ಎಂಆರ್ಪಿಗಿಂತ ಹೆಚ್ಚು ಹಣ ವಸೂಲಿ, ಬಾರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು
ಕಾರವಾರ, ಆಗಸ್ಟ್ 25: ಕುಡುಕರ ಮೇಲೆ ನಿರಂತರ ಆಗುತ್ತಲೇ ಬರುತ್ತಿರುವ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಮೊದಲ ಬಾರಿಗೆ ಧನಿಯೊಂದು ಎದ್ದಿದೆ!!
ಕುಡುಕರೂ ಸಹ ಗ್ರಾಹಕರು ಎಂಬುದನ್ನು ಮರೆತು ತಮ್ಮ ಮೇಲೆ ಅವಲಂಬಿತರಾಗಿರುವವರು ಎಂದು ಭಾವಿಸಿರುವ ಬಾರುಗಳು ಮತ್ತದರ ಓನರ್ಗಳು ಬಾಟಲಿ ಮೇಲಿನ ಎಂಆರ್ಪಿಗಿಂತಲೂ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಲೇ ಬರುತ್ತಿರುವುದು ಹೊಸ ಸಂಗತಿಯೇನಲ್ಲ. ಆದರೆ ಮೊದಲ ಬಾರಿಗೆ ಇದರ ವಿರುದ್ಧ ಆಕ್ರೋಶ ಸಿಡಿದೆದ್ದಿದೆ!
ಕಾರವಾರ ನಗರದ ಕೆಲವು ಬಾರ್ ಗಳಲ್ಲಿ ಮದ್ಯದ ಬಾಟಲಿಗಳ ಎಂಆರ್ ಪಿಯ ದರಕ್ಕಿಂತ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿದ್ದಾರೆ' ಎಂದು ಪಕ್ಷಾತೀತ ಜನಪರ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಶನಿವಾರ ದೂರು ನೀಡಿದ್ದಾರೆ.

ನಗರದ ಪ್ರಸಿದ್ಧ ಹೋಟೆಲ್ ಒಂದರ ಬಿಲ್ ಅನ್ನು ದೂರಿನೊಂದಿಗೆ ಲಗತ್ತಿಸಿರುವ ಕಾರ್ಯರ್ತರು, ಕಿಂಗ್ ಫಿಶರ್ ಪ್ರಿಮಿಯಮ್ ನ ಎಂಆರ್ ಪಿ 130 ರೂ. ಆಗಿದೆ. ಆದರೆ, ನಗರದಲ್ಲಿ 180 ರೂ. ಪಡೆಯುತ್ತಿದ್ದಾರೆ. ಒಂದು ಬಾಟಲಿಯ ಮೇಲೆ 50 ರಿಂದ 100 ರೂ. ಹೆಚ್ಚುವರಿಯಾಗಿ ಇಲ್ಲಿನ ಬಾರ್ ಮಾಲೀಕರು ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಕಾರವಾರವು ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇಂಥ ನಗರದಲ್ಲಿ ಜನರನ್ನು (ಕುಡುಕರನ್ನು) ಈ ರೀತಿ ಸುಲಿಗೆ ಮಾಡುತ್ತಿರುವುದು ಸರ್ಕಾರ ಹಾಗೂ ಜಿಲ್ಲಾಡಳಿತದ ಭಯ ಇಲ್ಲಿನ ಬಾರ್ ಮತ್ತು ರೆಸ್ಟೋರೆಂಟ್ ಗಳ ಮಾಲೀಕರಿಗೆ ಇಲ್ಲ ಎಂದು ತೋರುತ್ತದೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪಕ್ಷಾತೀತ ಜನಪರ ವೇದಿಕೆಯ ಅಧ್ಯಕ್ಷ ಗಜೇಂದ್ರ ನಾಯ್ಕ, ಪ್ರಕಾಶ ಮಹಾಲಕ್ಷ್ಮೀಕರ, ಅಜಿತ್ ಪೊಕಳೆ, ಡಿ.ವಿ.ನಾಗೇಕರ್, ಚಂದ್ರಕಾಂತ ಹರಿಕಂತ್ರ ಅವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.












Click it and Unblock the Notifications