ಮಂಡ್ಯ: ಹಣ ಡಬಲ್ ಮಾಡುವ ಆಸೆ ತೋರಿಸಿ ಖಾಸಗಿ ಕಂಪನಿಗಳಿಂದ ಬಡ ಜನರಿಗೆ ಮಹಾ ಮೋಸ
ಮಂಡ್ಯ, ಸೆಪ್ಟೆಂಬರ್ 02: ಕಷ್ಟ ಪಟ್ಟು ದುಡಿದ ಹಣ ಡಬ್ಬಲ್ ಆಗುವ ಆಸೆಗೆ ಬಿದ್ದು, ಖಾಸಗಿ ಕಂಪನಿಗಳಿಂದ ಮಹಾ ಮೋಸ ಹೋದ ಜನರ ಪಟ್ಟಿ ಕಂಡು ಮಂಡ್ಯ ಜಿಲ್ಲಾಡಳಿತ ದಂಗಾಗಿದೆ. ಹಣ ಕಟ್ಟಿಸಿಕೊಂಡು ಮೋಸ ಮಾಡಿದ ಖಾಸಗಿ ಕಂಪನಿಗಳ ವಿರುದ್ಧ ದೂರು ಕೊಡಲು ಹಾಗೂ ಹೇಗಾದರೂ ಸರಿ ತಮ್ಮ ದುಡ್ಡು ವಾಪಸ್ ಕೊಡಿಸುವಂತೆ ಪ್ರತಿನಿತ್ಯ ನೂರಾರು ಜನರು ಮಂಡ್ಯ ಜಿಲ್ಲಾಡಳಿತದ ಮೊರೆ ಹೋಗುತ್ತಿದ್ದಾರೆ.
ಪಿಎಸಿಎಲ್, ಹಿಂದೂಸ್ತಾನ್, ಅಗ್ರಿಗೋಲ್ಡ್ ಸೇರಿದಂತೆ ಹಲವು ಕಂಪನಿಗಳು ಏಜೆಂಟ್ಗಳಿಗೆ ಕಮಿಷನ್ ಆಸೆ ತೋರಿಸಿ ಬಡ ಜನರಿಂದ ಹಣ ಕಟ್ಟಿಸಿಕೊಂಡು ಹಣ ಡಬಲ್ ಮಾಡಿಕೊಡುವ ಭರವಸೆ ನೀಡಿದ್ದವು. ಜನರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ ಬಳಿಕ ಈ ಕಂಪನಿಗಳು ಕಚೇರಿಗಳನ್ನು ಮುಚ್ಚಿಕೊಂಡು ಪರಾರಿಯಾಗಿವೆ. ಇತ್ತ ಏಜೆಂಟ್ಗಳು ಕೂಡ ತಲೆ ಮರೆಸಿಕೊಂಡು ನಾಪತ್ತೆಯಾಗಿದ್ದಾರೆ. ಇದರಿಂದ ಕಷ್ಟ ಪಟ್ಟು ದುಡಿದ ಹಣವನ್ನು ಕಟ್ಟಿದ ಜನರು ಕಂಗಾಲಾಗಿದ್ದಾರೆ.

ಕೆಲವರು 20 ಸಾವಿರದಿಂದ 1 ಲಕ್ಷಕ್ಕೂ ಅಧಿಕ ಹಣ ಕಟ್ಟಿದ್ದರೆ, ಇನ್ನೂ ಕೆಲವರು ಪ್ರತಿ ನಿತ್ಯ 50 ಹಾಗೂ 100 ರೂಪಾಯಿಯಂತೆ ನಾಲ್ಕೈದು ವರ್ಷ ಜನರಿಂದ ಹಣ ನೀಡಿದ್ದಾರೆ. ಇದೀಗ ಕಂಪನಿಗಳು ನೀಡಿರುವ ಬಾಂಡ್ಗಳ ಅವಧಿ ಮುಗಿದ್ದಿದ್ದು ಜನ ಕಟ್ಟಿದ ಹಣ ವಾಪಾಸ್ ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಹಣ ಕಟ್ಟಿದವರಿಗೆ ಕಂಪನಿಗಳೇ ಶಾಕ್ ಕೊಟ್ಟಿದ್ದು, ಮಂಡ್ಯದಲ್ಲಿದ್ದ ಕಂಪನಿಯ ಕಚೇರಿಯೂ ಮಂಗಮಾಯವಾಗಿದೆ.
ಇದರಿಂದ ತಾವು ಮೋಸ ಹೋಗಿರುವ ಬಗ್ಗೆ ಅರಿತ ಜನ ನಮ್ಮ ಹಣ ವಾಪಸ್ ಕೊಡಿಸುವಂತೆ ಏಜೆಂಟರ್ಗಳಿಗೆ ದಂಬಾಲು ಬಿದ್ದಿದ್ದಾರೆ. ಕೆಲವು ಏಜೆಂಟರ್ಗಳು ಜನರನ್ನು ಎದುರಿಸಲಾಗದೇ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಹಣ ವಾಪಸ್ ಕೊಡಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿದ್ದು, ಹಣ ಕಳೆದುಕೊಂಡ ಜನ ಡಿ.ಸಿ ಕಚೇರಿಗೆ ಮುಗಿಬಿದ್ದಿದ್ದಾರೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಬಂದು ದೂರು ಸಲ್ಲಿಸುತ್ತಿದ್ದು, ಸಾವಿರಾರು ಜನರಿಂದ ಅಂದಾಜು 100 ಕೋಟಿಗೂ ಅಧಿಕ ಹಣ ಕಟ್ಟಿಸಿಕೊಂಡು ವಂಚನೆ ಮಾಡಲಾಗಿದೆ. ಹಣ ಕಳೆದುಕೊಂಡವರ ಸಂಖ್ಯೆ ನೋಡಿ ಜಿಲ್ಲಾಡಳಿತವೇ ದಂಗಾಗಿದ್ದು, ಈ ಪ್ರಕರಣದ ಮುಂದಿನ ತನಿಖೆ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.












Click it and Unblock the Notifications