ಪ್ರೇಕ್ಷಕರ ಮನಗೆದ್ದ ಝೈದ್ ಖಾನ್ ಹಾಗೂ ಬನಾರಸ್ ಸಿನಿಮಾ
ಚೊಚ್ಚಲ ಪ್ರಯತ್ನದ ಬನಾರಸ್ನಲ್ಲೇ ನಾಯಕನಾಗಿ ಪ್ರೇಕ್ಷಕರ ಮನಗೆದ್ದ ಝೈದ್ ಖಾನ್. ಬನಾರಸ್ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳನ್ನು ಹೊಂದಿದ್ದ ಸಿನೆಮಾ. ಬನಾರಸ್ ತೆರೆ ಕಂಡು ಅಂದುಕೊಂಡಂತೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಜಯತೀರ್ಥ ನಿರ್ದೇಶನದ ಬನಾರಸ್ಗೆ ಬೇರೆ ಬೇರೆ ದಿಕ್ಕುಗಳಲ್ಲಿ ಚರ್ಚೆಗಳು ಜನಿಸಿದ್ದವು. ಅವೆಲ್ಲಕ್ಕೂ ಬನಾರಸ್ ಸಾರ್ಥಕ್ಯ ರೂಪವನ್ನು ನೀಡಿ, ಪ್ರೇಕ್ಷಕನೇ ಮೆಚ್ಚಿ ಕೊಂಡಾಡುವಂತೆ ಮಿಂಚಿನ ವೇಗದಲ್ಲಿ ಚಿತ್ರಮಂದಿರಗಳಲ್ಲಿ ಓಡುತ್ತಿದೆ.
ಝೈದ್ ಖಾನ್ ಹಾಗೂ ಸೋನಲ್ ಮೊಂತೆರೋ ಜೋಡಿ ಬನಾರಸ್ ನೋಡಿದ ಪ್ರತಿಯೊಬ್ಬರನ್ನೂ ಅದೇ ಪ್ರಭೆಯಲ್ಲಿ ತೇಲುವಂತೆ ಮಾಡಿದೆ. ಇದೆಲ್ಲ ಈಗಿನ ಮಾತಾದ್ರೆ, ಬನಾರಸ್ ಬಗ್ಗೆ ಹಾಗೂ ಆ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದ ಝೈದ್ ಬಗ್ಗೆ ಮೊದಲು ಕೇಳಿಬಂದಿದ್ದ ಮಾತುಗಳೇ ಬೇರೆ ಇತ್ತು.
ಝೈದ್ ಶಾಸಕ ಜಮೀರ್ ಪುತ್ರ, ಹಣವಂತನ ಮಗ. ಹಣವಿದ್ದವರು ಅದರ ಬಲ ಪ್ರದರ್ಶನಕ್ಕೋ, ಶೋಕಿಗೂ ಸಿನೆಮಾ ಮಾಡಿ ಅದ್ರಿಂದಲೇ ಚಿತ್ರರಂಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ತಾರೆ ಅನ್ನೋ ಮಾತೇ ಬಲವಾಗಿತ್ತು. ಆದ್ರೆ ಅವೆಲ್ಲವೂ ಈಗ ಹೆದರಿ ಮೂಲೆಗೆ ಸೇರುವಂತೆ ಝೈದ್ ನಟನೆಯ ಮೂಲಕ ಮೋಡಿ ಮಾಡಿದ್ದಾರೆ.
ಹೌದು, ಮೊದಲ ಸಿನೆಮಾವಾದರೂ ಝೈದ್ ನಟಿಸಿರುವ ಪರಿ ಎಲ್ಲರನ್ನೂ ಚಕಿತಗೊಳಿಸಿದೆ. ಬಹುಶಃ ಇದಕ್ಕೆ ಝೈದ್ ವಹಿಸಿದ್ದ ಶ್ರಮ, ತಯಾರಿಗಳ ತಾಲೀಮೇ ಕಾರಣವಿರಬಹುದು. ಚಿತ್ರವನ್ನು ಪೂರ್ತಿ ನೋಡಿ ಎಲ್ಲರೂ ವಿಮರ್ಶಿಸಿದಂತೆ, ಚಿತ್ರರಂಗಕ್ಕೆ ದೊರೆತ ಒಬ್ಬ ಅದ್ಭುತ ನಟ ಝೈದ್ ಎಂಬ ಮೆಚ್ಚುಗೆಯೇ ಎಲ್ಲೆಡೆ ಕೇಳಿ ಬರುತ್ತಿದೆ.
ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಏಕಕಾಲಕ್ಕೆ ತೆರೆಕಂಡಿರುವ ಬನಾರಸ್ ಪ್ರಭೆ ಎಷ್ಟಿದೆ ಎಂದರೆ, ಜನರಿಂದ ಜನರ ಬಾಯಿಗೆ ಪ್ರಚಾರ ಪಡೆದು ಸದ್ಯ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಸಿನಿಪ್ರಿಯರಿಗೆ ಹತ್ತಿರವಾಗಿರುವ ಬನಾರಸ್ ಚಿತ್ರವನ್ನು ಮತ್ತೆ ಮತ್ತೆ ಝೈದ್ ಸಹ ಥಿಯೇಟರ್ ನಲ್ಲಿ ಕೂತು ಅಭಿಮಾನಿಗಳೊಂದಿಗೆ ನೋಡುತ್ತಿದ್ದಾರೆ. ಚೊಚ್ಚಲ ಸಿನೆಮಾವಾದ್ರೂ ಒಬ್ಬ ನುರಿತ ಕಲಾವಿದನಂತೆ ನಟಿಸಿರುವ ನಟನೆಗೆ ಝೈದ್ಗೆ ಭರಪೂರ ಮೆಚ್ಚುಗೆ ಮೂಡಿಕೊಂಡಿದೆ.
ಅವರು ಚಿತ್ರರಂಗದಲ್ಲಿ ಭರವಸೆಯ ನಟನಾಗುವ ಲಕ್ಷಣಗಳಿರುವುದು ಗೋಚರಿಸಿವೆ. ಈ ಮೂಲಕ ಝೈದ್ ಬಗ್ಗೆ ಈ ಮೊದಲು ಇದ್ದ ನೆಗೆಟಿವ್ ಅಭಿಪ್ರಾಯ ದೂರ ಸರಿದಿದೆ. 'ಬಾಯ್ಕಾಟ್ ಬನಾರಸ್' ಎಂದು ಕೇಳಿಬಂದಿದ್ದ ವಿರೋಧಗಳೂ ದೂರಸರಿಯುವಂತೆ ಮಾಡಿದ್ದಾರೆ ಅಂತಾರೆ ಸಿನೆಮಾ ನೋಡಿದ ಪ್ರೇಕ್ಷಕ ಪ್ರಭುಗಳು.
ಒಟ್ನಲ್ಲಿ ಬನಾರಸ್ ಮೊದಲಿನಿಂದಲೂ ಸುದ್ದಿಯಲ್ಲೇ ಇದ್ದುದ್ದರಿಂದ ಆ ಸಿನೆಮಾ ಮೇಲಿನ ಒಟ್ಟು ಭರವಸೆಯನ್ನು ನಿಜ ಮಾಡಿದೆ ಝೈದ್ ನಟನೆ. ಈ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ ಝೈದ್. ಸಿನೆಮಾ ನೋಡಿದ ಪ್ರತಿಯೊಬ್ಬರು ಹೇಳುವಂತೆ ಮೊದಲ ಪ್ರಯತ್ನದಲ್ಲೇ ಭರಸೆಯ ನಟನಾಗಿ, ನುರಿತ ನಟನಂತೆ ನಟಿಸಿ ವಿಮರ್ಶಕರ ಮನಗೆಲ್ಲುವುದರ ಜೊತೆಗೆ, ಅವರ ಕುರಿತಾದ ಇಲ್ಲ ಸಲ್ಲದ ಆರೋಪಗಳನ್ನು ಝೈದ್ ಹುಸಿಗೊಳಿಸಿದ್ದಾರೆ.