ಹಿಂದಿ ಅಲ್ಲ, ಗುಜರಾತಿ ಅಲ್ಲ, ಬಂಗಾಳಿ ಮೇಲೆ ಅಮಿತ್ ಶಾ ಕಣ್ಣು
ಕೋಲ್ಕತ್ತಾ, ಜನವರಿ.01: ಕೇಸರಿ ಪಡೆಯ ರಾಜಕೀಯ ಚಾಣಕ್ಯ ಎಂದೇ ಪ್ರಸಿದ್ಧಿ ಪಡೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆಲುವಿಗೆ ಹೊಸ ಮಾರ್ಗ ಕಂಡು ಕೊಂಡಿದ್ದಾರೆ. ಸಾಲು ಸಾಲು ಸೋಲಿನಿಂದ ಕುಗ್ಗಿರುವ ಕಮಲ ಪಾಳಯದಲ್ಲಿ ಹುಮ್ಮಸ್ಸು ತುಂಬಲು ತಂತ್ರಗಾರಿಕೆ ಹೆಣೆದಿದ್ದಾರೆ.
ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ನಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸೋತಿದೆ. ಈಗ ಬಿಜೆಪಿ ಚಾಣಕ್ಯನ ಕಣ್ಣು ದೀದಿಯ ಭದ್ರಕೋಟೆ ಪಶ್ಚಿಮ ಬಂಗಾಳದ ಮೇಲೆ ಬಿದ್ದಿದೆ. ಮುಂದಿನ ವರ್ಷ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತಯಾರಿ ಈಗಿನಿಂದಲೇ ಶುರುವಾಗಿದೆ.
ಮಂಗಳೂರು ಗೋಲಿಬಾರ್; ಮೃತಪಟ್ಟವರಿಗೆ ಪರಿಹಾರ ಘೋಷಿಸಿದ ದೀದಿ!
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಅಮಿತ್ ಶಾ, ಭಾಷಾತಂತ್ರ ಹೆಣೆಯುತ್ತಿದ್ದಾರೆ. ಹಿಂದಿ, ಗುಜರಾತಿಯಲ್ಲಿ ಪರಿಣಿತಿ ಪಡೆದಿರುವ ಅಮಿತ್ ಶಾ ಬಂಗಾಳಿ ಭಾಷೆ ಕಲಿಯಲು ಮುಂದಾಗಿದ್ದಾರೆ. ಅದಕ್ಕಾಗಿ ತರಬೇತಿದಾರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾಷೆ ಮೂಲಕ ಜನರನ್ನು ತಲುಪುವ ತಂತ್ರ:
2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರಕೋಟೆಯಲ್ಲಿ ಈ ಬಾರಿ ಗೆಲುವಿನ ಬಾವುಟ ಹಾರಿಸಲು ಬಿಜೆಪಿ ಸ್ಕೆಚ್ ಹಾಕಿಕೊಂಡಿದೆ. ಅದರ ಪ್ರಾಥಮಿಕ ಪ್ರಯೋಗವಾಗಿ ಸ್ವತಃ ಅಮಿತ್ ಶಾ ಬಂಗಾಳಿ ಕಲಿಯಲು ಮುಂದಾಗಿದ್ದಾರೆ. ಆ ಮೂಲಕ ರಾಜ್ಯದ ಜನರನ್ನು ಸ್ಥಳೀಯ ಭಾಷೆ ಮೂಲಕ ಆಕರ್ಷಿಸುವ ತಂತ್ರಗಾರಿಕೆ ಮಾಡಿದ್ದಾರೆ.
ಬಂಗಾಳಿ ಜೊತೆಗೆ ತಮಿಳು ಭಾಷೆಯನ್ನು ಕಲಿಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತರಬೇತಿ ಪಡೆಯುತ್ತಿದ್ದಾರೆ. ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಪರಿಣಿತಿ ಪಡೆದಿರುವ ಶಾ, ಇದೀಗ ಮತ್ತೆರೆಡು ಭಾಷೆಗಳನ್ನು ಕಲಿಯಲು ತರಬೇತಿ ಪಡೆಯುತ್ತಿದ್ದಾರೆ. ಆ ಮೂಲಕ ಪಕ್ಷದ ಬಲವರ್ಧನೆಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.












Click it and Unblock the Notifications