ಉ.ಪ್ರ.ದಲ್ಲಿ ಸಿಕ್ಕಿಬಿದ್ದ ಕಾಶ್ಮೀರಿ ಯುವಕರು ಬಾಯ್ಬಿಟ್ಟರು ಸ್ಫೋಟಕ ಮಾಹಿತಿ
Recommended Video

ಲಖನೌ (ಉತ್ತರಪ್ರದೇಶ), ಫೆಬ್ರವರಿ 25: ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ ಬಂಧಿಸಿದ ಕಾಶ್ಮೀರಿ ಯುವಕರು ತಪ್ಪೊಪ್ಪಿಕೊಂಡಿದ್ದಾರೆ. ಜೈಶ್ ಇ ಮೊಹ್ಮದ್ ನ ಮಾಸ್ಟರ್ ಮೈಂಡ್ ಗಳ ಜತೆಗೆ ತಮ್ಮ ಸಂಪರ್ಕ ಇತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಸಹರಾನ್ ಪುರ್ ನ ದೇವ್ ಬಂದ್ ಟೌನ್ ಶಿಪ್ ನಿಂದ ಈ ಇಬ್ಬರು ಕಾಶ್ಮೀರಿ ಯುವಕರನ್ನು ಬಂಧಿಸಲಾಗಿತ್ತು.
ಭಯೋತ್ಪಾದನಾ ದಾಳಿಗೆ ಯೋಜನೆ ರೂಪಿಸುತ್ತಿದ್ದರು ಎಂಬುದು ಗೊತ್ತಿತ್ತು. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಜತೆಗೆ ಸಂಪರ್ಕ ಇತ್ತು ಎಂಬುದನ್ನು ಹೇಳಿದ್ದಾರೆ. ಉಗ್ರ ದಾಳಿ ನಡೆದ ಐದು ದಿನಗಳ ನಂತರ ಅಬ್ದುಲ್ ರಶೀದ್ ಘಾಜಿಯನ್ನು ಭದ್ರತಾ ಪಡೆಯು ಕೊಂದು ಹಾಕಿತ್ತು.
ತನಿಖಾಧಿಕಾರಿಗಳ ಪ್ರಕಾರ, ಇಬ್ಬರು ಯುವಕರ ಪೈಕಿ ಕುಲ್ಗಾಮ್ ನ ಶಾನವಾಜ್ ತೆಲಿ ಮೊಬೈಲ್ ನಿಂದ ಧ್ವನಿ ಸಂದೇಶವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ "ಬಡಾ ಕಾಮ್" (ದೊಡ್ಡ ಕೆಲಸ) ಹಾಗೂ "ಸಾಮಾನ್" (ಸರಕು) ಎಂದು ಮಾತನಾಡಲಾಗಿದೆ. ಮತ್ತೊಬ್ಬ ಯುವಕನು ಅಬ್ದುಲ್ ಅಕಿಬ್ ಮಲ್ಲಿಕ್ ಪುಲ್ವಾಮಾದವನು. ಆತನನ್ನು ಕೂಡ ಬಂಧಿಸಲಾಗಿದೆ.

ಶಸ್ತ್ರಾಸ್ತ್ರ, ಸ್ಫೋಟಕ ಎಂಬುದಕ್ಕೆ ಕೋಡ್ ವರ್ಡ್ ಬಳಕೆ
ಈ ಮಾತುಕತೆಯಲ್ಲೇ ದೊಡ್ಡ ಕಾರ್ಯಾಚರಣೆ ಯೋಜಿಸಿದ್ದರು ಎಂಬುದು ಗೊತ್ತಾಗುತ್ತದೆ. ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕಗಳು ಎಂಬ ಪದಗಳ ಬದಲಿಗೆ "ಸಾಮಾನ್" ಎಂದು ಬಳಸಲಾಗಿದೆ. ಇಬ್ಬರೂ ಕಾಶ್ಮೀರಿ ಯುವಕರು ಜೈಶ್ ಇ ಮೊಹ್ಮದ್ ಜತೆಗಿನ ತಮ ನಂಟನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ.

ಹದಿನೆಂಟು ತಿಂಗಳಿಂದ ಸಂಪರ್ಕದಲ್ಲಿ
ವಿಚಾರಣೆ ವೇಳೆ ಶಾ ನವಾಜ್ ಬಾಯಿ ಬಿಟ್ಟಿರುವ ಪ್ರಕಾರ, ಜೈಶ್ ಉಗ್ರ ಸಂಘಟನೆ ಜತೆಗೆ ಆತನಿಗೆ ಹದಿನೆಂಟು ತಿಂಗಳಿಂದ ನಂಟಿದೆ. ಆದರೆ ಅಕಿಬ್ ಆರು ತಿಂಗಳ ಹಿಂದಷ್ಟೇ ಇವರ ಜತೆ ಸೇರಿದ್ದಾನೆ. ಫೆಬ್ರವರಿ ಹತ್ತೊಂಬತ್ತನೇ ತಾರೀಕಿನಂದು ಭಾರತೀಯ ಸೇನೆಯಿಂದ ಹತ್ಯೆಗೀಡಾದ ಘಾಜಿ ಜತೆಗೆ ತನ್ನ ನಂಟಿತ್ತು ಎಂಬುದನ್ನು ಶಾನವಾಜ್ ಒಪ್ಪಿಕೊಂಡಿದ್ದಾನೆ.

ಏನಾದರೂ ಬೇಗ ಮಾಡಬೇಕೆಂಬ ಧ್ವನಿ ಸಂದೇಶ
ಜೈಶ್ ಇ ಮೊಹ್ಮದ್ ನ ಟಾಪ್ ಕಮ್ಯಾಂಡರ್ ಗಳನ್ನು ಭೇಟಿ ಆಗಿದ್ದು, ಅವರ ಸೂಚನೆ ಮೇರೆ ಸಂಘಟನೆಗೆ ಸೇರಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ. ಕೆಲವು ಸಂದೇಶಗಳನ್ನು ಮೊಬೈಲ್ ನಿಂದ ಬಸಿದುಕೊಂಡಿದ್ದು, ಅದರಲ್ಲಿ ಇರುವ ಎರಡು ಧ್ವನಿ ಸಂದೇಶದಲ್ಲಿ, ಕುಛ್ ಕರ್ನಾ ಹೇ ಜಲ್ದೀ (ಏನಾದರೂ ಬೇಗ ಮಾಡಬೇಕು) ಎನ್ನಲಾಗಿದೆ. ಇದರ ಜತೆಗೆ ಎಲ್ಲೆಲ್ಲಿ ಶಸ್ತ್ರಾಸ್ತ್ರ ತೆಗೆದುಕೊಳ್ಳಬಹುದು ಎಂಬ ಸ್ಥಳಗಳನ್ನು ಕೂಡ ಪ್ರಸ್ತಾಪ ಮಾಡಿರುವುದನ್ನು ವಿಚಾರಣಾಧಿಕಾರಿ ತಿಳಿಸಿದ್ದಾರೆ.

ಉಗ್ರರ ತರಬೇತಿ ನಡೆಯುತ್ತಿದ್ದ ಜಾಗ ತೋರಿಸೆಂದು ಕಾಶ್ಮೀರಕ್ಕೆ ಕರೆದೊಯ್ತಾರೆ
ಇಬ್ಬರೂ ಆರೋಪಿಗಳು ಬ್ಲಾಕ್ ಬೆರಿ ಮೆಸೇಜ್ ಬಳಸಿ, ಸಂದೇಶಗಳ ವಿನಿಮಯ ಮಾಡಿಕೊಂಡಿದ್ದಾರೆ. ಇವರಿಬ್ಬರನ್ನೂ ಕಾಶ್ಮೀರಕ್ಕೆ ಕರೆದೊಯ್ದು, ಉಗ್ರರಿಗೆ ತರಬೇತಿ ನೀಡಲು ಎಲ್ಲೆಲ್ಲಿ ಡಮ್ಮಿ ಗ್ರನೇಡ್ ಗಳನ್ನು ಇಡಲಾಗಿದೆ ಎಂದು ಪತ್ತೆ ಮಾಡಲು ಯತ್ನಿಸಲಾಗುವುದು. ಶಾನವಾಜ್ ತನ್ನ ಮೊದಲ ವರ್ಷದ ಬಿ.ಎ., ಮುಗಿಸಿ, ಕಂಪ್ಯೂಟರ್ ಕೋರ್ಸ್ ಮಾಡಿದ್ದಾರೆ. ಅಕಿಬ್ ಹನ್ನೆರಡನೇ ತರಗತಿ ಪಾಸಾಗಿದ್ದಾನೆ. ಶಾನವಾಜ್ ನ ತಂದೆ ವೃತ್ತಿಯಿಂದ ಬಡಗಿ. ದೊಡ್ಡ ಅಣ್ಣ ಶಿಕ್ಷಕ. ಇನ್ನು ಅಕಿಬ್ ನ ತಂದೆ ರೈತರು. ಇವರಿಬ್ಬರ ಜತೆಗೆ ಇದ್ದ ಇತರ ವಿದ್ಯಾರ್ಥಿಗಳ ವಿಚಾರಣೆಯನ್ನು ಸಹ ಮಾಡಲಾಗುತ್ತದೆ.












Click it and Unblock the Notifications