ಎಸ್ಪಿ-ಆರ್ಎಲ್ಡಿ ಕಾದಾಟ: ಯುಪಿಯ ಜಾಟ್ ಭದ್ರಕೋಟೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್!
ಲಕ್ನೋ, ಜನವರಿ 25: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಚಾರ ಹೊಸ ಸಮಸ್ಯೆಯನ್ನು ಹುಟ್ಟು ಹಾಕುವ ಲಕ್ಷಣಗಳು ಗೋಚರಿಸುತ್ತಿವೆ.
ಮೀರತ್ ಜಿಲ್ಲೆಯಲ್ಲಿರುವ ಭಾಗಪತ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಿವಾಲ್ಖಾಸ್ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಜಾಟ್ ಸಮುದಾಯ ಪ್ರಬಲವಾಗಿರುವ ಈ ಕ್ಷೇತ್ರವ್ಯಾಪ್ತಿಯನ್ನು ಎಸ್ಪಿಗೆ ಬಿಟ್ಟು ಕೊಟ್ಟಿರುವ ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ ನಿರ್ಧಾರವನ್ನು ಪಕ್ಷದ ಕೆಲವು ಪ್ರಮುಖ ಜಾಟ್ ಸಮುದಾಯದ ನಾಯಕರು ವಿರೋಧಿಸಿದ್ದಾರೆ.
ಸಿವಾಲ್ಖಾಸ್ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಗುಲಾಂ ಮೊಹಮ್ಮದ್ ಸ್ಪರ್ಧೆಗೆ ರಾಷ್ಟ್ರೀಯ ಲೋಕ ದಳ ಪಕ್ಷದ ಜಾಟ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೀರತ್ ಜಿಲ್ಲೆಯ ಎರಡು ಕ್ಷೇತ್ರಗಳ ಬಗ್ಗೆ ಭಿನ್ನರಾಗ
ಉತ್ತರ ಪ್ರದೇಶದ ಮೀರತ್ನ ಸರ್ಧಾನ್ ಮತ್ತು ಹಸ್ತಿನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಕ್ಕೆ ಆರ್ಎಲ್ಡಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರೂ ಜಾಟ್ಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಬೆಳೆಯುತ್ತಿದೆ.

ಜಾಟ್ ಪ್ರಾಬಲ್ಯ ಹೊಂದಿರುವ ಭಾಗಪತ್
ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರ ಅಜ್ಜ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಚರಣ್ ಸಿಂಗ್ ಅವರ ಮಗ ಅಜಿತ್ ಸಿಂಗ್ ಕೂಡ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಬಾಗಪತ್ ವಿಧಾನಸಭಾ ಕ್ಷೇತ್ರವು ಹಿಂದಿನಿಂದಲೂ ಜಾಟ್ ಸಮುದಾಯದ ಭದ್ರಕೋಟೆ ಎನಿಸಿದೆ. ಈ ಬಾರಿ ಸಿವಾಲ್ಖಾಸ್ ಕ್ಷೇತ್ರದಲ್ಲಿ ಆರ್ಎಲ್ಡಿಯ ಜಾಟ್ ನಾಯಕರಾದ ಸುನಿಲ್ ರೋಹ್ತಾ, ರಾಜ್ ಕುಮಾರ್ ಸಂಗ್ವಾನ್ ಮತ್ತು ಯಶ್ವೀರ್ ಸಿಂಗ್ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಆದರೆ, ಈ ಕ್ಷೇತ್ರವನ್ನು ಸಮಾಜವಾದಿ ಪಕ್ಷಕ್ಕೆ ಬಿಟ್ಟುಕೊಟ್ಟಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ.

ಸಮಾಜವಾದಿ ಪಕ್ಷದ ಅಭ್ಯರ್ಥಿ ಸ್ಪರ್ಧೆಗೆ ಅಸಮಾಧಾನ
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ಅತಿಹೆಚ್ಚು ಜಾಟ್ ನಾಯಕರು ಸಿವಾಲ್ಖಾಸ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಆರ್ಎಲ್ಡಿಯಲ್ಲಿ ಆಂತರಿಕ ಕಿತ್ತಾಟಕ್ಕೆ ಕಾರಣವಾಗಿದೆ ಎಂದು ಪಕ್ಷದ ನಾಯಕ ಗುಲಾಂ ಮೊಹಮ್ಮದ್ ಒಪ್ಪಿಕೊಂಡಿದ್ದಾರೆ. "ನನಗೆ ಟಿಕೆಟ್ ಸಿಗದಿದ್ದರೆ, ನಮ್ಮ ಜನರು ಅದೇ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಈಗ ಟಿಕೆಟ್ ಕೇಳುವ ಆರ್ಎಲ್ಡಿ ಜನರಲ್ಲೂ ಅಂಥದ್ದೇ ಭಾವನೆ ಇದೆ," ಎಂದು ಹೇಳಿದ್ದಾರೆ. "ನಾವೆಲ್ಲರೂ ರೈತ ಕುಟುಂಬಗಳಿಗೆ ಸೇರಿದವರು, ಚೌಧರಿ ಸಮುದಾಯದ ಮುಖಂಡರು ರೈತ ಚಳವಳಿಯಲ್ಲಿ ಸಕ್ರಿಯವಾಗಿರುವುದು ನಿಜ, ಆದರೆ ಮುಸ್ಲಿಂ ರೈತರು ಸಹ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ," ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಗುಲಾಂ ಮೊಹಮ್ಮದ್ ಹೇಳಿದ್ದಾರೆ.

