ಯಡಿಯೂರಪ್ಪ ಕೈಗೆ ಅಧಿಕಾರವೋ, ರಾಷ್ಟ್ರಪತಿ ಆಳ್ವಿಕೆಯೋ?
Recommended Video
ಬೆಂಗಳೂರು, ಜುಲೈ 06 : ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಮೆರಿಕಕ್ಕೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಲಂಡನ್ನಿಗೆ, ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಣಿಗೆ ಕಾಣದಿರುವ ಸಂದರ್ಭದಲ್ಲಿ ಭರ್ಜರಿ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಮೈತ್ರಿ ಸರಕಾರದ ಬುಡವೇ ಅಲ್ಲಾಡುವಂತಾಗಿದೆ.
ಎಚ್ ಡಿ ಕುಮಾರಸ್ವಾಮಿ ಅವರು ಒಂದು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ ಸಂದರ್ಭದಿಂದಲೇ ಮೈತ್ರಿ ಸರಕಾರ ಅಲುಗಾಡುತ್ತಲೇ ಇತ್ತು. ಇದೀಗ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 13 ಶಾಸಕರು ವಿಧಾನಸಭಾಧ್ಯಕ್ಷರಿಗೆ ಶನಿವಾರ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸರಕಾರ ಬೀಳುವುದು ಹೆಚ್ಚೂಕಡಿಮೆ ಖಚಿತವಾಗುವಂತಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಕಾಲಕೆಳಗಿನ ಭೂಮಿ ಅಲುಗಾಡುವಂಥ ಬೆಳವಣಿಗೆ ನಡೆದಿರುವುದರಿಂದ ಮೈತ್ರಿ ಸರಕಾರ ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿದೆ. ಯಡಿಯೂರಪ್ಪನವರು ಈಗಾಗಲೆ ರಾಜಭವನಕ್ಕೆ ಧಾವಿಸಿದ್ದಾರೆ. ಇದೇ ಸಮಯದಲ್ಲಿ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರು ಬಂಡಾಯ ಶಾಸಕರ ಮನವೊಲಿಸಲು ವಿಧಾನಸೌಧಕ್ಕೆ ರಾಮನಗರದಿಂದ ಓಡೋಡಿ ಬಂದಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಶ್ವೇತ ಸಫಾರಿಧಾರಿಯಾದ ಯಡಿಯೂರಪ್ಪನವರು ಹೊಸ ಹುಮ್ಮಸ್ಸಿನಿಂದ ರಾಜಭವನಕ್ಕೆ ಆಗಮಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಸದ್ಯದ ಪರಿಸ್ಥಿತಿಯನ್ನು ವಿವರಿಸಲಿದ್ದಾರೆ. ಸರಕಾರ ರಚಿಸುವ ಕೆಲಸಕ್ಕೆ ಯಡಿಯೂರಪ್ಪ ಕೈಹಾಕುತ್ತಾರಾ? ಅಥವಾ ರಾಜ್ಯದಲ್ಲಿ ವಿಪರೀತ ಪರಿಸ್ಥಿತಿ ಉದ್ಭವಿಸಿರುವುದರಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗುವುದಾ? ಇದನ್ನು ರಾಜ್ಯಪಾಲರು ನಿರ್ಧರಿಸಲಿದ್ದಾರೆ.
ಇಬ್ಬರು ಶಾಸಕರು ಈಗಾಗಲೆ ರಾಜೀನಾಮೆ ಸಲ್ಲಿಸಿರುವುದರಿಂದ ಸದನದ ಬಲಾಬಲ 224ರಿಂದ 222ಕ್ಕೆ ಕುಸಿದಿದೆ. ಅವರಲ್ಲಿ ಬಿಜೆಪಿ ಬಳಿ 105 ಶಾಸಕರಿದ್ದಾರೆ. ಇದೀಗ 13 ಶಾಸಕರ ಜೊತೆ ಇನ್ನಷ್ಟು ಶಾಸಕರು ಕೂಡ ರಾಜೀನಾಮೆ ಸಲ್ಲಿಸಲು ಸಿದ್ಧರಾಗಿರುವುದರಿಂದ ಯಡಿಯೂರಪ್ಪನವರಿಗೆ, ಸರಕಾರ ರಚಿಸಲು ಆಹ್ವಾನ ದೊರೆತರೆ ಬಹುಮತ ಸಾಬೀತುಪಡಿಸಲು ಕಷ್ಟವಾಗಲಿಕ್ಕಿಲ್ಲ. ಆದರೆ, ರಾಜ್ಯಪಾಲರು ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ?
ರಾಜೀನಾಮೆ ಸಲ್ಲಿಸಿರುವ ಶಾಸಕರು
ಹುಣಸೂರು ಜೆಡಿಎಸ್ ಶಾಸಕ ಎಚ್ ವಿಶ್ವನಾಥ್,
ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ,
ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್,
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ,
ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ,
ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ,
ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್,
ರಾಜರಾಜೇಶ್ವರಿ ಕ್ಷೇತ್ರದ ಶಾಸಕ ವಿ. ಮುನಿರತ್ನ,
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ,
ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್,
ಕೆಆರ್ ಪುರಂ ಶಾಸಕ ಭೈರತಿ ಬಸವರಾಜು,
ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್











Click it and Unblock the Notifications