ಕೊಡಗಿನಲ್ಲಿ 14 ಕೆ.ಜಿ ಗಾಂಜಾ ಸಹಿತ 6 ಮಂದಿ ಬಂಧನ
ಕೊಡಗು, ಜುಲೈ 30: ಕೊಡಗು ಜಿಲ್ಲೆಯಾದ್ಯಂತ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಹೊರ ಜಿಲ್ಲೆಯ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
5 ಲಕ್ಷ ರು. ಮೌಲ್ಯದ 14 ಕೆ.ಜಿ. ಗಾಂಜಾ ಹಾಗೂ ಪ್ರಕರಣಕ್ಕೆ ಬಳಸಿದ ಮಾರುತಿ (800) ಕಾರನ್ನು ವಶಪಡಿಸಿಕೊಳ್ಳುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಣಸೂರಿನ ಮೀನು ವ್ಯಾಪಾರಿ ಹೆಚ್.ಎಸ್.ಇಸ್ಮಾಯಿಲ್ ಶರೀಫ್(34), ಶಿವಜ್ಯೋತಿ ನಗರದ ಚಾಲಕ ಕೆ.ಮಹೇಶ್(30), ಕೊಯಂಬತ್ತೂರು ಕಾಲೋನಿಯ ಕೃಷಿಕ ಕೆ. ರಾಜೇಗೌಡ(61), ಭೀಮನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಸೋಮೇಶ್(20), ಸುಂಟಿಕೊಪ್ಪದ ವ್ಯಾಪಾರಿ ಇ.ಇರ್ಫಾನ್(27), ಪಿರಿಯಾಪಟ್ಟಣದ ಹಾರ್ನಳ್ಳಿ ಗ್ರಾಮದ ಕೃಷಿಕ ಎನ್.ನಾಸೀರ್ ಶರೀಫ್(23) ಬಂಧಿತ ಆರೋಪಿಗಳಾಗಿದ್ದಾರೆ.
ಕೊಡಗು ಪೊಲೀಸ್ ಇಲಾಖೆಗೆ ದೊರೆತ ಖಚಿತ ಮಾಹಿತಿಯನ್ವಯ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ ಪಿ ಸಿ. ಸಂಪತ್ ಕುಮಾರ್ ಅವರ ನೇತೃತ್ವದ ತಂಡ ಕುಶಾಲನಗರ ಪಟ್ಟಣದ ಸಂತೆ ಮಾಳದ ನಿರ್ಜನ ಪ್ರದೇಶದಲ್ಲಿ ಮಾರುತಿ 800 ವಾಹನವನ್ನು ಸುತ್ತುವರೆದ ಸಂದರ್ಭ ಆರು ಮಂದಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರಾದರೂ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಳಿಯಿದ್ದ ತಲಾ ಎರಡು ಕೆ.ಜಿ. ತೂಕದ ಏಳು ಪ್ಯಾಕೆಟ್ ಗಾಂಜಾ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡರು. ಪತ್ತೆಯಾದ ಗಾಂಜಾದ ಒಟ್ಟು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದ ಅವರು, ಗಾಂಜಾವನ್ನು ಆಂಧ್ರ ಪ್ರದೇಶದ ಹಿಂದೂಪುರ ಎಂಬಲ್ಲಿಂದ ಸರಬರಾಜು ಮಾಡಿಸಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಕುಶಾಲನಗರಕ್ಕೆ ಬಂದಿರುವುದಾಗಿ ಆರೋಪಿಗಳು ವಿಚಾರಣೆ ಸಂದರ್ಭ ತಿಳಿಸಿದ್ದಾರೆ.
ಆಂಧ್ರಪ್ರದೇಶದಿಂದ ತರಿಸಲಾಗಿದ್ದ ಗಾಂಜಾವನ್ನು ಜಿಲ್ಲೆಯಲ್ಲಿ ಮಾರಾಟ ಮಾಡುವುದಕ್ಕಾಗಿ ಸುಂಟಿಕೊಪ್ಪದ ಇರ್ಫಾನ್ ನನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಕೊಡಗು ಪೊಲೀಸರು ಪತ್ತೆ ಹಚ್ಚಿದ ದೊಡ್ಡ ಗಾಂಜಾ ಪ್ರಕರಣ ಇದಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಕುಶಾಲನಗರ ಠಾಣಾಧಿಕಾರಿ ಪಿ. ಜಗದೀಶ್, ಕುಶಾಲನಗರ ಅಪರಾಧ ಪತ್ತೆದಳದ ಸಿಬ್ಬಂದಿ ಎಎಸ್ಐ ಗೋಪಾಲ, ಪಿ.ವಿ. ಸುರೇಶ್, ಸುಧೀಶ್ ಕುಮಾರ್, ಮುಸ್ತಫ, ಉದಯ ಕುಮಾರ್, ವಿ. ಪ್ರಕಾಶ್, ಸಂಪತ್ ರೈ, ಚಾಲಕ ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕುಶಾಲನಗರ ಠಾಣೆಯ ಎಎಸ್ಐ ಗೀತಾ, ಸಿಬ್ಬಂದಿ ಉಮೇಶ್, ಅನಂತ ಕುಮಾರ್ ಹಾಗೂ ನಿಶಾ ತನಿಖೆಗೆ ಸಹಕರಿಸಿದ್ದಾರೆಂದು ಎಸ್ಪಿ ಮಾಹಿತಿ ನೀಡಿದರು.
ಕಾರ್ಯಾಚರಣೆ ನಡೆಸಿದ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನವನ್ನು ನೀಡುವುದಾಗಿ ಅವರು ಹೇಳಿದರು.












Click it and Unblock the Notifications