ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ
ಬೆಂಗಳೂರು, ಫೆಬ್ರವರಿ 02: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಈಗಾಗಲೇ ಹೈಕಮಾಂಡ್ ನಾಯಕರ ಅನುಮತಿಯನ್ನು ಯಡಿಯೂರಪ್ಪ ಪಡೆದುಕೊಂಡು ಬಂದಿದ್ದಾರೆ.
ಭಾನುವಾರ ಗೃಹ ಕಚೇರಿ ಕೃಷ್ಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿ. ಎಸ್. ಯಡಿಯೂರಪ್ಪ, "ಫೆಬ್ರವರಿ 6ರ ಗುರುವಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಅಂದು ಬೆಳಗ್ಗೆ 10.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ" ಎಂದರು.
"ಸಂಪುಟ ವಿಸ್ತರಣೆಯೋ ಅಥವ ಪುನಾರಚನೆಯೋ ಎಂಬುದನ್ನು ಸೋಮವಾರ ತೀರ್ಮಾನ ಮಾಡಲಾಗುತ್ತದೆ. ಸಂಪುಟದಲ್ಲಿ ಯಾರು ಇರಲಿದ್ದಾರೆ? ಎಂಬುದು ಗುರುವಾರ ನಿಮಗೆ ತಿಳಿಯಲಿದೆ" ಎಂದು ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ಫೆಬ್ರವರಿ 5ರಂದು ಕಲಬುರಗಿ ಜಿಲ್ಲಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಅಂದು ನಡೆಯಲಿದೆ. ಫೆಬ್ರವರಿ 6ರಂದು ಅವರು ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಅಂದು ಅವರು ಬೆಂಗಳೂರಿನಲ್ಲಿಯೇ ಇರಲಿದ್ದಾರೆ.

ಎಂಎಲ್ಸಿ ಮಾಡುತ್ತೇವೆ
ವಿಧಾನ ಪರಿಷತ್ ಉಪ ಚುನಾವಣೆ ಬಗ್ಗೆ ಮಾತನಾಡಿದ ಯಡಿಯೂರಪ್ಪ, "ಆರ್. ಶಂಕರ್ ಅವರನ್ನು ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುತ್ತೇವೆ" ಎಂದು ಹೇಳಿದರು. ಫೆಬ್ರವರಿ 17ರಂದು ನಡೆಯುವ ಪರಿಷತ್ ಉಪ ಚುನಾವಣೆಗೆ ಆರ್. ಶಂಕರ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ.

ಸಚಿವ ಸ್ಥಾನವನ್ನು ನೀಡಲು ಬರಲ್ಲ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಯಡಿಯೂರಪ್ಪ, "ಸುಪ್ರೀಂಕೋರ್ಟ್ ಆದೇಶದಂತೆ ಸೋತವರಿಗೆ ಸಚಿವ ಸ್ಥಾನ ನೀಡಲು ಬರಲ್ಲ" ಎಂದು ಹೇಳಿದರು. ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಮತ್ತು ಎಚ್. ವಿಶ್ವನಾಥ್ ಸೋಲು ಕಂಡಿದ್ದಾರೆ.

ಯಾರು-ಯಾರಿಗೆ ಸಚಿವ ಸ್ಥಾನ?
ಯಡಿಯೂರಪ್ಪ ಸಂಪುಟ ಸೇರುವವರು ಯಾರು? ಎಂಬುದು ಇನ್ನು ಅಂತಿಮವಾಗಿಲ್ಲ. ಮೂಲ ಬಿಜೆಪಿಯಲ್ಲಿ ಎಷ್ಟು ಶಾಸಕರು?, ಉಪ ಚುನಾವಣೆಯಲ್ಲಿ ಗೆದ್ದ ಎಷ್ಟು ಶಾಸಕರು ಸಚಿವರಾಗಲಿದ್ದಾರೆ? ಎಂಬುದು ಇನ್ನೂ ನಿಗೂಢವಾಗಿದೆ. "ಗುರುವಾರ ಪಟ್ಟಿ ನಿಮ್ಮ ಕೈ ಸೇರಲಿದೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಹೈಕಮಾಂಡ್ ಅನುಮತಿ ಸಿಕ್ಕಿದೆ
ಯಡಿಯೂರಪ್ಪ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾರನ್ನು ಭೇಟಿಯಾಗಿ ಈಗಾಗಲೇ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಂಡಿದ್ದಾರೆ. ಆದರೆ, ಸಂಪುಟ ಸೇರುವವರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.












Click it and Unblock the Notifications