ಸಿವಾಲ್ಖಾಸ್ ಕ್ಷೇತ್ರದಲ್ಲಿ ರಾಜಕೀಯ ಏರಿಳಿತ
ಕಳೆದ 2017ರ ವಿವಾಲ್ಥಾಸ್ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಅಂದಿನ ಹಾಲಿ ಶಾಸಕ ಗುಲಾಂ ಮೊಹಮ್ಮದ್ ವಿರುದ್ಧ ಬಿಜೆಪಿ ಅಭ್ಯರ್ಥಿ ಜೀತೇಂದ್ರ ಪಾಲ್ ಸಿಂಗ್ ಗೆಲುವು ಸಾಧಿಸಿದರು. 13,990 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಅಂದು ಆರ್ಎಲ್ಡಿ ಅಭ್ಯರ್ಥಿ ರಣವೀರ್ ರಾಣಾ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು, 2002ರಲ್ಲಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ರಣವೀರ್ ರಾಣಾ, 2007ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಎದುರು ಸೋಲು ಕಂಡಿದ್ದರು.
ಪ್ರಸ್ತುತ ಇದೇ ಕ್ಷೇತ್ರದಲ್ಲಿ RLD ಪ್ರಮುಖ ಸ್ಪರ್ಧಾಕಾಂಕ್ಷಿ ಆಗಿರುವ ಸುನಿಲ್ ರೋಹ್ತಾ ಪಶ್ಚಿಮ ಉತ್ತರ ಪ್ರದೇಶದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ಜಾಟ್ ಬೆಲ್ಟ್ನಲ್ಲಿರುವ ಮುಸ್ಲಿಮರು ಸಹ ಸಮಾಜವಾದಿ ಅಭ್ಯರ್ಥಿ ಗುಲಾಂ ಮೊಹಮ್ಮದ್ ವಿರುದ್ಧವಾಗಿದ್ದಾರೆ. ಈ ಕ್ಷೇತ್ರದಲ್ಲಿ ಶೇ.25ಕ್ಕೂ ಹೆಚ್ಚು ಮತದಾರರು ಮುಸ್ಲಿಮರಾಗಿದ್ದು, ಇದೀಗ ಮೈತ್ರಿಯೊಳಗಿನ ಕಿತ್ತಾಟ ಬಿಜೆಪಿಗೆ ಲಾಭವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಮೊದಲ ಹಂತದ ಚುನಾವಣೆಗೆ ಸೀಟು ಹಂಚಿಕೆ ಹೀಗಿದೆ
ಪಶ್ಚಿಮ ಉತ್ತರ ಪ್ರದೇಶದಲ್ಲಿ 29 ಮೈತ್ರಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 19 ಸ್ಥಾನಗಳು ಆರ್ಎಲ್ಡಿ ಮತ್ತು 10 ಸ್ಥಾನಗಳನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿಗೆ ನೀಡಲಾಗಿದೆ. ತದನಂತರ ಬಿಡುಗಡೆ ಆಗಿರುವ ಎರಡನೇ ಪಟ್ಟಿಯಲ್ಲಿ ಏಳು ಸ್ಥಾನಗಳು ಆರ್ಎಲ್ಡಿ ಪಾಲಾಗಿದ್ದು, ಒಟ್ಟು 26 ಸ್ಥಾನಗಳಲ್ಲಿ ಸ್ಪರ್ಧಿಸಲಾಗುತ್ತಿದೆ. ಈ ಪೈಕಿ ಬಹುತೇಕ ಸ್ಥಾನಗಳು ಜಾಟ್ ಮತ್ತು ಮುಸ್ಲಿಮರ ಪಾಲಾಗಿದೆ. ಫೆಬ್ರವರಿ 10ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಈ ಪ್ರದೇಶದಲ್ಲಿ 10 ಮುಸ್ಲಿಂ ಮತ್ತು 7 ಜಾಟ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ.












Click it and Unblock the Notifications