ಮಂಡ್ಯದ ಮಳೆ: ಅಪಾಯದ ಅಂಚಿನಲ್ಲಿ ಬದರೀನಾರಾಯಣ ದೇಗುಲ
ಮಂಡ್ಯ, ಆಗಸ್ಟ್, 08: ದಕ್ಷಿಣ ಬದರಿಕಾಶ್ರಮವೆಂದೇ ಪ್ರಖ್ಯಾತವಾದ ಮೇಲುಕೋಟೆಯ ಕ್ಷೇತ್ರದ ಬದರಿನಾರಾಯಣಸ್ವಾಮಿ ದೇಗುಲ ಭಾರೀ ಮಳೆಯಿಂದ ಅಪಾಯದ ಅಂಚಿಗೆ ತಲುಪುತ್ತಿದೆ.
ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯಕ್ಕಿಂತಲೂ ಪುರಾತನ ದೇಗುಲ ಎಂಬ ಇತಿಹಾಸ ಹೊಂದಿರುವ ಬದರಿನಾರಾಯಣನ ಸನ್ನಿಧಿಯ ಇಡೀ ಕಟ್ಟಡ ಭಾರೀ ಮಳೆಯಿಂದ ಸೋರುತ್ತಿದೆ.
ಇದರಿಂದ ದೇವಸ್ಥಾನದ ಒಳಗಡೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುತ್ತಿದೆ. ಕಲ್ಲಿನ ಬೃಹತ್ ತೊಲೆಯೊಂದು ಕುಸಿದಿದ್ದು, ಇತರ ತೊಲೆಗಳು ಶಿಥಿಲಾವಸ್ಥೆ ತಲುಪಿ ಕುಸಿಯುವ ಹಂತದಲ್ಲಿವೆ. ಕಟ್ಟಡಕ್ಕೆ ಪೂರ್ಣ ಹಾನಿಯಾಗುವ ಮುನ್ನ ಪುರಾತನ ದೇಗುಲವನ್ನು ನವೀಕರಣ ಮಾಡಬೇಕಾದ ಅಗತ್ಯವಿದೆ.

ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗವೇ ಈ ದೇವಾಲಯ ಇದ್ದು, ಸಾಕ್ಷಾತ್ ಬದರಿನಾರಾಯಣ ಲಕ್ಷ್ಮೀದೇವಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಂತ್ರ ಉಪದೇಶ ಮಾಡುತ್ತಿದ್ದಾನೆ ಎನ್ನುವ ನಂಬಿಕೆ ಇದೆ. ಅಂಜಲಿ ಮುದ್ರೆಯಲ್ಲಿ ಕುಳಿತ ಆಚಾರ್ಯ ರಾಮಾನುಜರ ಮೂರ್ತಿಯೂ ಇಲ್ಲಿದೆ.
ಬದರಿನಾರಾಯಣನ ದರ್ಶನ ಪೂರ್ಣಫಲ: ಉತ್ತರ ಬದರಿನಾಥನ ದರ್ಶನ ಪಡೆದ ಭಕ್ತರು, ದಕ್ಷಿಣ ಬದರಿಕಾಶ್ರಮವಾದ ಮೇಲುಕೋಟೆಯ ಬದರಿನಾರಾಯಣನ ದರ್ಶನ ಪಡೆದರೆ ಪೂರ್ಣ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇನ್ನು ಉತ್ತರ ಬದರಿಕಾಶ್ರಮಕ್ಕೆ ಹೋಗಲು ಸಾಧ್ಯವಾಗದಿದ್ದರೆ ಇಲ್ಲಿ ಬಂದು ದರ್ಶನ ಪಡೆದರೆ ಅಷ್ಟೇ ಫಲ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಬೃಹತ್ ಎಲಚಿ ವೃಕ್ಷದ ಅಚ್ಚರಿ: ಎಲಚಿವೃಕ್ಷ ಮಧ್ಯಮ ವರ್ಗ ಪ್ರಬೇದಧ ಗಿಡವಾಗಿದ್ದರೂ, ಮೇಲುಕೋಟೆಯಲ್ಲಿ ಬದರಿನಾರಾಯಣಸ್ವಾಮಿ ದೇಗುಲದ ಮೇಲೆ ಬೃಹದಾಕಾರವಾಗಿ ಬೆಳೆದು ಅಚ್ಚರಿ ಮೂಡಿಸಿದೆ. ಈ ಮರದ ಬೇರು ಭಕ್ತರಿಗೆ ಎಲ್ಲಿಯೂ ಕಾಣಸಿಗುವುದಿಲ್ಲ. ಧನುರ್ಮಾಸದ ವೇಳೆ ಪ್ರತಿದಿನ ಈ ವೃಕ್ಷಕ್ಕೆ ಚೆಲುವನಾರಾಯಣಸ್ವಾಮಿಯ ಸನ್ನಿಧಿಯಿಂದ ಪೂಜೆ ಮತ್ತು ನಿವೇದನ ನೆರವೇರುತ್ತದೆ.

ಬದರಿ ಕ್ಷೇತ್ರದ ಎಲಚಿಮರದ ಹಣ್ಣು, ಕಾಯಿಯನ್ನು ಸಂಗ್ರಹಿಸಿ ಸಂಕ್ರಾಂತಿಯಂದು ಎಳ್ಳು, ಅಕ್ಷತೆಯೊಂದಿಗೆ ಸೇರಿಸಿ ಮಗುವಿನ ತಲೆಯ ಮೇಲೆ ಸುರಿಯುವ ಸಂಪ್ರದಾಯವಿದೆ. ಇದರಿಂದ ಆಶೀರ್ವಾದ ಪಡೆದ ಮಗು ತುಂಬಾ ಬುದ್ಧಿಶಕ್ತಿಯಿಂದ ಬೆಳೆಯುತ್ತದೆ ಎಂಬ ನಂಬಿಕೆ ಇದೆ.
ಮೈಸೂರು ಪ್ರಾಚ್ಯವಸ್ತು ಇಲಾಖೆ ಇಂಜಿನಿಯರ್ ಮಹೇಶ್ ಮಾತನಾಡಿ, "ಮಳೆ ಹಾನಿಯಿಂದಾದ ಅನಾಹುತದ ವೇಳೆ ದೇವಾಲಯದ ಸ್ಥಿತಿಯನ್ನು ಪರಿಶೀಲಿಸಿದ್ದೇನೆ. ದೇಗುಲದ ನವೀಕರಣ ಅಗತ್ಯವಾಗಿದ್ದು, ಮಳೆ ನಿಂತ ನಂತರ ಕಾಮಗಾರಿ ಆರಂಭಿಸಿ ಸಂಪೂರ್ಣ ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಕಾರ್ಯ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications