"ಅಂದು ಕಾಲರಾ ಪ್ಲೇಗ್ ನಿಂದ ಕಾಪಾಡಿದ್ದೆ, ಇಂದು ಕೊರೊನಾದಿಂದ ಕಾಪಾಡು"
ಮಂಡ್ಯ, ಏಪ್ರಿಲ್ 11: ಸಾಂಕ್ರಾಮಿಕ ರೋಗಗಳು ಕಾಡಿದಾಗಲೆಲ್ಲ ಅದನ್ನು ನಿಯಂತ್ರಿಸಲು ಜನರು, ದೇವರು, ದೇವಾಲಯಗಳ ಮೊರೆ ಹೋಗುತ್ತಾರೆ. ದೇವರು ಸಾಂಕ್ರಾಮಿಕ ರೋಗಗಳನ್ನು ತಡೆದು ಊರುಗಳನ್ನು ರಕ್ಷಿಸಿದ ಕುರಿತಂತೆ ಇತಿಹಾಸದಲ್ಲಿ ಹಲವು ಕಥೆಗಳಿವೆ.
ಈ ಪೈಕಿ ಕೆ.ಆರ್.ಪೇಟೆ ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಮುತ್ತುರಾಯ ಸ್ವಾಮಿ ದೇಗುಲವೂ ಒಂದಾಗಿದೆ. ಈ ದೇವಾಲಯದಲ್ಲಿ ನೂರು ವರ್ಷಗಳ ಹಿಂದೆ, ಅಂದರೆ 1919ರಲ್ಲಿ ಪ್ಲೇಗ್ ಮತ್ತು ಕಾಲರಾ ರೋಗ ಕಾಣಿಸಿಕೊಂಡಾಗ ಪೂಜೆ ಸಲ್ಲಿಸಿ ಜನರನ್ನು ಕಾಪಾಡುವಂತೆ ಕೋರಲಾಗಿತ್ತು. ಅಂದು ಪಟ್ಟಣದ ಜನರನ್ನು ರಕ್ಷಿಸಿದ್ದ ಮುತ್ತುರಾಯ ಸ್ವಾಮಿಗೆ, ಇದೀಗ ಕೊರೊನಾ ತಡೆದು ಇಡೀ ದೇಶವನ್ನು ರಕ್ಷಿಸುವಂತೆ ಮೊರೆಯಿಡಲಾಗಿದೆ.
ಕೊರೊನಾ: ನಾಡಿನ ಶಕ್ತಿ ಕ್ಷೇತ್ರ ಯಕ್ಷಿ ಚೌಡೇಶ್ವರಿ ಸನ್ನಿಧಾನದಲ್ಲಿ ಬಂದ ಸೂಚನೆ
ಮುತ್ತುರಾಯ ಸ್ವಾಮಿ ದೇಗುಲದ ದೇವಾಲಯ ಸಮಿತಿ ಸದಸ್ಯರು ಹಿರಿಯರಾದ ಕೆ.ಎನ್.ಕೃಷ್ಣೆಗೌಡ, ಕೆ.ಕೆ.ಕೃಷ್ಣ, ಜಾನಕೀರಾಂ, ಅರ್ಚಕ ಮುತ್ತುರಾಜ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ 1919ರಲ್ಲಿ ಪ್ಲೇಗ್, ಕಾಲರಾ ಮಾರಿಯಿಂದ ಜನರನ್ನು ರಕ್ಷಣೆ ಮಾಡಿದಂತೆಯೇ ದೇಶವನ್ನು ರಕ್ಷಣೆ ಮಾಡುವಂತೆ ಹರಕೆ ಹೊತ್ತು ಕೊಂಡಿದ್ದಾರೆ.
1919ರಲ್ಲಿ ಕಾಲರಾ ಬಂದು ಜನರು ತಂಡೋಪತಂಡವಾಗಿ ಗ್ರಾಮ ತೊರೆದು ವಲಸೆ ಹೋಗುತ್ತಿದ್ದ ವೇಳೆ ಉದ್ಭವ ಮೂರ್ತಿಯಾಗಿ ಮೂಡಿದ್ದ ಮುತ್ತುರಾಯ ಸ್ವಾಮಿಯ ಗದ್ದುಗೆಗೆ ಹಿರಿಯರು ಪೂಜೆ ಸಲ್ಲಿಸಿ, ಹರಕೆ ಕಟ್ಟಿದಾಗ ಕಾಯಿಲೆ ದೂರವಾಗಿ ಜನರಿಗೆ ರಕ್ಷಣೆ ದೊರಕಿತ್ತು. ಅದರಂತೆ ಈಗಲೂ ಕೊರೊನೊ ಮಹಾಮಾರಿ ದೂರ ಸರಿದು ಲೋಕ ಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.