ನಿಖಿಲ್ ಕುಮಾರಸ್ವಾಮಿಗೆ ಇನ್ನೂ ಮರೆಯಲಾಗದ ಆ 'ವ್ಯವಸ್ಥಿತ ಸಂಚು'
ಮಂಡ್ಯ, ನ 29: ರಾಜಕೀಯ ಮತ್ತು ಸಿನಿಮಾ ಎನ್ನುವ ಎರಡು ದೋಣಿಗಳಲ್ಲಿ ಕಾಲಿಟ್ಟು ಮುಂದೆ ಸಾಗುತ್ತಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, 2019ರ ಘಟನೆಯನ್ನು ಮತ್ತೆಮತ್ತೆ ಪುನರುಚ್ಚಸುತ್ತಿದ್ದಾರೆ.
ಅಂದಿನ ಘಟನೆಯನ್ನು ಕುರುಕ್ಷೇತ್ರ ಪುರಾಣಕ್ಕೆ ಹೋಲಿಸಿರುವ ನಿಖಿಲ್ ಕುಮಾರಸ್ವಾಮಿ, ತಾನು ಮತ್ತು ತನ್ನ ಕುಟುಂಬವನ್ನು ಅಭಿಮನ್ಯುಗೆ ಹೋಲಿಸುವ ಮೂಲಕ ಏಕಾಂಗಿಯಾಗಿದ್ದೆವು ಎಂದು ಅತೀವ ಬೇಸರ ವ್ಯಕ್ತ ಪಡಿಸಿದ್ದಾರೆ.
ಆ ಘಟನೆಯನ್ನು ದೇವೇಗೌಡ್ರು ಆದಿಯಾಗಿ ಎಲ್ಲರೂ ಬಹಳಷ್ಟು ವೇದಿಕೆಯಲ್ಲಿ ಪ್ರಸ್ತಾವಿಸಿದ್ದುಂಟು. ಹೇಗೆ, ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಕೌರವರ ರೀತಿಯಲ್ಲಿ ವ್ಯವಸ್ಥಿತವಾಗಿ ಸಂಚು ನಡೆಸಲಾಗಿತ್ತು ಎನ್ನುವುದನ್ನು ಎಳೆಎಳೆಯಾಗಿ ಗೌಡ್ರ ಕುಟುಂಬವದವರು ವಿವರಿಸಿದ್ದರು.
ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಆದ ಸೋಲನ್ನು ವ್ಯವಸ್ಥಿತ ಸಂಚು ಎಂದು ವಿವರಿಸಿದ್ದಾರೆ. ಹೇಗೆ ನನ್ನನ್ನು ಸೋಲಿಸಲು ಎಲ್ಲರೂ ಒಂದಾದರು ಎನ್ನುವುದನ್ನು ಬಿಡಿಸಿಟ್ಟಿದ್ದಾರೆ. ನಿಖಿಲ್ ಹೇಳಿದ್ದು ಹೀಗೆ..

ನಾನು ಕುರುಕ್ಷೇತ್ರದ ಅಭಿಮನ್ಯುವಿನಂತೆ ಏಕಾಂಗಿಯಾದೆ
ಮಂಡ್ಯದ ದೊಡ್ಡರಸಿನಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದಂತೆ ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕುರುಕ್ಷೇತ್ರದ ಅಭಿಮನ್ಯುವಿನಂತೆ ಏಕಾಂಗಿಯಾದೆ. ಮಂಡ್ಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಸಂಚು ಮಾಡಿ ನನ್ನನ್ನು ಸೋಲಿಸಿದರು" ಎಂದು ನಿಖಿಲ್ ಬೇಸರ ವ್ಯಕ್ತ ಪಡಿಸಿದರು.

ಮುಖಂಡರೊಂದಿಗೆ ಬೆರೆಯುವುದನ್ನು ತಂದೆ ಹಾಗೂ ತಾತ ಹೇಳಿಕೊಟ್ಟಿದ್ದಾರೆ
"ಚುನಾವಣೆಯಲ್ಲಿ ಮೂರು ಪಕ್ಷಗಳ ಹುನ್ನಾರದಿಂದ ನಾನು ಸೋಲಬೇಕಾಯಿತು. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರುಗಳ ಒತ್ತಡದಿಂದ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ, ಆ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ನನ್ನ ವಯಸ್ಸು ಇನ್ನೂ ಚಿಕ್ಕದಿದೆ. ಕಾರ್ಯಕರ್ತರು, ಮುಖಂಡರೊಂದಿಗೆ ಬೆರೆಯುವುದನ್ನು ತಂದೆ ಹಾಗೂ ತಾತ ಹೇಳಿಕೊಟ್ಟಿದ್ದಾರೆ" ಎಂದು ನಿಖಿಲ್ ಕುಮಾರಸ್ವಾಮಿ ಹೇಳುವ ಮೂಲಕ ಮತ್ತೆ ರಾಜಕೀಯದಲ್ಲಿ ಸಕ್ರಿಯನಾಗಲಿದ್ದೇನೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದೇನೆ
"ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದೇನೆ. ಇಂತಹ ಸಂದರ್ಭದಲ್ಲಿ ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನಾನು ಆಕಸ್ಮಿಕವಾಗಿ ಅಭ್ಯರ್ಥಿಯಾದೆ. ಸ್ಥಾನಮಾನಗಳು ಬೇಕೆಂದು ಹುಚ್ಚಿಡಿಸಿಕೊಂಡು ಅಭ್ಯರ್ಥಿಯಾಗಲಿಲ್ಲ, ನನಗೆ ಅಧಿಕಾರದ ಹುಚ್ಚಿದ್ದರೆ 2018ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡ ಅವರಿಗೆ ಟಿಕೆಟ್ ಕೊಡದೇ ನಾನೇ ನಿಲ್ಲುತ್ತಿದ್ದೆ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ತಂದೆಯ ಹೆಸರಿನಿಂದ ಅಧಿಕಾರ ಹಿಡಿಯಬೇಕಾದ ಪರಿಸ್ಥಿತಿ ನನಗೆ ಬಂದಿಲ್ಲ
"ತಂದೆಯ ಹೆಸರಿನಿಂದ ಅಧಿಕಾರ ಹಿಡಿಯಬೇಕಾದ ಪರಿಸ್ಥಿತಿ ನನಗೆ ಬಂದಿಲ್ಲ. ಮಂಡ್ಯದಲ್ಲಿ ನನಗೆ ಸೋಲಾಗಿರಬಹುದು, ಆದರೆ ನನ್ನನ್ನು ಬೆಂಬಲಿಸಿ 5,77,784 ಮತ ಹಾಕಿದ್ದಾರೆ. ಇದೇನು ಸಾಧಾರಣ ವೋಟಿಂಗ್ ಸಂಖ್ಯೆಯಲ್ಲ. ಆದರೆ, ಎಲ್ಲರ ವ್ಯವಸ್ಥಿತ ಸಂಚಿನಿಂದ ನನಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಸಮಯ ಎಲ್ಲಾ ಕಾಲದಲ್ಲೂ ಒಂದೇ ರೀತಿಯಲ್ಲಿ ಇರುವುದಿಲ್ಲ"ಎಂದು ನಿಖಿಲ್ ಕುಮಾರಸ್ವಾಮಿ ಹೇಳುವ ಮೂಲಕ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.
ಮಂಡ್ಯದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕು ಕಬಡ್ಡಿ ಟೂರ್ನಮೆಂಟಿನಲ್ಲೂ ಭಾಗವಹಿಸಿದ್ದ ನಿಖಿಲ್ ಕುಮಾರಸ್ವಾಮಿ, ಎಲ್ಲಾ ಆಟಗಾರರಿಗೂ ಶುಭ ಕೋರಿದರು. ಈ ವೇಳೆ, ನಿಖಿಲ್ ಜೊತೆ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹಾಜರಿದ್ದರು. ಕ್ರೀಡಾಪಟುಗಳ ಜೊತೆ ಸ್ವಲ್ಪ ಹೊತ್ತು ತಾನೂ ಕಬಡ್ಡಿ ಆಡಿದ ನಿಖಿಲ್ ಎಲ್ಲರ ಮೆಚ್ಚುಗೆಯನ್ನು ಗಳಿಸಿದರು.












Click it and Unblock the Notifications