ನಾಗರಹೊಳೆ ಉದ್ಯಾನವನದಲ್ಲಿ ‘ಪ್ರಕೃತಿ ಶಿಬಿರ’
ಮಡಿಕೇರಿ, ಅಕ್ಟೋಬರ್ 21: ಅರಣ್ಯ ಇಲಾಖೆ ಮತ್ತು ಕರ್ನಾಟಕ ವೈಲ್ಡ್ ಲೈಫ್ ಫಸ್ಟ್ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೊಡಗು ಜಿಲ್ಲಾ ಸಮಿತಿ ಹಾಗೂ ಕೊಡಗು ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಪರಿಸರಾಸ್ತಕರಿಗೆ 'ಪ್ರಕೃತಿ ಶಿಬಿರ'(ನೇಚರ್ ಕ್ಯಾಂಪ್) ನಡೆಯಿತು.
ನಾಗರಹೊಳೆ ಉದ್ಯಾನವನದ 'ಜೀವ ವೈವಿಧ್ಯ' ಕುರಿತು ಮಾಹಿತಿ ನೀಡಿದ ಕರ್ನಾಟಕ ವೈಲ್ಡ್ ಲೈಫ್ ಫಸ್ಟ್ ನ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ, ಪಶ್ಚಿಮಘಟ್ಟವೆಂದರೆ ಕೇವಲ ಕಾಡಲ್ಲ. ಅದು ಜೀವ ಜಗತ್ತಿನ ಅತ್ಯಂತ ಸೂಕ್ಷ್ಮ ಕೊಂಡಿ. ಇಲ್ಲಿನ ಝರಿ, ಜಲಪಾತ, ಪ್ರಾಣಿ, ಪಕ್ಷಿ, ಕೀಟಗಳು ಮತ್ತು ಸಸ್ಯ ಸಂಪತ್ತಿಗೆ ಮನುಷ್ಯ ಯಾವುದೇ ಧಕ್ಕೆಯನ್ನುಂಟು ಮಾಡದೇ ಅವುಗಳನ್ನು ಸಂರಕ್ಷಿಸಿದರೆ ಮಾತ್ರ ಇಡೀ ಜೀವಿ ಸಂಕುಲವನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದರು.[ತಾಯಿ ಹಾಲು ಸಿಗದೆ ಹುಲಿಮರಿಗಳ ದಾರುಣ ಸಾವು]
ನಾಗರಹೊಳೆ ಕಾಡಿನಲ್ಲಿ 'ಪ್ರಕೃತಿ ನಡಿಗೆ'(ನೇಚರ್ ವಾಕ್)ಮೂಲಕ ಕಾಡು, ಝರಿಗಳು, ಕೆರೆಗಳು, ಗಿಡ-ಮರಗಳು, ವನ್ಯಪ್ರಾಣಿಗಳು, ಕೀಟಗಳು, ಹುತ್ತದ ಮಹತ್ವ, ಸಸ್ಯ ಪ್ರಭೇದಗಳ ವೈವಿಧ್ಯ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಡನ್ನು ಸಂರಕ್ಷಿಸಿದರೆ ಜೀವಿಗಳ ಸಂರಕ್ಷಣೆ ಆಗುತ್ತದೆ. ಕಾಳ್ಗಿಚ್ಚಿನಿಂದ ಅರಣ್ಯ ರಕ್ಷಿಸಬೇಕು. ಕಾಡಿನಲ್ಲಿ ಯಾವುದೇ ಜೀವಿಯ ಆವಾಸಕ್ಕೆ ಧಕ್ಕೆ ಮಾಡಬಾರದು ಎಂದು ಹೇಳಿದರು.
ಒಂದು ವೇಳೆ ಪರಿಸರದಲ್ಲಿ ಅಸಮತೋಲನ ಉಂಟಾದರೆ ಇಡೀ ಕಾಡೇ ನಾಶವಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ ಅವರು, ಪಶ್ಚಿಮಘಟ್ಟಗಳ ಪ್ರಕೃತಿಯನ್ನು ನಿರ್ಲಕ್ಷ್ಯ ಮಾಡದೆ ಅದರ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.[ಬಂಡೀಪುರ, ನಾಗರಹೊಳೆಯಲ್ಲಿ ವನ್ಯಮೃಗಗಳ ದಹನ!]
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಕರ್ನಾಟಕ ವೈಲ್ಡ್ ಲೈಫ್ ಫಸ್ಟ್ ನ ಸಮಿತಿ ಸದಸ್ಯ ಕೆ.ಎನ್.ಬೋಸ್ ಮಾದಪ್ಪ, ಶಿಬಿರದ ಸಂಚಾಲಕ ಡಿ.ಕೃಷ್ಣಚೈತನ್ಯ, ನ್ಯಾಚುರಲಿಸ್ಟ್ ಗೋಪಿ, ಪರಿಸರ ಪ್ರೇಮಿಗಳಾದ ರಾಜೇಶ್, ಭಾಸ್ಕರ್, ಸುಧೀಂದ್ರ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೆರಾ ಇನ್ನಿತರರು ಇದ್ದರು.