Mandya: ನೀರಾವರಿ ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ಆಗ್ರಹ
ರೈತರಿಗೆ ಮಾರಕವಾಗಿರುವ ನೀರಾವರಿ ತಿದ್ದುಪಡಿ ವಿಧೇಯಕ-2024ನ್ನು ತಕ್ಷಣ ವಾಪಸ್ಸು ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಂಡ್ಯ ಹಾಲು ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್. ರಘುನಂದನ್ ಎಚ್ಚರಿಕೆ ನೀಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವಿಧಾನ ಮಂಡಲದ ಅಧಿವೇಶನದಲ್ಲಿ ನೀರಾವರಿ ಸಚಿವರು ನೀರಾವರಿ ತಿದ್ದುಪಡಿ ವಿದೇಯಕ-2024ನ್ನು ಮಂಡಿಸಿದ್ದಾರೆ. ಇದರಲ್ಲಿ ರೈತ ನೀರನ್ನು ಉಪಯೋಗಿಸಿದರೆ ಕಳ್ಳ ಎಂದು ದಂಡ ಹಾಕುವುದು, 2 ವರ್ಷ ಜೈಲು ಶಿಕ್ಷೆ ವಿಧಿಸುವುದು ದುರಂತವಾಗಿದೆ ಎಂದು ಹೇಳಿದರು.

ನಾಲೆಗಳ ಆಧುನೀಕರಣಕ್ಕೆ 700-800 ಕೋಟಿ ಖರ್ಚು ಮಾಡಿದ್ದೀರಿ. ಆದರೆ ಅದರ ಆಧುನೀಕರಣ ಮಾತ್ರ ಆಗಿಲ್ಲ. ಕೊಳವೆ ಬಾವಿಗಳ ನೋಂದಣಿ ಕಡ್ಡಾಯ ಎಂದು ಹೇಳುತ್ತೀರಿ. ರೈತರ ಜಮೀನಿಗೆ ಸರಿಯಾದ ರೀತಿಯಲ್ಲಿ ನೀರು ತಲುಪಿಸಿ. ರೈತರು ನೀರನ್ನು ಕದಿಯುವುದಿಲ್ಲ. ವ್ಯವಸ್ಥಿತ ಸೌಲಭ್ಯವನ್ನು ಒದಗಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಕಳೆದ ಬಾರಿ ಬರ ಬಂದಿತ್ತು ಎಂಬ ಕಾರಣಕ್ಕೆ ಯಾರೂ ಬೆಳೆ ಬೆಳೆಯದಂತೆ ನಿರ್ಬಂಧ ವಿಧಿಸಿದ್ದೀರಿ. ಇದರಿಂದ ರೈತರು ಸಂಕಷ್ಟ ಅನುಭವಿಸಿದರು. ಈಗ ನೀರು ಬಂದಿದೆ ಆದರೆ ರೈತರಿಗೆ ಮಾರಕವಾದ ವಿಧೇಯಕವನ್ನು ಜಾರಿಗೊಳಿಸಿದ್ದೀರಿ. ತಕ್ಷಣ ಇದನ್ನು ವಾಪಸ್ಸು ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪುನರುಚ್ಚರಿಸಿದರು.
ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ ಮಾತನಾಡಿ, ರೈತರು ನೀರನ್ನು ಕದ್ದು ಮಾರಲು ಹೋಗುವುದಿಲ್ಲ. ನಾಲೆಗಳಿಗೆ ನೀರು ಹರಿಸಲಿಲ್ಲ ಎಂದಾಗ ಕೊಳವೆ ಬಾವಿಗಳನ್ನು ಕೊರೆಸುತ್ತಾರೆ. ಅದರಿಂದ ಪೈಪ್ಲೈನ್ ಅಳವಡಿಸಿಕೊಂಡು ತಮ್ಮ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದನ್ನು ಮನಗಾಣದ ನೀರಾವರಿ ಸಚಿವರು ರೈತರಿಗೆ ದಂಡ ಹಾಕಿ ಜೈಲು ಶಿಕ್ಷೆ ವಿಧಿಸುವ ವಿಧೇಯಕವನ್ನು ಜಾರಿಗೊಳಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ದೂರಿದರು.
ಬೋರ್ವೆಲ್ ಹಾಕಿ ಅದಕ್ಕೆ ವಿದ್ಯುತ್ ಸಂಪರ್ಕ ಪಡೆದು ಟಿಸಿ ಅಳವಡಿಸಲು 3 ರಿಂದ 4 ಲಕ್ಷ ವೆಚ್ಚ ಮಾಡಬೇಕಿದೆ. ಹಲವಾರು ಮಂದಿ ರೈತರು ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಲ್ಲೇ ನಾಲ್ಕೈದು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿ ನೀರಾವರಿ ಸಚಿವರು ತಕ್ಷಣ ವಿಧೇಯಕವನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.












Click it and Unblock the Notifications