ರೈತರಿಗೆ ಗುಡ್ ನ್ಯೂಸ್! ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಿಗೆ ಡಿಸೆಂಬರ್ 10ರವರೆಗೆ ನೀರು!
ಬೆಂಗಳೂರು, ಅಕ್ಟೋಬರ್ 12: ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ಹೆಚ್ಚು ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ. ತಿಮ್ಮಾಪೂರ ಅವರು ತಿಳಿಸಿದ್ದಾರೆ.
ಜಲಾಶಯಕ್ಕೆ ಒಳ ಹರಿವು ಬಂದಿರುವುದರಿಂದ ಚಾಲು-ಬಂದ್ ಪದ್ದತಿಯನ್ನು ಪರಿಷ್ಕರಿಸಿ 14 ದಿನ ನೀರು ಚಾಲು ಹಾಗೂ 10 ದಿನದ ಬದಲಿಗೆ 8 ದಿನ ಮಾತ್ರ ಬಂದ್ ಪದ್ದತಿಯನ್ನು ಅನುಸರಿಸಿ ಅಕ್ಟೋಬರ್ 17ರ ಬದಲಿಗೆ ಅಕ್ಟೋಬರ್ 14ನೇ ತಾರೀಖಿನಿಂದಲೇ ನೀರು ಚಾಲು ಮಾಡಲು ತೀರ್ಮಾನಿಸಲಾಗಿದೆ.

ಅಲ್ಲದೇ ಮುಂಗಾರು ಹಂಗಾಮಿಗೆ ನವೆಂಬರ್23 ರವರೆಗೂ ನೀರು ಹರಿಸಲು ಕೈಗೊಂಡಿದ್ದ ನಿರ್ಣಯದ ಬದಲಾಗಿ ಡಿಸೆಂಬರ್ 10 ರವರೆಗೂ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಲಹಾ ಸಮಿತಿ ಅಧ್ಯಕ್ಷರಾದ ಸಚಿವ ಆರ್ ಬಿ ತಿಮ್ಮಾಪೂರ ಅವರು ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ನೀರು ಹರಿಸುವುದನ್ನು ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ರೈತರ ಹಿತಕಾಪಾಡಲು ಕ್ರಮಕೈಗೊಳ್ಳಲಾಗಿದೆ.
ಇದರಿಂದ ಬಾಗಲಕೋಟೆ, ವಿಜಯಪುರ, ಕಲಬುರಗಿ,ಯಾದಗಿರಿ, ರಾಯಚೂರು ಜಿಲ್ಲೆಗಳ ಸುಮಾರು 6 ಲಕ್ಷ ಬೆಕ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವ ಆರ್.ಬಿ. ತಿಮ್ಮಾಪೂರ ಅವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications