೈತ.
ಗ್ರಾಮದಲ್ಲಿದ್ದ ತಮಗೆ ಸೇರಿದ ಸುಮಾರು 5 ಎಕರೆ ಪ್ರದೇಶದಲ್ಲಿ ಭತ್ತ, ಕಬ್ಬು ಬೆಳೆ ಬೆಳೆಯಲು ಮುಂದಾಗಿದ್ದರು. ಇದಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದರಾದರೂ ಕಳೆದ 3 ವರ್ಷದಿಂದ ನೀರಿಲ್ಲದೆ ನಷ್ಟ ಹೊಂದಿದ್ದರು.
ಹೀಗಾಗಿ ಸಾಲ ಮರುಪಾವತಿ ಮಾಡುವುದಿರಲಿ ಬಡ್ಡಿ ಕಟ್ಟುವುದು ಕೂಡ ಸಾಧ್ಯವಾಗಿರಲಿಲ್ಲ. ಈ ಸಂಬಂಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.