ನಾಯಿ ಎಂಬ ಟೀಕೆಗೆ ಬಿಜೆಪಿಗರ ಆಕ್ರೋಶ: ಮಂಡ್ಯದಲ್ಲಿ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಪ್ರತಿಕೃತಿಗೆ ಚಪ್ಪಲಿ ಹಾರ
ಮಂಡ್ಯ, ಜನವರಿ, 05: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಕೃತಿಗಳಿಗೆ ಚಪ್ಪಲಿಹಾರ ಹಾಕಿ ಪ್ರತಿಭಟನೆ ನಡೆಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಅವರ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮಾತನಾಡಿ, ಸ್ವಾರ್ಥಕ್ಕಾಗಿ ನಾಗರೀಕತೆಯನ್ನೇ ಮರೆತಂತಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಎಂದು ಕರೆದಿದ್ದಾರೆ. ನಮಗೆ ನಾಯಿ ಪದದ ಬಗ್ಗೆ ಗೌರವ ಇದೆ. ಅತ್ಯಂತ ಪ್ರಾಮಾಣಿಕ, ನಂಬಿಕಸ್ಥ ಜೀವಿಯಾಗಿ ಬದುಕುವ ಜೀವಿ ನಾಯಿ ಎಂದು ಟೀಕಿಸಿದರು. ಸಿದ್ದರಾಮಯ್ಯ ಮಾಡಿರುವ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲೋಕಾಯುಕ್ತವನ್ನು ನಿಷ್ಕ್ರಿಯೆಗೊಳಿಸಿ, ಎಸಿಬಿಯನ್ನು ರಚಿಸಿದ್ದರು. ಅವರ ಆಡಳಿತದಲ್ಲಿ ಎಷ್ಟು ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿಲ್ಲ. ತಕ್ಷಣ ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸಿ.ಎಂ. ಇಬ್ರಾಹಿಂ ವಿರುದ್ಧ ವಾಗ್ದಾಳಿ
ಇನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಸಿ.ಎಂ.ಇಬ್ರಾಹಿಂ ಲಘುವಾಗಿ ಮಾತನಾಡುತ್ತಾರೆ. ಜೆಡಿಎಸ್ನವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ತಕ್ಷಣ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದರು. ಹಾಗೆಯೇ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ನಾಗರಿಕ ಸಮಾಜ ಭಾರತದ ಪ್ರಜಾಪ್ರಭುತ್ವ ಒಳಗೆ ನಂಬಿಕೆ ಇಟ್ಟುಕೊಂಡಿದೆ. ನಮ್ಮೆಲ್ಲ ಭಾಷೆ ಮತ್ತು ಆಚರಣೆಗಳು ಕೂಡ ಪಾರ್ಲಿಮೆಂಟರಿ ಡೆಮಾಕ್ರಸಿ ಒಳಗೆ ನಡೆಯುತ್ತಿವೆ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವುದು ಒಂದು ಕರ್ತವ್ಯವೂ ಆಗಿದೆ. ಆದರೆ ಇದನ್ನು ಮರೆತ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ.ಸಿದ್ದರಾಮಯ್ಯದ್ದು ಸಂಸ್ಕಾರ ಇಲ್ಲದ ನಾಲಿಗೆ ಮತ್ತು ವ್ಯಕ್ತಿತ್ವವಾಗಿದೆ. ಅವರ ಗುಣಧರ್ಮದಲ್ಲಿ ಅದು ಹಾಸುಹೊಕ್ಕಾಗಿದೆ. ಹಿಂದೂ ಧರ್ಮ ಒಡೆದು ವೀರಶೈವ ಧರ್ಮ ಸ್ಥಾಪಿಸಲು ಮುಂದಾಗಿದ್ದರು. ನರೇಂದ್ರ ಮೋದಿ ಅವರಿಗೂ ಕೂಡ ಏಕವಚನದಲ್ಲಿ ಮಾತನಾಡಿದ್ದರು. ಸಿದ್ದರಾಮಯ್ಯನವರಿಗೆ ಸಂಸ್ಕಾರವೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ
ಮುಖಂಡ ಅಶೋಕ್ ಜಯರಾಂ ಮಾತನಾಡಿ, ರಾಹುಲ್ಗಾಂಧಿಯವರ ನಿರ್ದೇಶನದ ರೀತಿಯಲ್ಲಿ ಅಪ್ಪುಗೆಯ ರಾಜಕಾರಣ ಮಾಡುವ ಹಂತದ ನಿಕೃಷ್ಟ ರಾಜಕಾರಣಿ ಸಿದ್ದರಾಮಯ್ಯ ಎಂದು ಟೀಕಿಸಿದರು. ಹಿಂದೆ ತುರ್ತುಪರಿಸ್ಥಿತಿ ವಿರುದ್ಧ ಮಾತನಾಡಿದ್ದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸೇರಿದ ನಂತರ ಆ ಬಗ್ಗೆ ಮಾತನಾಡುತ್ತಿಲ್ಲ. ಇದು ಅವರ ಸಮಯ ಸಾಧಕತನಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮುನಿರಾಜು, ಚಂದಗಾಲು ಶಿವಣ್ಣ, ರಮೇಶ, ಸಿದ್ದರಾಜು, ವಿವೇಕ್, ಹನುಮಂತು, ನಾಗಾನಂದ, ಮಹಂತಪ್ಪ, ಶಿವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications