Traffic Police: ದಂಡ ಕಟ್ಟಲು ಹೋದರೆ ಖಾತೆಗೆ ಕನ್ನ, ಈ ಲಿಂಕ್ ಬಳಸಿ
ಬೆಂಗಳೂರು, ಆಗಸ್ಟ್ 06: ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ನಿಯಮಗಳನ್ನು ಉಲ್ಲಂಘನೆ ಮಾಡಿದ ಕೆಲವೇ ಕ್ಷಣದಲ್ಲಿ ಸವಾರರಿಗೆ ನೋಟಿಸ್ ತಲುಪುವ ವ್ಯವಸ್ಥೆ ಮಾಡಲಾಗಿದೆ. ಆದರೆ ದಂಡ ಕಟ್ಟಲು ಹೋದ ಹಲವು ಸವಾರರು ಹಣ ಕಳೆದುಕೊಂಡ ಘಟನೆ ನಡೆದಿದೆ. ಆದ್ದರಿಂದ ಪೊಲೀಸರು ಸಹ ಜನರಿಗೆ ಮನವಿಯೊಂದನ್ನು ಮಾಡಿದ್ದಾರೆ.
ಈ ಕುರಿತು ಅಲೋಕ್ ಕುಮಾರ್, ಎಡಿಜಿಪಿ, ಸಂಚಾರ & ರಸ್ತೆ ಸುರಕ್ಷತೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ನಕಲಿ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಸೈಬರ್ ಕಳ್ಳರು ಕೈ ಹಾಕಲಿದ್ದಾರೆ. ಆದ್ದರಿಂದ ಸರಿಯಾದ ಲಿಂಕ್ ಬಳಕೆ ಮಾಡಿಕೊಂಡು ದಂಡ ಪಾವತಿ ಮಾಡಿ ಎಂದು ಹೇಳಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ ದಂಡ ಕಟ್ಟುವಾಗ ಆದ ಗೊಂದಲ, ಹಣ ಕಡಿತ, ಸೈಬರ್ ಅಪರಾಧದ ಬಗ್ಗೆ ಮಾಹಿತಿ ತಿಳಿದ ತಕ್ಷಣ ದಂಡ ಪಾವತಿಗಾಗಿಯೇ ಹೊಸ ಲಿಂಕ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳ ದಂಡವನ್ನು ಈ ಲಿಂಕ್ ಮೂಲಕ ಪಾವತಿಸಬಹುದು. ದಂಡ ಪಾವತಿ ಮಾಡಿ, ಪೊಲೀಸರಿಗೆ ಸಹಕರಿಸಿ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಯಾವ ಲಿಂಕ್ ಮೂಲಕ ಪಾವತಿ?; ಇ-ಚಲನ್ ದಂಡ ಪಾವತಿಯಲ್ಲಿ ಹಗರಣ ನಡೆದ ಹಿನ್ನಲೆಯಲ್ಲಿ ಹೊಸ ಲಿಂಕ್ https://echallan.ksp.gov.in ಸೃಷ್ಟಿಸಲಾಗಿದೆ. ಈ ಲಿಂಕ್ ಬಳಸಿ ಕರ್ನಾಟಕದ ಯಾವುದೇ ಜಿಲ್ಲೆ (ಬೆಂಗಳೂರು ನಗರ ಹೊರತುಪಡಿಸಿ) ದಂಡ ಪಾವತಿ ಮಾಡಬಹುದಾಗಿದೆ.
ಹಲವು ನಕಲಿ ಲಿಂಕ್ಗಳು ಆನ್ಲೈನ್ನಲ್ಲಿ ಲಭ್ಯವಿದೆ. ಅವುಗಳನ್ನು ಕ್ಲಿಕ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣ ಸೈಬರ್ ಕ್ರೈಂ ಖದೀಮರ ಪಾಲಾಗಲಿದೆ. ಆದ್ದರಿಂದ ಅಧಿಕೃತವಾದ ಲಿಂಕ್ ಅನ್ನು ಮಾತ್ರ ಬಳಕೆ ಮಾಡಿಕೊಂಡು ದಂಡವನ್ನು ಪಾವತಿ ಮಾಡಿ ಎಂದು ಮನವಿ ಮಾಡಲಾಗಿದೆ.
In view of E-Challan scams a new link has been created for payment of fines-https://t.co/VDnsRQ3yNV
— alok kumar (@alokkumar6994) August 1, 2024
Fine can be paid for violations anywhere in Karnataka except Blr City
Huge amount of pending fine
Plz pay fine to avoid unsolicited personal visits by Police to your doorsteps pic.twitter.com/3pV0Aoi48y
ಸಂಚಾರಿ ಪೊಲೀಸರು ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಅರ್ಧಗಂಟೆಯಲ್ಲಿ ಮೊಬೈಲ್ ನಂಬರ್ಗೆ ದಂಡದ ಚಲನ್ ಬರುತ್ತಿದೆ.
ಅಲ್ಲದೇ ಆಗಸ್ಟ್ ತಿಂಗಳಿನಲ್ಲಿ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆಯನ್ನು ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಘಟಕಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವ ಕುರಿತು ಎಂದು ಮಾರ್ಗಸೂಚಿಗಳನ್ನು ಸಹ ಪೊಲೀಸರಿಗೆ ನೀಡಲಾಗಿದೆ.
ಎಲ್ಲಾ ಘಟಕಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್ಇಡಿ ದೀಪಗಳನ್ನು ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ, ಮಂಗಳೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಮೈಸೂರು ನಗರ, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಿರುವುದನ್ನು ಶ್ಲಾಘಿಸಲಾಗಿದೆ.
ಆಗಸ್ಟ್ನಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ (Wrong side driving), ಪುಟ್ ಪಾತ್ ಮೇಲೆ ವಾಹನ ಚಾಲನೆ (Driving on Foot path) ಬಗ್ಗೆ ವಿಶೇಷ ಕಾರ್ಯಾಚರಣೆ ಮಾಡುವುದು, ಇದರ ಜೊತೆಗೆ Defective Number Plate ಮೇಲೆ ಸಹ ವಿಶೇಷ ಕಾರ್ಯಾಚರಣೆ ನಡೆಸಲು ಎಲ್ಲಾ ಘಟಕಗಳಲ್ಲಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನ ಮಾಡುವುದು ಜೀವನಕ್ಕೆ ಅಪಾಯಕಾರಿಯಾಗಿದ್ದು, ಇಂತಹ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವವರ ಮೇಲೆ ಬಿಎನ್ಎಎಸ್ 281 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿ, ಕ್ರಮ ಜರುಗಿಸುವುದು ಎಂದು ನಿರ್ದೇಶನ ನೀಡಲಾಗಿದೆ.
ಬೆಂಗಳೂರು ನಗರ ಸೇರಿದಂತೆ ನಗರ ಪ್ರದೇಶಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಹಾಗೂ ಪುಟ್ ಪಾತ್ ಮೇಲೆ ಮೋಟಾರು ಸೈಕಲ್ಗಳ ಚಾಲನೆ ಮಾಡುವುದು ಬಹಳ ಸಾಮಾನ್ಯವಾಗಿರುತ್ತದೆ. ಅದಕ್ಕಾಗಿ ಮೇಲೆ ಉಲ್ಲೇಖಿಸಿದ ವಿಷಯದ ಕುರಿತು ವಿಶೇಷ ಕಾರ್ಯಾಚರಣೆ ಮಾಡುವುದು ಹಾಗೂ ಇದರ ಬಗ್ಗೆ ಜನರಲ್ಲಿ ಮುಂಚಿತವಾಗಿ ಸಾಮಾಜಿಕ ಜಾಲತಾಣ, ಕರಪತ್ರ ಹಾಗೂ ಧ್ವನಿ ವರ್ಧಕ ಉಪಕರಣಗಳ ಮೂಲಕ ಅರಿವು ಮೂಡಿಸಬೇಕು ಎಂದು ತಿಳಿಸಲಾಗಿದೆ.












Click it and Unblock the Notifications