17 ಕೋಟಿ, ಮಿನಿಸ್ಟರ್ ಪೋಸ್ಟ್: ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಬಿಟ್ಟುಕೊಟ್ಟ ಶ್ರೀನಿವಾಸ ಗೌಡರ ಆಡಿಯೊ ವೈರಲ್- ಅಂತದ್ದೇನಿದೆ
ಬೆಂಗಳೂರು, ಜನವರಿ 12: ಕರ್ನಾಟಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ವ್ಯಾಪಕ ಕಸರತ್ತು ನಡೆಸಿವೆ. ಎಲ್ಲ ಪಕ್ಷಗಳಲ್ಲೂ ಟಿಕೆಟ್ ಹಂಚಿಕೆಯದ್ದೇ ಚರ್ಚೆಗಳು ಕೇಳಿಬರುತ್ತಿವೆ. ಫೆಬ್ರುವರಿಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಜನವರಿ ಕೊನೆಯ ವಾರದಲ್ಲಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಸಿದ್ದಪಡಿಸಲಿದೆ. ಜೆಡಿಎಸ್ ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬುದರ ಬಗ್ಗೆ ಇಷ್ಟು ದಿನ ಚರ್ಚೆಗಳು ನಡೆದಿದ್ದವು. ಈಗ ಆ ಚರ್ಚೆಯೂ ಮುಕ್ತಾಯಗೊಂಡಿದೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ
ಕೋಲಾರದಿಂದ ಸಿದ್ದರಾಮಯ್ಯನವರು ಸ್ಪರ್ಧಿಸಲಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಅವರೇ ಘೋಷಣೆ ಮಾಡಿದ್ದಾರೆ. ಕೋಲಾರದಲ್ಲಿ ನೆರೆದಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಸಿದ್ದರಾಮಯ್ಯ ಹೇಳಿದ್ದಾರೆ. ಕೋಲಾರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು. ಕೋಲಾರದಲ್ಲಿ ಗೆಲ್ಲಿಸಿಯೇ ತೀರುತ್ತೇವೆ ಎಂಬ ಘೋಷಣೆಗಳನ್ನು ಅಭಿಮಾನಿಗಳು ಕೂಗಿದ್ದರು. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಹಿಂದೆಯೇ ಮತ್ತೆ ಚರ್ಚೆಗಳು ಹುಟ್ಟಿಕೊಂಡಿವೆ. ಈಗಿರುವ ಕೋಲಾರ ಶಾಸಕ ಜೆಡಿಎಸ್ನ ಶ್ರೀನಿವಾಸಗೌಡರಿಗೆ ಸಂಬಂಧಿಸಿರುವ ಚರ್ಚೆಗಳು.
'I love Congress' ಎಂದಿದ್ದ ಶ್ರೀನಿವಾಸಗೌಡ
2018 ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಜಯಗಳಿಸಿದ್ದ ಶ್ರೀನಿವಾಸಗೌಡರು ಜೆಡಿಎಸ್ ತೊರೆಯುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷ ನಡೆದಿದ್ದ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಜೆಡಿಎಸ್ನೊಂದಿಗೆ ಇರುವ ಅಸಮಾಧಾನವನ್ನು ಹೊರಹಾಕಿದ್ದರು. ಆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, 'ಐ ಲವ್ ಕಾಂಗ್ರೆಸ್' ಎಂದು ಹೇಳಿಕೆ ನೀಡಿದ್ದರು. ಆಗಿನಿಂದಲೇ ಶ್ರೀನಿವಾಸಗೌಡರ ಕಾಂಗ್ರೆಸ್ ಸೇರ್ಪಡೆ ನಿಚ್ಚಳವಾಗಿತ್ತು. ಅವರು ತಮ್ಮ ಬೆಂಬಲಿಗನೊಂದಿಗೆ ಮಾತನಾಡಿರುವ ಆಡಿಯೊವೊಂದು ವೈರಲ್ ಆಗಿದೆ.
ವೈರಲ್ ಆಯ್ತು ಶ್ರೀನಿವಾಸಗೌಡರ ಆಡಿಯೊ
ಶ್ರೀನಿವಾಸಗೌಡರು ತಮ್ಮ ಬೆಂಬಲಿಗನೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೊವೊಂದು ವೈರಲ್ ಆಗಿದೆ. ಅದರಲ್ಲಿ ಶ್ರೀನಿವಾಸಗೌಡರು ಕಳೆದ ಚುನಾವಣೆಯಲ್ಲಿ ತಾವು ಖರ್ಚು ಮಾಡಿದ ದುಡ್ಡಿನ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟ ಬಗ್ಗೆ ಬೆಂಬಲಿಗ ಚನ್ನೇಗೌಡ ಶ್ರೀನಿವಾಸಗೌಡರನ್ನು ಕೇಳುತ್ತಾನೆ. ಅದಕ್ಕೆ ಉತ್ತರಿಸಿದ ಶ್ರೀನಿವಾಸಗೌಡ, 'ನಾನು ಕಳೆದ ಚುನಾವಣೆಯಲ್ಲಿ 17 ಕೋಟಿ ಖರ್ಚು ಮಾಡಿದ್ದೀನಿ. ಅದೇ ಸಾಲ ತೀರಿಲ್ಲ. ನನ್ನ ಗತಿ ಯಾರು ಕೇಳ್ತಾರೆ. ಆದ್ರೂ, ನೀವು ಸಿದ್ದರಾಮಯ್ಯನವರನ್ನು ಗೆಲ್ಲಿಸಿ. ಅವರು ಗೆದ್ದರೂ ಕ್ಷೇತ್ರದಲ್ಲಿ ನಾನೇ ಓಡಾಡೋದು. ಅವರು ಮುಖ್ಯಮಂತ್ರಿ ಆದ ನಂತ್ರ ನನ್ನನ್ನು ಎಂಎಲ್ಸಿಯಾಗಿ ಮಾಡ್ತಾರೆ. ಮಿನಿಸ್ಟರ್ ಪೋಸ್ಟ್ ಅನ್ನು ಕೊಡ್ತಾರೆ' ಎಂದು ಹೇಳಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯಗೆ ಸವಾಲುಗಳೇ ಇಲ್ಲವೇ?
ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ಕಾಂಗ್ರೆಸ್ ನಾಯಕರ ನಂಬಿಕೆಯಾಗಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಶಾಸಕರಾಗಿರುವ ಬಾದಾಮಿ ಕ್ಷೇತ್ರ ಬೆಂಗಳೂರಿಂದ ದೂರ ಇದೆ ಎಂಬ ಕಾರಣಕ್ಕೆ ಕೋಲಾರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿದ್ದಾರೆ. ಇದನ್ನು ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಕೋಲಾರದಲ್ಲೂ ಸಿದ್ದರಾಮಯ್ಯಗೆ ಹಲವು ಸವಾಲುಗಳಿವೆ. ಮೊದಲು ಕೋಲಾರದ ಕಾಂಗ್ರೆಸ್ ನಾಯಕರನ್ನು ಒಟ್ಟುಗೂಡಿಸಬೇಕಿದೆ. ರಮೇಶ್ ಕುಮಾರ್ ಹಾಗೂ ಮುನಿಯಪ್ಪ ಬಣಗಳನ್ನು ಒಂದುಮಾಡಬೇಕಿದೆ. ಎರಡನೆಯದಾಗಿ ತಮ್ಮದೇ ಶಿಷ್ಯರಾಗಿದ್ದ ವರ್ತೂರು ಪ್ರಕಾಶ್ ಅವರ ವಿರುದ್ಧ ಸೆಣಸಬೇಕಿದೆ. ವರ್ತೂರು ಪ್ರಕಾಶ್ ಕುರುಬ ಸಮುದಾಯಕ್ಕೆ ಸೇರಿದವರು ಮತ್ತು ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕೋಲಾರದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ.