Power Cut: ರಾಜ್ಯದಲ್ಲಿ ಪವರ್ ಕಟ್ ಬಗ್ಗೆ ಕೆಪಿಟಿಸಿಎಲ್ ಎಂಡಿ ಹೇಳಿದ್ದೇನು?
Power Cut: ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶುಟ್ಡೌನ್ ಆದೇಶವಿಲ್ಲದಿದ್ದರೂ ಸಹ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಲಿವೆ. ಈ ಬಗ್ಗೆ ಮಾತನಾಡಿರುವ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರು, ವಿದ್ಯುತ್ ಸಂಗ್ರಹ ರಾಜ್ಯದಲ್ಲಿ ಚೆನ್ನಾಗಿದೆ. ರೈತರು, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ, ಜನಕ್ಕೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಬೆಸ್ಕಾಂನ ಬೆಳಕು ಭವನದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯದ ಪ್ರಸ್ತುತ ವಿದ್ಯುತ್ ಪರಿಸ್ಥಿತಿ ಮತ್ತು ಇಂಧನ ಇಲಾಖೆಯ ಕಾರ್ಯ ಪ್ರಗತಿ, ಗ್ರ್ಯಾಚುಟಿ, ಪಿಂಚಣಿ ಹಣಕ್ಕಾಗಿ ವಿದ್ಯುತ್ ದರ ಏರಿಕೆ ಕುರಿತು ಚರ್ಚೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಕೆಪಿಟಿಸಿಎಲ್ ಎಂಡಿ ಪಂಕಜ್ಕುಮಾರ್ ಪಾಂಡೆ, ಬೆಸ್ಕಾಂ ಎಂಡಿ ಶಿವಶಂಕರ್ ಭಾಗಿ ಆಗಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6 ತಿಂಗಳಿನಿಂದದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಗೃಹಬಳಕೆ ಹಾಗೂ ಕೈಗಾರಿಕೆಗಳಲ್ಲಿ ಎಸಿ ಬಳಕೆ ಹೆಚ್ಚಳ ಆಗಿದೆ. ಇನ್ನೂ ಏಪ್ರಿಲ್ ತಿಂಗಳಲ್ಲಿ 18,500 ಮೆಗಾ ವ್ಯಾಟ್ ಬಳಕೆ ಹೆಚ್ಚಳ ಆಗಲಿದ್ದು, ಪಂಜಾಬ್, ಯುಪಿಯಿಂದ ವಿದ್ಯುತ್ ಪಡೆಯುತ್ತಿದ್ದೇವೆ ಎಂದರು.
ಈ ಮೊದಲು ವಿದ್ಯುತ್ ಬೇಡಿಕೆ 17,220 ಮೆಗಾವ್ಯಾಟ್ನಷ್ಟಿತ್ತು. ಆದರೆ, ಈ ವರ್ಷ 18,500 ಮೆಗಾವ್ಯಾಟ್ಗೆ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡ 15ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಳ ಅಗಿದೆ. ಕಳೆದ ನವಂಬರ್ನಲ್ಲಿ 14,856 ಮೆಗಾವ್ಯಾಟ್ ಇತ್ತು. ಇದೀಗ ಮಾರ್ಚ್ನಲ್ಲಿ ವಿದ್ಯುತ್ ಬೇಡಿಕೆ 18,395 ಮೆಗಾವ್ಯಾಟ್ ಇದೆ ಎಂದರು.
ಏಪ್ರಿಲ್ - ಮೇ ತಿಂಗಳಿನಲ್ಲಿ ವಿದ್ಯುತ್ ಬೇಡಿಕೆ ಇನ್ನೂ ಹೆಚ್ಚಾಗುತ್ತದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ರಾಜ್ಯದಲ್ಲಿ ವಿದ್ಯುತ್ ಸಂಗ್ರಹ ಚೆನ್ನಾಗಿದೆ. ಕೈಗಾರಿಕಾ ವಲಯದಲ್ಲಿ ಶೇಕಡ15ರಷ್ಟು ವಿದ್ಯುತ್ ಬೇಡಿಕೆಯಿದೆ. ಮಳೆ ಚೆನ್ನಾಗಿ ಆಗಿರುವ ಕಾರಣಕ್ಕೆ ಕೃಷಿ ಚಟುವಟಿಕೆಗಳೂ ಜೋರಾಗಿದೆ. ಆದ್ದರಿಂದ ಶೇಕಡ 20ರಷ್ಟು ಹೆಚ್ಚಿನ ವಿದ್ಯುತ್ ಕೃಷಿ ಚಟುವಟಿಕೆಗಳಿಗೆ ನೀಡಬೇಕಾಗಬಹುದು. ಒಟ್ಟಾರೆ ಈ ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ಅದಕ್ಕೆ ಬೇಕಾದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜೊತೆಗೆ ರೈತರಿಗೆ ತೊಂದರೆ ಆಗದಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ಕಡಿತಗೊಳಿಸದಂತೆ ಹಾಗೂ ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ವಿದ್ಯುತ್ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಇದೇ ವೇಳೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಮಾತನಾಡಿ, ಈ ವರ್ಷದಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ ನೋಡುತ್ತಿದ್ದೇವೆ ಎಂದರು.
ಅಲ್ಲದೆ, ಕೆಲ ಜಿಲ್ಲೆಗಳಲ್ಲಿ ಅತೀ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಜನವರಿಯಿಂದ ವಿದ್ಯುತ್ ಬೇಡಿಕೆ ಬಂದಿದೆ. ಈ ವರ್ಷ ಹಲವು ಪೂರ್ವ ಸಿದ್ಧತೆ ಮಾಡಿದ್ದೇವೆ. ತಾಪಮಾನ ಹೆಚ್ಚಿದ ಹಿನ್ನೆಲೆ ವಿದ್ಯುತ್ ಬೇಡಿಕೆ ಹೆಚ್ಚಾದ ಕಾರಣಕ್ಕೆ ಸೋಲಾರ್ ಬಳಕೆ ರಾಜ್ಯದಲ್ಲಿ ಜಾಸ್ತಿ ಆಗುತ್ತಿದೆ. ಆದ್ದರಿಂದ ವಿದ್ಯುತ್ ಮಿತವಾಗಿ ಬಳಕೆ ಮಾಡಿ ಎಂದು ಮನವಿ ಮಾಡಿಕೊಂಡ್ರು.











Click it and Unblock the Notifications