ವಾಚ್ ತೊಟ್ಟ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್?
ಬೆಂಗಳೂರು, ಫೆ. 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚು ಪ್ರಕರಣ ಇದೀಗ ರಾಜ್ಯಪಾಲರ ಅಂಗಳಕ್ಕೆ ಬಂದಿದೆ. ಉಡುಗೊರೆ ಪಡೆದ ಸಿದ್ದರಾಮಯ್ಯ ಅವರು ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸಿಎಂ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಅನುಮತಿ ಕೋರಿ ಭಾಸ್ಕರನ್ ಎಂಬುವರು ಅರ್ಜಿ ಹಾಕಿದ್ದಾರೆ.
ಲಕ್ಷಾಂತರ ರು. ಮೌಲ್ಯದ ಕೈಗಡಿಯಾರ(ಹ್ಯೂಬ್ಲೊಟ್) ವನ್ನು ಉಡುಗೊರೆ ರೂಪದಲ್ಲಿ ಸಿದ್ದರಾಮಯ್ಯ ಅವರು ಪಡೆದಿದ್ದಾರೆ. ಗಿಫ್ಟ್ ಪಡೆದು ಅದಕ್ಕೆ ತೆರಿಗೆ ನೀಡಿದ್ದಾರೋ ಇಲ್ಲವೋ ಮಾಹಿತಿ ಎಲ್ಲೂ ನೀಡಿಲ್ಲ.
ಈ ಬಗ್ಗೆ ಸ್ಪಷ್ಟನೆ ಸಿಗಬೇಕಾದರೆ ಸಿಎಂ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡಬೇಕು ಎಂದು ಆರ್ಟಿಐ ಕಾರ್ಯಕರ್ತ ಎಸ್. ಭಾಸ್ಕರನ್ ಎಂಬುವವರು ಮಂಗಳವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.[ಸಿಎಂ ಸಿದ್ದು ದುಬಾರಿ ವಾಚ್ : ದಿಗ್ವಿಜಯ್ ಸಿಂಗ್ ಮುಗ್ದತೆಯ ಪರಮಾವಧಿ!]
ಮುಖ್ಯಮಂತ್ರಿ ಸೇರಿ ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಖಾಸಗಿ ದೂರು ಸಲ್ಲಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ರಾಜ್ಯಪಾಲರಿಗೆ ದಾಖಲೆಗಳನ್ನು ನೀಡಿ ಪೂರ್ವಾನುಮತಿ ಪಡೆದುಕೊಳ್ಳಬೇಕು. [ವಾಚ್ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆ?]
ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರ ಅನುಮತಿ ಕೋರಲಾಗಿತ್ತು. ಭ್ರಷ್ಟಾಚಾರದ ಆರೋಪ ಹೊತ್ತ ಯಡಿಯೂರಪ್ಪ ಅವರು ಜೈಲುವಾಸ ಕೂಡಾ ಅನುಭವಿಸಿ ಬಂದರು. ಈಗ ಸಿದ್ದರಾಮಯ್ಯ ಅವರು ದುಬಾರಿ ವಾಚು ಪಕ್ಕಕ್ಕಿಟ್ಟು ಸಾಧಾರಾಣ ಕೈಗಡಿಯಾರ ತೊಟ್ಟಿರಬಹುದು. ಆದರೆ, ಸಿಎಂ ಆಗಿ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂಬ ನಂಬಿಕೆ ಜನತೆಗೆ ಇದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು?
ಆದರೆ, ಈ ವಾಚ್ ಅನ್ನು ಆಸ್ತಿ ವಿವರದಲ್ಲಿ ನಮೂದಿಸಿಲ್ಲವಾದ್ದರಿಂದ ಸಿಎಂ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಖಾಸಗಿ ದೂರು ಸಲ್ಲಿಸಲು ಪೂರ್ವಾನುಮತಿ ನೀಡುವಂತೆ ಭಾಸ್ಕರ್ ಅವರು ಕೋರಿದ್ದಾರೆ. ತೆರಿಗೆ ವಂಚನೆ ಮಾಡಿರುವುದರಿಂದ ಕ್ರಿಮಿನಲ್ ಕೇಸ್ ದಾಖಲಿಸಿ, ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುವಂತೆ ಆದೇಶಿಸಲು ಅನುಮತಿ ಕೋರಲಾಗಿದೆ.

ಯಾರು ಕೊಟ್ಟ ಗಿಫ್ಟ್ ? ಇನ್ನೂ ಚರ್ಚೆ ಜಾರಿಯಲ್ಲಿದೆ
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಿ ಅವರಿಗೆ ಲಕ್ಷಾಂತರ ರುಪಾಯಿ ಮೌಲ್ಯದ ಸೀರೆ ಕೊಡಿಸಿದ್ದು ಭಾರಿ ಚರ್ಚೆಯಾಗಿತ್ತು. ಈಗ ದುಬಾರಿ ವಾಚು ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಯಾವ ಉದ್ಯಮಿಯಿಂದ ಈ ಗಿಫ್ಟ್ ಪಡೆದುಕೊಂಡರು ಎಂಬುದು ಸದ್ಯಕ್ಕೆ ಚರ್ಚೆಯ ವಿಷಯವಾಗಿದೆ.

ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ
ವಿವಾದ ಎಬ್ಬಿಸಿರುವ ದುಬಾರಿ ವಾಚ್ ಹಾಗೂ ತಂಪು ಕನ್ನಡಕ ಪ್ರಕರಣ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿಕೆ ನೀಡಿರುವುದು ಹಿಟ್ ಆಂಡ್ ರನ್ ಕೇಸಿನಂತಿದೆ. ಅವರ ಬಳಿ ಯಾವ ದಾಖಲೆಗಳೂ ಇಲ್ಲ. ಎಂದು ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸರಿಯಾದ ಸಮಯದಲ್ಲಿ ಸೂಕ್ತ ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ರಸೀದಿ ಸಮೇತ ಉತ್ತರಿಸುವ ಕಾಲ ಬರುತ್ತದೆ
ಮೂರು ವಾಚುಗಳನ್ನು ಚೆನ್ನೈನಲ್ಲಿ ಖರೀದಿಸಲಾಗಿದ್ದು, ಸಿಎಂ ಅವರು ಒಂದು ವಾಚನ್ನು ತಮ್ಮ ಅಪ್ತರೊಬ್ಬರಿಗೆ ನೀಡಿದ್ದಾರೆ ಎಂಬ ಮಾಹಿತಿಯೂ ಇದೆ. ಸುಮಾರು 70 ಲಕ್ಷ ರು ಬೆಲೆಯ ವಾಚು, ಸೂಟು ಬೂಟು, ಕನ್ನಡಕ ಎಲ್ಲವೂ ಈಗ ಸಿದ್ದರಾಮಯ್ಯ ಅವರ ಮಾನ ಹರಾಜು ಹಾಕಲು ಮುಂದಾಗಿವೆ. ರಾಜ್ಯಪಾಲರು ಲೋಕಾಯುಕ್ತ ತನಿಖೆಗೆ ಆದೇಶಿಸಿದರೆ ಎಲ್ಲಕ್ಕೂ ರಸೀದಿ ಸಮೇತ ಉತ್ತರಿಸುವ ಕಾಲ ಬರುತ್ತದೆ.












Click it and Unblock the Notifications