ಚಿರತೆ ಭಯದಲ್ಲಿ ನಡುಗುತ್ತಿರುವ ದಕ್ಷಿಣ ಕೊಡಗಿನ ಜನ
ಮಡಿಕೇರಿ, ಅಕ್ಟೋಬರ್ 20: ದಕ್ಷಿಣ ಕೊಡಗಿನ ಕೆಲವೆಡೆ ಇದುವರೆಗೆ ಆನೆ, ಹುಲಿಗಳು ಗ್ರಾಮದಲ್ಲಿ ಭಯ ಹುಟ್ಟಿಸಿದ್ದವಾದರೂ ಚಿರತೆಗಳ ಕಾಟ ಇರಲಿಲ್ಲ. ಈಗ ಚಿರತೆ ಕಾಣಿಸಿಕೊಂಡು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ವಿರಾಜಪೇಟೆ ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿ ದಿನದಿಂದ ದಿನಕ್ಕೆ ನಾಯಿ ಹಾಗೂ ಮೇಕೆಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿರುವುದರ ಬಗ್ಗೆ ಮಾಹಿತಿ ತಿಳಿದ ಗ್ರಾಮಸ್ಥರು ತೋಟ, ರಸ್ತೆಗಳಲ್ಲಿ ಹುಡುಕಾಟ ನಡೆಸಿದಾಗ ಹೆಜ್ಜೆ ಗುರುತುಗಳು ಕಾಣಿಸಿವೆ. ಇದರಿಂದ ಗ್ರಾಮದಲ್ಲಿ ಚಿರತೆ ಅಡ್ಡಾಡುತ್ತಿರುವುದು ಖಾತರಿಯಾಗಿದೆ.
ಕಳೆದೊಂದು ತಿಂಗಳಿನಿಂದಲೂ ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಚಿರತೆ ಈಗಾಗಲೇ ಹಲವು ಸಾಕು ನಾಯಿಗಳನ್ನು ಬಲಿ ತೆಗೆದುಕೊಂಡಿದೆ. ರಾತ್ರಿ ಹೊತ್ತಿನಲ್ಲಿ ಗ್ರಾಮದೊಳಗೆ ಬಂದು ನಾಯಿಗಳ ಮೇಲೆ ದಾಳಿ ಮಾಡುತ್ತಿದೆ.
ಗ್ರಾಮದಲ್ಲಿ ದೇವರಕಾಡು ಇದ್ದು, ಇದರೊಳಗೆ ಅವಿತುಕೊಂಡಿರುವ ಚಿರತೆ ರಾತ್ರಿಯಾಗುತ್ತಿದ್ದಂತೆಯೇ ಬೇಟೆ ಆರಂಭಿಸುತ್ತಿದೆ. ಗ್ರಾಮಸ್ಥರು ಚಿರತೆ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅದರ ಹೆಜ್ಜೆ ಗುರುತುಗಳ ಆಧಾರದಲ್ಲಿ ಹುಡುಕಾಟ ನಡೆಸಿದ್ದಾರೆ. ಜತೆಗೆ ಬೋನಿಟ್ಟು ಸೆರೆಹಿಡಿಯಲು ಮುಂದಾಗಿದ್ದಾರೆ.
ಚಿರತೆ ತಿರುಗಾಡ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿದ್ದು ಚಿರತೆಯನ್ನು ಹಿಡಿದು ಕಾಡಿಗೆ ಬಿಡಿ ಎನ್ನುವುದು ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ. ಅಂತು ಚಿರತೆ ಸೆರೆ ಸಿಗುವ ತನಕ ಜನರಿಗೆ ನೆಮ್ಮದಿಯಂತು ಇಲ್ಲದಂತಾಗಿದೆ.