ಜೇಬುಗಳ್ಳ ಅಂದ್ಕೊಂಡು ಬಟ್ಟೆ ವ್ಯಾಪಾರಿಗೆ ಸಿಕ್ಕಾಪಟ್ಟೆ ಹೊಡೆದ ಜನ
ಮಂಡ್ಯ, ಜೂನ್ 12 : ಆಸ್ಪತ್ರೆ ಬಳಿ ಹೆಂಡತಿಯನ್ನು ಹುಡುಕುತ್ತಿದ್ದ ವ್ಯಕ್ತಿಯನ್ನು ಜೇಬುಗಳ್ಳನೆಂದು ಅನುಮಾನಿಸಿ, ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಾಗಮಂಗಲದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮಂಗಳವಾರ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ತೆಲಂಗಾಣ ಮೂಲದ ವೆಂಕಟೇಶ್ ಎಂದು ಗುರುತಿಸಲಾಗಿದ್ದು, ಬಟ್ಟೆ ವ್ಯಾಪಾರಿ ಎಂದು ಹೇಳಲಾಗಿದೆ. ಈತ ಬಟ್ಟೆ ವ್ಯಾಪಾರಕ್ಕೆಂದು ಎರಡು ದಿನಗಳ ಹಿಂದಷ್ಟೇ ಇಬ್ಬರು ಮಕ್ಕಳೊಂದಿಗೆ ನಾಗಮಂಗಲಕ್ಕೆ ಬಂದಿದ್ದರಂತೆ. ಗರ್ಭಿಣಿಯಾಗಿದ್ದ ಪತ್ನಿಗೆ ಚಿಕಿತ್ಸೆ ಕೊಡಿಸಲೆಂದು ಮಂಗಳವಾರ ಆಸ್ಪತ್ರೆಗೆ ಬಂದು, ಹೊರಹೋಗಿದ್ದರು.
ಬಾರ್ ನಲ್ಲಿ ಸಚಿವ ಸಾ.ರಾ. ಮಹೇಶ್ ಬೆಂಬಲಿಗರ ಪುಂಡಾಟ: ದೂರು ದಾಖಲು
ಮತ್ತೆ ವಾಪಸ್ ಬಂದ ಆತ ಪತ್ನಿಗಾಗಿ ಹುಡುಕಾಟ ನಡೆಸಿದ್ದಾರೆ. ಈತನಿಗೆ ಸರಿಯಾಗಿ ಕನ್ನಡ ಬಾರದ ಕಾರಣ ಮತ್ತು ಹೊಂಚು ಹಾಕುವ ರೀತಿಯಲ್ಲಿ ವರ್ತಿಸಿದ್ದರಿಂದ ಪಕ್ಕದಲ್ಲಿದ್ದ ಸಾರ್ವಜನಿಕರು ಜೇಬುಗಳ್ಳನೆಂದು ಆತನಿಗೆ ಥಳಿಸಿದ್ದಾರೆ.
ವಿಷಯ ತಿಳಿದ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಬಂದು, ಆತನನ್ನು ರಕ್ಷಣೆ ಮಾಡಿ, ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಆ ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಆದರೆ ಪಿಕ್ ಪಾಕೆಟ್ ಮಾಡಲು ಹೊಂಚುಹಾಕುತ್ತಿದ್ದ ಎಂದು ವೆಂಕಟೇಶ್ ಮೇಲೆ ಹಲ್ಲೆ ನಡೆಸಿದವರ ಪೈಕಿ ಯಾರೊಬ್ಬರೂ ಠಾಣೆಗೆ ಬಂದು ದೂರು ನೀಡಿಲ್ಲ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿಲ್ಲ.
"ಬಟ್ಟೆ ವ್ಯಾಪಾರಕ್ಕೆಂದು ಎರಡು ದಿನಗಳ ಹಿಂದಷ್ಟೇ ಬಂದಿದ್ದೇವೆ. ನಾನು ಏಳು ತಿಂಗಳ ಗರ್ಭಿಣಿಯಾಗಿದ್ದು, ಆರೋಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆ ಕೊಡಿಸುವ ಸಲುವಾಗಿ ನನ್ನ ಪತಿ ವೆಂಕಟೇಶ್ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ನಾನು ಆಸ್ಪತ್ರೆಯ ಒಳಗಿದ್ದ ಸಮಯದಲ್ಲಿ ನನ್ನ ಗಂಡ ಆಸ್ಪತ್ರೆ ಮುಂಭಾಗದ ರಸ್ತೆ ಬದಿ ನಿಂತಿದ್ದ ವೇಳೆ ಪಿಕ್ ಪಾಕೆಟ್ ಮಾಡಲು ಯತ್ನಿಸಿದರೆಂದು ಆರೋಪಿಸಿ, ಸ್ಥಳೀಯ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ನನ್ನ ಪತಿ ಅಮಾಯಕ ಅವರನ್ನು ಬಿಡಿಸಿಕೊಡಿ" ಎಂದು ಹಲ್ಲೆಗೊಳಗಾದ ವೆಂಕಟೇಶ್ ಪತ್ನಿ ಗಂಗಾ ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಅಳುತ್ತಿದ್ದ ದೃಶ್ಯ ಕಂಡು ಬಂತು.