ಲೋಕಸಭೆ ಚುನಾವಣೆ ಟಿಕೆಟ್ ಪ್ರಥಮ ಪಟ್ಟಿ ಹಿಡಿದು ದೆಹಲಿಗೆ ಬಿಎಸ್ವೈ
ಬೆಂಗಳೂರು, ಸೆಪ್ಟೆಂಬರ್ : ಲೋಕಸಭೆ ಚುನಾವಣೆ ಟಿಕೆಟ್ ವಿತರಣೆ ಬಗ್ಗೆ ಚರ್ಚೆ ನಡೆಸಲು ಇಂದು ಸಂಜೆ ಅಥವಾ ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಯಡಿಯೂರಪ್ಪ ಅವರು ಮಾಡಿಸಿರುವ ಆಂತರಿಕ ಸಮೀಕ್ಷೆಯ ಅನ್ವಯ ಮೊದಲ ಪಟ್ಟಿಯನ್ನು ತಯಾರು ಮಾಡಲಾಗಿದೆ. ಜೊತೆಗೆ ಆಕಾಂಕ್ಷಿಗಳ ಪಟ್ಟಿಯೂ ಇದ್ದು ಈ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಮುಂದೆ ಇಟ್ಟು ಟಿಕೆಟ್ ಅಂತಿಮಗೊಳಿಸಿಕೊಳ್ಳಲಿದ್ದಾರೆ.
ಅಷ್ಟೆ ಅಲ್ಲದೆ, ರಾಜ್ಯ ರಾಜಕಾರಣದ ಚರ್ಚೆಯೂ ದೆಹಲಿಯಲ್ಲಿ ನಡೆಯಲಿದೆ. ಜೊತೆಗೆ ಲೋಕಸಭೆ ಚುನಾವಣೆ ತಯಾರಿಗೆ ಸಂಬಂಧಪಟ್ಟಂತೆ ಹೈಕಮಾಂಡ್ನಿಂದ ಯಡಿಯೂರಪ್ಪ ಅವರಿಗೆ ಕೆಲವು ಸೂಚನೆಗಳು ಸಿಗಲಿವೆ.

ಅಮಿತ್ ಶಾ ಅವರು ಸೆಪ್ಟೆಂಬರ್ 25ರಂದು ಬೆಂಗಳೂರಿಗೆ ಬರಬೇಕಿತ್ತು. ಆದರೆ ಬರಲಾಗಲಿಲ್ಲ. ಹಾಗಾಗಿ ಶಾ ಅವರ ರಾಜ್ಯ ಭೇಟಿಯ ದಿನಾಂಕ ಹಾಗೂ ಕಾರ್ಯಕ್ರಮಗಳ ಬಗ್ಗೆಯೂ ಬಿಎಸ್ವೈ ಹೈಕಮಾಂಡ್ ಬಳಿ ಚರ್ಚೆ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ 28 ಕ್ಕೆ ಕನಿಷ್ಟ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ಲೋಕಸಭೆ ಚುನಾವಣೆ ಜವಾಬ್ದಾರಿಯನ್ನೂ ಸಹ ಯಡಿಯೂರಪ್ಪ ಅವರ ಹೆಗಲಿಗೆ ಬಿಜೆಪಿ ಹೈಕಮಾಂಡ್ ಹಾಕಿದೆ.
ಯಡಿಯೂರಪ್ಪ ಅವರು ಅಕ್ಟೋಬರ್ 2ರಂದು ಮಹಾತ್ಮಾಗಾಂಧಿ ಜಯಂತಿ ನಂತರ ಲೋಕಸಭೆ ಚುನಾವಣೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.












Click it and Unblock the Notifications