ನಾನು ಮಂಡ್ಯ ಸೊಸೆ, ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದ ಸುಮಲತಾ: ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಹಾಸನ, ಫೆಬ್ರವರಿ 19: 2019 ರ ಮಂಡ್ಯ ಲೋಕಸಭಾ ಚುನಾವಣಾ ಕಣ ಮತ್ತೆ ಮರುಕಳಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ- ಜೆಡಿಎಸ್ ಮೈತ್ರಿಯಾಗಿದ್ದು, ಇದೀಗ ಮಂಡ್ಯ ಕ್ಷೇತ್ರವನ್ನ ಮರಳಿ ಪಡೆಯಲು ಮಾಸ್ಟರ್ ಪ್ಲಾನ್ ಹಾಕಿದ್ದ ದಳಪತಿಗಳಿಗೆ ಸುಮಲತಾ ಅವರ ಹೇಳಿಕೆಯಿಂದ ಟೆನ್ಷನ್ ಶುರುವಾಗಿದೆ ಎನ್ನಲಾಗಿದೆ.
ಹೌದು, ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ಮುಂದೊಮ್ಮೆ ರಾಜಕಾರಣ ಬಿಡಬಹುದು ಆದರೆ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪುನರುಚ್ಛರಿಸಿದ್ದಾರೆ. ಮಂಡ್ಯ ಹಾಲಿ ಸಂಸದೆ ಸುಮಲತಾ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನೂ ಸುಮಲತಾ ಅವರ ಈ ಹೇಳಿಕೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಸಂತೋಷ, ಸಂತೋಷ ಎಂದು ಮುಂದೆ ಸಾಗಿದ್ದಾರೆ.

ಬಡವರ ವಿರೋಧಿಗಳಿಗೆ ಬಜೆಟ್ ನಮ್ಮ ಬಜೆಟ್ ಅರ್ಥ ಆಗಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಇವರು ಯಾರ ಪರವಾಗಿ ಇದ್ದಾರೆ. 2000 ಯಾರಪ್ಪನ ಮನೆಯ ದುಡ್ಡು ಕೊಡ್ತಾ ಇದ್ದೀರಿ, ಈ ರಾಜ್ಯದ ಜನತೆಯ ದುಡ್ಡೇ ಅದು, ಎಷ್ಟು ಸಾಲ ಮಾಡಿದ್ದೀರಿ. ಹಣ ಸಂಗ್ರಹಣೆ ಮಾಡಲು ಅಂತಿಮವಾಗಿ ಜನರ ಜೇಬಿಗೆ ಕೈ ಹಾಕಬೇಕು. ಇದನ್ನು ಬಡವರ ಕಾರ್ಯಕ್ರಮ ಅಂತಾ ಹೇಳ್ತಿರಾ? ಒಂದು ರೂಪಾಯಿಯಲ್ಲಿ ಎಷ್ಟು ಖರ್ಚು ಮಾಡುತ್ತಿದ್ದೀರಾ. ಒಂದು ರೂಪಾಯಿಯಲ್ಲಿ ಹದಿನೈದು ಪೈಸೆ ಸಾಲ ಕಟ್ಟಲು ಕೊಡ್ತಿರಾ, ನಿಮ್ಮ ಗ್ಯಾರೆಂಟಿಗೆ ಹದಿನೈದರಿಂದ ಇಪ್ಪತ್ತು ಪೈಸೆ ಹಾಕ್ತಿರಾ. ಸಂಬಳ ಕೊಡಲು, ಪೆನ್ಷನ್ ಇತ್ಯಾದಿಗಳಿಗೆ ಮೂವತ್ತು ಪೈಸೆ ಹೋಯ್ತು ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿರುವುದು ಒಂದೇ ವಿರೋಧ ಪಕ್ಷ, ಸೋಲಿನ ಭಯ ಶುರುವಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಉತ್ತರಿಸಿದ ಅವರು, ನಾವು ವಿಲೀನ ಆಗ್ತಿವಿ ಅಂತ ಹೇಳ್ತಿದ್ದೀರಲ್ಲಾ, ನೀವು ಏನ್ ಮಾಡುತ್ತಿದ್ದೀರಿ? ಕಾಂಗ್ರೆಸ್ನಲ್ಲಿರುವವರನ್ನು ಟೆಂಟು, ಗಳಗಳ ಸಮೇತ ಎಲ್ಲಾ ಕಿತ್ತು ಬಿಜೆಪಿಗೆ ಕಳುಹಿಸುತ್ತಿದ್ದೀರಲ್ಲಾ. ನಿಮ್ಮಲ್ಲಿದ್ದ ಮಾಜಿ ಮುಖ್ಯಮಂತ್ರಿ ಸೇರಿ ಎಲ್ಲರನ್ನೂ ಕಳುಹಿಸುತ್ತಿದ್ದೀರಾ, ಸಿದ್ದರಾಮಯ್ಯ, ಶಿವಕುಮಾರ್ ಇಬ್ಬರಿಗೆ ಹೇಳ್ತಿದ್ದೀನಿ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳೋಕೆ ದೇವೇಗೌಡರೇ ಹೇಳಿ ಕಳುಹಿಸಿದ್ದಾರೆ ಅಂತ ನೀವು ಹೇಳಿದ್ದೀರಲ್ಲಾ? ಏತಕ್ಕೆ ಹೋಗಲು ದೇವೇಗೌಡರು ಹೇಳಿದರು. ಅವರ ಅರವತ್ತು ವರ್ಷ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ನಂಬಿ, ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಧ್ವನಿಗೂಡಿಸಿ ಕೆಲಸ ಮಾಡಿದ್ರು. 2018 ರಲ್ಲಿ ನಿಮ್ಮ ಜೊತೆ ಸಂಬಂಧ ಬೆಳಸಿದ್ರು ಅಲ್ವಾ ನೀವು ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಮಂತ್ರಿಗಳು ರಾಜೀನಾಮೆ ಕೊಟ್ಟು ಬಾ ಮುಂದಿನ ಮೂರು ವರ್ಷ ಮುಖ್ಯಮಂತ್ರಿ ಆಗು ಎಂದರು. ನಿಮ್ಮನ್ನು ನಂಬಿದ್ದಕ್ಕೆ ನಮ್ಮ ಕುತ್ತಿಗೆ ಕುಯ್ದರಲ್ಲಾ, ಅದಕ್ಕೆ ನಿಮ್ಮ ಜೊತೆ ಇರಬೇಕಾ ಚಾಕು ಹಾಕಿಸಿಕೊಳ್ಳಲು, ಈ ಚುನಾವಣೆ ಆಗಲಿ ಆಮೇಲೆ ಉತ್ತರ ಕೊಡೋಣ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶಾಸಕ ಮುನಿರತ್ನ, ಎಸ್.ಟಿ.ಸೋಮಶೇಖರ್ ಡಿಸಿಎಂ ಡಿ.ಕೆ.ಶಿವಕುಮಾರ್ ಹೊಗಳಿಕೆ ವಿಚಾರವಾಗಿ ಮಾತನಾಡಿ, ಸಂತೋಷ, ಅವರವರ ವೈಯುಕ್ತಿಕವಾಗಿ ಹೇಳ್ತಾರೆ ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು. ಇನ್ನೂ ಮೈತ್ರಿ ಸೀಟು ಹಂಚಿಕೆ ವಿಚಾರವಾಗಿ ಸದ್ಯದಲ್ಲೇ, ಇನ್ನೊಂದು ವಾರದಲ್ಲೇ ಎಲ್ಲಾ ಮುಗಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.












Click it and Unblock the Notifications