ಕಾಮಗಾರಿ ಪ್ರಗತಿಯಲ್ಲಿರುವ ಕಟ್ಟಡಕ್ಕೆ ಭೂಮಿ ಪೂಜೆಗೆ ಸಿದ್ದತೆ: ಶಾಸಕಿ ನಡೆಗೆ ವ್ಯಕ್ತವಾದ ಟೀಕೆ!
ಕಾರವಾರ, ಅಕ್ಟೋಬರ್ 8: ಸಾಮಾನ್ಯವಾಗಿ ಯಾವುದೇ ಕಾಮಗಾರಿ ಪ್ರಾರಂಭವಾಗುವ ಮುನ್ನ ಭೂಮಿ ಪೂಜೆ ಮಾಡಿ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ. ಆದರೆ ಕಾಮಗಾರಿ ಪ್ರಾರಂಭವಾಗಿ ಮೊದಲ ಮಹಡಿ ಕಾರ್ಯ ಪ್ರಗತಿಯಲ್ಲಿರುವ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಕಟ್ಟಡವೊಂದರ ಶಂಕುಸ್ಥಾಪನೆಯನ್ನು ಇದೀಗ ನಿಗದಿ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ 2019ರಲ್ಲೇ ಆಡಳಿತಾತ್ಮಕ ಅನುಮೋದನೆ ದೊರೆತು ಅನುದಾನ ಮಂಜೂರಾಗಿತ್ತು. ಕಟ್ಟಡ ಕಾಮಗಾರಿ ನಡೆಸಲು ಬೆಂಗಳೂರಿನ ಬಿಎಸ್ಆರ್ ಇನ್ಫ್ರಾಟೆಕ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಅಧಿಕೃತವಾಗಿ 2021ರ ಏಪ್ರಿಲ್ 21ರಂದು ಆರಂಭವಾಗಬೇಕಿತ್ತಾದರೂ, ಕೆಲ ಕಾರಣಗಳಿಂದಾಗಿ ಮೂರ್ನಾಲ್ಕು ತಿಂಗಳು ತಡವಾಗಿ ಕಾಮಗಾರಿ ಆರಂಭಿಸಲಾಗಿದೆ.
ಆದರೆ ಇದೀಗ ಕಟ್ಟಡದ ನೆಲಮಹಡಿ ಪೂರ್ಣಗೊಂಡು ಮೊದಲನೇ ಅಂತಸ್ತಿನ ಕಾಮಗಾರಿಯೂ ನಡೆಯುತ್ತಿದೆ. ಇದೀಗ ಶಾಸಕಿ ರೂಪಾಲಿ ನಾಯ್ಕ ಪತ್ರಿಕಾ ಪ್ರಕಟಣೆ ನೀಡಿ, ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ವಿವಿಧ ಉನ್ನತ ಸೌಲಭ್ಯ ಕಲ್ಪಿಸುವುದು, 450 ಬೆಡ್ಗಳ ಆಸ್ಪತ್ರೆಗೆ ಶಿಲಾನ್ಯಾಸ ಹಾಗೂ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಳ ಪರಿಶೀಲನೆಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ ಅಕ್ಟೋಬರ್ 11ರಂದು ಕಾರವಾರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಎದ್ದು ನಿಂತಿರುವ ಕಟ್ಟಡಕ್ಕೆ ಮತ್ತೆ ಭೂಮಿ ಪೂಜೆ!
"ಸಾಮಾನ್ಯವಾಗಿ ಭೂಮಿ ಪೂಜೆಯನ್ನು ಮಾಡುವುದು ನಿರ್ಮಾಣ ಕಾಮಗಾರಿ ನಿರ್ವಿಘ್ನವಾಗಿ ನಡೆಯಲಿ ಎಂದು ಭೂಮಿತಾಯಿಯಲ್ಲಿ ಪ್ರಾರ್ಥಿಸಿಕೊಳ್ಳಲು. ಆದರೆ, ಭೂಮಿಯ ಮೇಲೆ ಈಗಾಗಲೇ ಎದ್ದು ನಿಂತಿರುವ ಕಟ್ಟಡಕ್ಕೆ ಮತ್ತೆ ಭೂಮಿ ಪೂಜೆ ಮಾಡಲು ಸಚಿವರು ರಾಜಧಾನಿಯಿಂದ ಕಾರವಾರಕ್ಕೆ ಬರುತ್ತಾರೆಂದರೆ ಇದರ ಹಿಂದಿನ ಅರ್ಥವೇನು? ಅವರು ಕಟ್ಟಡವನ್ನು ತ್ವರಿತವಾಗಿ ಮುಗಿಸಲು ಸೂಚಿಸಿ ಉದ್ಘಾಟನೆ ಬರಬಹುದಲ್ಲವೇ. ಅನಾವಶ್ಯಕವಾಗಿ ಸಾರ್ವಜನಿಕರ ಹಣ ಪೋಲು ಮಾಡುವುದು ಯಾಕೆ," ಎಂದು ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಪ್ರಶ್ನಿಸಿದ್ದಾರೆ.

