ಕೇರಳ ಬಿಟ್ಟು ಪಶ್ಚಿಮ ಬಂಗಾಳದ ಕಡೆ ಹೋಗದ ರಾಹುಲ್: ಕಾರಣವೇನು?
ಕೋಲ್ಕತ್ತಾ, ಮಾರ್ಚ್ 19: ಕೇರಳದಲ್ಲಿ ಮತದಾನ ಮುಗಿದ ನಂತರವಷ್ಟೇ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಮೂಲಗಳು ತಿಳಿಸಿವೆ. ಮೈತ್ರಿ ಕಾರಣದಿಂದಾಗಿ ಪಶ್ಚಿಮ ಬಂಗಾಳ ಕಾಂಗ್ರೆಸ್, ತನ್ನ ಪ್ರಮುಖ ನಾಯಕನನ್ನು ಸದ್ಯಕ್ಕೆ ಪ್ರಚಾರದಿಂದ ದೂರವಿರಿಸಿದೆ ಎಂದು ತಿಳಿದುಬಂದಿದೆ.
ಕೇರಳಕ್ಕೆ ಈಚೆಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಅಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಅಲ್ಲಿನ ಎಲ್ಡಿಎಫ್ ಸರ್ಕಾರವನ್ನು ಟೀಕಿಸಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಎಡಪಕ್ಷದೊಂದಿಗೆ ಮೈತ್ರಿಯಲ್ಲಿದ್ದು, ರಾಹುಲ್ ಗಾಂಧಿ ಎಡ ಪಕ್ಷ ಮುಖಂಡರ ಪರ ಪ್ರಚಾರ ಮಾಡಿದರೆ, ಮತದಾರರಿಗೆ ಗೊಂದಲ ಮೂಡಿಸುತ್ತದೆ ಎಂದು ಪಕ್ಷದ ತಂತ್ರಜ್ಞರು ತಿಳಿಸಿದ್ದಾರೆ. ಈ ಕಾರಣದಿಂದ ರಾಹುಲ್ ಗಾಂಧಿ ಸದ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಿಂದ ದೂರವುಳಿದಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

ರಾಹುಲ್ ಪ್ರಚಾರ ಗೊಂದಲ ಮೂಡಿಸುವುದೇಕೆ?
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಎಡ ಪಕ್ಷದೊಂದಿಗೆ ಮೈತ್ರಿಯಲ್ಲಿದೆ. ಆದರೆ ಕೇರಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ನೇತೃತ್ವದ ಎಲ್ಡಿಎಫ್ ವಿರುದ್ಧ ನಿಂತಿದೆ. ಜೊತೆಗೆ ಕೇರಳದಲ್ಲಿ ರಾಹುಲ್ ಗಾಂಧಿ ವ್ಯಾಪಕ ಪ್ರಚಾರ ನಡೆಸಿದ್ದು, ಸಾರ್ವಜನಿಕ ಸಭೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಪಕ್ಷವನ್ನು ಟೀಕಿಸಿದ್ದರು. ಹೀಗಿದ್ದಾಗ ಅದೇ ಪಕ್ಷದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಇರುವುದು ಮತದಾರರಿಗೆ ಗೊಂದಲ ಉಂಟು ಮಾಡಬಹುದು ಎನ್ನಲಾಗಿದೆ.

ಕೇರಳ ಚುನಾವಣೆ ಮುಗಿದ ನಂತರ ಬಂಗಾಳಕ್ಕೆ
ಬಂಗಾಳದಲ್ಲಿ ಎಡ ಪಕ್ಷ ಮುಖಂಡರೊಂದಿಗೆ ರಾಹುಲ್ ಗಾಂಧಿ ಪ್ರಚಾರ ಕೈಗೊಂಡರೆ, ಕೇರಳದಲ್ಲಿ ಪಕ್ಷದ ಭವಿಷ್ಯಕ್ಕೇ ತೊಂದರೆಯಾಗುತ್ತದೆ ಎಂದು ಪಕ್ಷದ ತಂತ್ರಜ್ಞರು ತಿಳಿಸಿದ್ದಾರೆ. ಹೀಗಾಗಿ ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ನಂತರವೇ ರಾಹುಲ್ ಗಾಂಧಿ ಬಂಗಾಳದಲ್ಲಿ ಪ್ರಚಾರಕ್ಕೆ ಬರಲಿರುವುದಾಗಿ ನಿರ್ಧರಿಸಲಾಗಿದೆ.

ಕೊನೆ ಐದು ಹಂತದ ಚುನಾವಣೆಗಳು ಕಾಂಗ್ರೆಸ್ಗೆ ಮುಖ್ಯ
ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಆರಂಭವಾಗಲಿದೆ. ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ಗೆ ಉತ್ತಮ ಅವಕಾಶ ನೀಡಬಲ್ಲ ಹೆಚ್ಚಿನ ಕ್ಷೇತ್ರಗಳು ಕೊನೆಯ ಐದು ಹಂತಗಳ ಚುನಾವಣೆಯಲ್ಲಿ ಒಳಗೊಂಡಿವೆ. ಹೀಗಾಗಿ ಕಾಂಗ್ರೆಸ್ ಪ್ರಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎನ್ನಲಾಗಿದೆ.

294 ಕ್ಷೇತ್ರಗಳಿಗೆ ಚುನಾವಣೆ
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.












Click it and Unblock the Notifications