ತಜ್ಞರ ವರದಿ ಬಂದ ಬಳಿಕ ಮುಂದಿನ ಕೋವಿಡ್ ರೂಲ್ಸ್ ಬಗ್ಗೆ ನಿರ್ಧಾರ: ಮುಖ್ಯಮಂತ್ರಿ
ಬೆಂಗಳೂರು, ಜ.27: ಮುಂದಿನ ದಿನಗಳಲ್ಲಿ ಕೋವಿಡ್-19 ನಿರ್ವಹಣೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ತಜ್ಞರಲ್ಲಿ ವರದಿ ಕೇಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೋವಿಡ್ ನಿರ್ವಹಣೆ ಸಂಬಂಧ ಈಗಾಗಲೇ ಕೆಲವು ನಿರ್ಧಾರಗಳನ್ನು ಸಡಿಲಗೊಳಿಸಿದ್ದರೆ, ಇನ್ನೂ ಕೆಲವು ನಿಯಮಗಳು ಮುಂದುವರಿದಿವೆ. ಸದ್ಯ ದಾಖಲಾಗುತ್ತಿರುವ ಪ್ರಕರಣಗಳನ್ನು ಗಮನಿಸಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಸಲಹೆ ನೀಡುವಂತೆ ತಜ್ಞರ ಸಮಿತಿಯಲ್ಲಿ ವರದಿ ಕೇಳಲಾಗಿದೆ ಎಂದು ಅವರು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಶುಕ್ರವಾರ (ಜ.28) ಕೋವಿಡ್ ಸಭೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ತಜ್ಞರು ವರದಿ ನೀಡಿದ ಬಳಿಕ ಸಭೆ ನಡೆಸಲಾಗುವುದು. ಅಲ್ಲಿ ವಿಸ್ತೃತವಾಗಿ ಚರ್ಚಿಸಿ ಸರ್ಕಾರ ಮುಂದಿನ ಸೂಚನೆಗಳನ್ನು ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಕ್ಯಾಬಿನೆಟ್ನಲ್ಲಿಯೂ ಚರ್ಚೆ ಸಾಧ್ಯತೆ:
ಗುರುವಾರ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಅಜೆಂಡಾ ಪ್ರಕಾರವೇ ವಿಷಯಗಳು ಚರ್ಚೆಗೆ ಬರುತ್ತವೆ. ಕೋವಿಡ್ ಉಸ್ತುವಾರಿ ಹೊಂದಿರುವ ಸಚಿವರುಗಳು ಈ ವಿಷಯ ಪ್ರಸ್ತಾಪಿಸಿದರೆ ಈ ಸಂಬಂಧವೂ ಚರ್ಚಿಸಲಾಗುವುದು ಎಂದು ಹೇಳಿದರು.
ಪಕ್ಷಿನೋಟ ಪುಸ್ತಕ ಬಿಡುಗಡೆ:
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಜ.28ಕ್ಕೆ ಆರು ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನೆಗಳ ಪಕ್ಷಿನೋಟದ ಪುಸ್ತಕ ಹೊರತರಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಳೆದ ಆರು ತಿಂಗಳಲ್ಲಿ ಏನೇನು ಉತ್ತಮ ಯೋಜನೆಗಳನ್ನು ಜಾರಿಗೊಳಿಸಲಾಗಿದೆ, ಅದರಿಂದ ಎಷ್ಟು ಜನರಿಗೆ ಅನುಕೂಲ ಆಗಿದೆ ಎಂಬುದರ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿರುತ್ತದೆ. ಆದರೆ, ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಅಲ್ಲದೆ, ಜ.28ಕ್ಕೆ ಬಸವರಾಜ ಬೊಮ್ಮಾಯಿ ಅವರ ಹುಟ್ಟುಹಬ್ಬವೂ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ನನ್ನ ಜನ್ಮದಿನ ಇದೆ. ಆದರೆ, ಆಚರಣೆ ಮಾಡುವುದಿಲ್ಲ. ಮೊದಲಿನಿಂದಲೂ ಹುಟ್ಟುಹಬ್ಬ ಆಚರಣೆ ಮಾಡುವ ಅಭ್ಯಾಸ ಇಟ್ಟುಕೊಂಡಿಲ್ಲ' ಎಂದು ಹೇಳಿದರು.
Recommended Video
'ನಮ್ಮದು ಸ್ಪಂದನಾಶೀಲ ಸರ್ಕಾರ. ಜನಸಾಮಾನ್ಯರ ಯಾವುದೇ ಸಮಸ್ಯೆಗಳು ಇದ್ದರೂ ಕೂಡಲೇ ಸ್ಪಂದನೆ ಮಾಡುತ್ತೇವೆ. ಜೋಳ ಖರೀದಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡರು. ಅದರಂತೆ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ ನಡೆಯುತ್ತಿದೆ. ಸದ್ಯ ರಾಗಿ ಖರೀದಿ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ. ಅಲ್ಲಿ ಚರ್ಚಿಸಿ ರೈತರಿಗೆ ಅನುಕೂಲ ಆಗುವಂತಹ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.