ಕೆಲಸ ಪೂರ್ಣಕ್ಕೆ 10 ದಿನವಿರುವಾಗ ಭೂಮಿ ಪೂಜೆ
ಸದ್ಯ ಆಸ್ಪತ್ರೆ ಕಾಮಗಾರಿ ನಡೆಸುತ್ತಿರುವ ಕಂಪನಿಯವರು ಕಾಮಗಾರಿ ಸ್ಥಳದಲ್ಲಿ ಅಳವಡಿಸಿರುವ ಬೋರ್ಡ್ ನಲ್ಲಿ ಉಲ್ಲೇಖಿಸಿರುವಂತೆ ಕಾಮಗಾರಿಯ ಅವಧಿ ಈ ತಿಂಗಳ 20ಕ್ಕೆ ಕೊನೆಗೊಳ್ಳಲಿದೆ. ಹೀಗಿರುವಾಗ ಅವಧಿ ಮುಗಿಯುವ 10 ದಿನಗಳ ಮುಂಚೆ ಬಂದು ಸಚಿವರು ಶಂಕುಸ್ಥಾಪನೆ ಮಾಡುವುದು ಅಪಹಾಸ್ಯಕ್ಕೆ ಗುರಿಯಾಗಿದ್ದು ಈ ಬಗ್ಗೆ ಟೀಕೆಗಳು ಕೂಡ ವ್ಯಕ್ತವಾಗಿದೆ.

ರಾಜಕೀಯ ಬಿಟ್ಟು, ಉದ್ಘಾಟನೆಗೆ ಒತ್ತು ನೀಡಿ
ಶಾಸಕರು, ಸಚಿವರುಗಳು ಕಾಮಗಾರಿಗಳ ಉದ್ಘಾಟನೆಗಿಂತಲೂ ಹೆಚ್ಚು ಭೂಮಿ ಪೂಜೆಗೆ ಆಸಕ್ತಿ ತೋರಿಸುವುದರ ಹಿಂದೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕರ ಒತ್ತಾಯವಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಬೇಕಿದ್ದರೆ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಅದ್ಧೂರಿಯಾಗಿ ಉದ್ಘಾಟನೆ ಮಾಡಲಿ. ಆದರೆ ಅದನ್ನ ಬಿಟ್ಟು ಭೂಮಿ ಪೂಜೆಯ ಹೆಸರಿನಲ್ಲಿ ಕಾಮಗಾರಿಗಳನ್ನ ವಿಳಂಬ ಮಾಡುವುದನ್ನು ಮಾಡಬಾರದು. ನೂತನ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕಿ ಭೂಮಿ ಪೂಜೆ ನಡೆಸದಿರುವುದೇ ನಾಲ್ಕೈದು ತಿಂಗಳು ಕಾಮಗಾರಿ ವಿಳಂಬವಾಗಲು ಕಾರಣವಾಗಿದೆ. ಗುತ್ತಿಗೆದಾರ ಇವರ ಪುಂಗಿ ನಾದಕ್ಕೆ ಕಿವಿಕೋಡದೆ ಕಾಮಗಾರಿ ಪ್ರಾರಂಭಿಸಿದಕ್ಕಾಗಿ ಬಹುತೇಕ ಕಾಮಗಾರಿ ಮುಗಿದಿದೆ, ಹೀಗಾಗಿ ಈ ಭೂಮಿ ಪೂಜೆ ರಾಜಕೀಯ ಬಿಟ್ಟು, ಉದ್ಘಾಟನೆಗೆ ಒತ್ತು ನೀಡಿ ಎಂದು ಮಾಧವ ನಾಯಕ ಸಲಹೆ ನೀಡಿದ್ದಾರೆ.

ರೂಪಾಲಿ ನಾಯ್ಕ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು
ಆಸ್ಪತ್ರೆ ಕಟ್ಟಡ ಶಂಕು ಸ್ಥಾಪನೆಗೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಬರುತ್ತಾರೆ ಎಂದು ಎರಡು ಬಾರಿ ತಿಳಿಸಲಾಗಿತ್ತು. ಎರಡು ಬಾರಿಯೂ ಬಾರದ ಕಾರಣ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬಳಿಕ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು ಕೂಡ ಬರುವುದಾಗಿ ಶಾಸಕಿ ಹೇಳಿದ್ದರು. ಅವರು ಕೂಡ ಈವರೆಗೆ ಬಂದಿಲ್ಲ. ಇದೀಗ ಆರೋಗ್ಯ ಸಚಿವರು ಬರುತ್ತಾರೆಂದು ಹೇಳುತ್ತಿದ್ದಾರೆ. ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಟ್ಟಡಕ್ಕೆ ಮತ್ತೆ ಭೂಮಿ ಪೂಜೆ ಬೇಕೆ ಎನ್ನುವುದನ್ನು ಶಾಸಕಿ ರೂಪಾಲಿ ನಾಯ್ಕ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ದಲಿತ ಮುಖಂಡ ದೀಪಕ್ ಕುಡಳಾಕರ್ ಒತ್ತಾಯಿಸಿದ್ದಾರೆ.












Click it and Unblock the Notifications