ಮತ್ತ ಎಸಿ ರೈಲನ್ಯಾಗ ಹೋಗಬೇಕಂದ್ರ ಅಂಜಿಕಿ ಆಗತೈತಿ
ಬೆಂಗಳೂರು, ಡಿ. 28 : "ಆ ಭೀಕರ ದುರಂತದಿಂದ ಪಾರಾಗಿ ಬಂದಿದ್ದು ನನ್ನ ಅದೃಷ್ಟವೇ ಸರಿ. ಅಂಥ ಅದೃಷ್ಟ ಅನೇಕರಿಗಿರಲಿಲ್ಲರಿ. ನಾನು ಮತ್ತು ನನ್ನು ಸ್ನೇಹಿತರು ಮರುಜನ್ಮ ಪಡೆದಿದ್ದೇವೆ ಎಂದು ಅನಸತೈತಿ. ಆದರೆ, ಇಂಥ ಘಟನೆ ಮರುಕಳಿಸದಂತೆ ಕೇಂದ್ರ ಸರಕಾರ ವ್ಯವಸ್ಥೆ ಮಾಡಬೇಕಾಗೇತಿ. ಹಲವಾರು ಜನರು ಸಜೀವ ದಹನವಾಗಿದ್ದು ಮಾತ್ರ ಭಾರೀ ಬೇಜಾರು ಆಗತೈತಿ"
ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ, ಡಿ.28ರಂದು ಬೆಳಗಿನ 3 ಗಂಟೆಯ ಸಮಯದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಸತ್ತವರಲ್ಲಿ ಒಬ್ಬರಾಗದೆ, ಸಮಯಸ್ಫೂರ್ತಿಯಿಂದ ಸಾವಿನ ದವಡೆಯಿಂದ ಸುರಕ್ಷಿತವಾಗಿ ಪಾರಾಗಿ ಬಂದಿರುವ ಯಾದಗಿರಿಯ ದೇವೀಂದ್ರನಾಥ್ ನಾದ್ (40) ಅವರ ನೋವಿನ ಮಾತುಗಳಿವು.
ಒನ್ಇಂಡಿಯಾ ಕನ್ನಡದೊಡನೆ ತಮ್ಮ ನರಕಸದೃಶ ಅನುಭವವನ್ನು ಹಂಚಿಕೊಂಡಿದ್ದಾರೆ. ಯಾದಗಿರಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷಕಾಗಿರುವ ಮತ್ತು ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ದೇವೀಂದ್ರನಾಥ್ ನಾದ್ ಅವರು ಬೆಂಗಳೂರಿನಿಂದ ಯಾದಗಿರಿಗೆ ಈ ನತದೃಷ್ಟ ತ್ರಿ-ಟಯರ್ ಹವಾನಿಯಂತ್ರಿತ ರೈಲಿನ ಬಿ1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. [ದುರ್ಘಟನೆಗೆ ಹೇಳಿ ಮಾಡಿಸಿದಂತಿರುವ ಎಸಿ ರೈಲು]

"ರಾತ್ರಿ ಸುಮಾರು 3.10ರ ಸುಮಾರಿಗೆ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಇದ್ದಕ್ಕಿಂತ ಚೀತ್ಕಾರ ಆರಂಭವಾಗಿದೆ. ಬೆಂಕಿ ಬೆಂಕಿ ಎಂದು ಅನೇಕರು ಕಿರುಚಾಡಲು ಆರಂಭಿಸಿದರು. ಬಾಗಿಲ ಬಳಿಯೇ ಇದ್ದುದ್ದರಿಂದ, ಚಲಿಸುತ್ತಿದ್ದ ರೈಲನ್ನು ಚೈನ್ ಎಳೆದು ನಿಲ್ಲಿಸಿದೆ. ನನ್ನ ಜೊತೆ ಕೆಲ ಸ್ನೇಹಿತರು ಕೂಡ ಇದ್ದರು."
"ನಾವೆಲ್ಲ ಕೂಡಲೆ ಬಾಗಿಲು ತೆರೆದು ಹೊರಗೆ ಧುಮುಕಿದೆವು. ಇನ್ನೂ ಕೆಲವರು ಹೊರಗೆ ಬರಲು ಕೂಡ ಸಹಾಯ ಮಾಡಿದೆವು. ಆದರೆ, ಉಳಿದವರು ಒಳಗಡೆಯೇ ಸಿಲುಕಿಕೊಂಡು, ಉಸಿರುಗಟ್ಟಿ ಸಾವನ್ನಪ್ಪಿದರು. ಧಗಧಗನೆ ಉರಿಯುತ್ತಿದ್ದ ಬೋಗಿಯಲ್ಲಿ ಸುಟ್ಟು ಕರಕಲಾದರು. ಕಿಟಕಿ ಒಡಯಲು ಸಾಧ್ಯವಾಗದಿದ್ದರಿಂದ ಹೆಚ್ಚಿನ ಸಾವು ಸಂಭವಿಸಿದೆ." [ಬೆಂಗಳೂರು-ನಾಂದೇಡ್ ರೈಲಿಗೆ ಬೆಂಕಿ]
"ಇಂಥ ರೈಲಿನಲ್ಲಿ ಕೆಲ ಅಟೆಂಡರ್ ಗಳು ಇರುತ್ತಾರೆ. ಆದರೆ, ದುರಾದೃಷ್ಟವೆಂದರೆ ಅವರು ಕೂಡ ರಾತ್ರಿ ಹೊತ್ತಿನಲ್ಲಿ ಮಲಗಿಬಿಟ್ಟಿರುತ್ತಾರೆ. ಇಂಥ ದುರ್ಘಟನೆ ಸಂಭವಿಸಿದಾಗ ಸೈರನ್ ಕೂಗಿಸಲು ಅಥವಾ ಮಲಗಿದವರನ್ನು ಅಟೆಂಡರುಗಳು ಎಚ್ಚರಿಸಲು ಮೈಕ್ ನಂಥ ವ್ಯವಸ್ಥೆ ಇರಬೇಕು. ಆಗ, ಇಂಥ ಘಟನೆ ಸಂಭವಿಸಿದರೂ ಜನರನ್ನು ಸಕಾಲದಲ್ಲಿ ಎಚ್ಚರಿಸುವುದರಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ."
"ಹಿಂದೆ ಕೂಡ ಅನೇಕ ಬಾರಿ ಎಸಿ ರೈಲಿನಲ್ಲಿ ಪ್ರಯಾಣಿಸಿದ್ದೇನೆ. ಇಂಥ ಘಟನೆ ಯಾವತ್ತೂ ನೋಡಿರಲಿಲ್ಲ. ಆದರೆ, ಇನ್ನು ಮುಂದೆ ಮತ್ತ ಎಸಿ ರೈಲಿನ್ಯಾಗ ಪ್ರಯಾಣಿಸಬೇಕೆಂದರೆ ಅಂಜಿಕಿ ಆಗತೈತಿ. ಇಂಥ ದುರ್ಘಟನೆ ಮತ್ತೆ ಸಂಭವಿಸುವ ಮೊದಲೇ ಕೇಂದ್ರ ರೈಲು ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರು ಕ್ರಮಗಳನ್ನು ತೆಗೆದುಕೊಳ್ಳಬೇಕು."












Click it and Unblock the Notifications