ರಾಜ್ಯಪಾಲರನ್ನು ಜಂಟಿ ಅಧಿವೇಶನಕ್ಕೆ ಆಹ್ವಾನಿಸಿದ ಸಭಾಧ್ಯಕ್ಷ, ಸಭಾಪತಿ
ಬೆಂಗಳೂರು, ಫೆಬ್ರವರಿ 14: ಸೋಮವಾರ ಪ್ರಾರಂಭವಾಗಲಿರುವ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಆಹ್ವಾನ ನೀಡಿದ್ದಾರೆ.
ನಿನ್ನೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಆಗಿದ್ದ ಸ್ಪೀಕರ್ ಮತ್ತು ಸಭಾಪತಿ ರಾಜ್ಯಪಾಲರಿಗೆ ಅಧಿಕೃತ ಆಹ್ವಾನ ನೀಡಿದರು. ಜೊತೆಗೆ ಅಧಿವೇಶನದ ಕುರಿತು ಮಾಹಿತಿಯನ್ನು ನೀಡಿದರು.
ಮುಂದಿನ ಸೋಮವಾರ 15 ನೇ ವಿಧಾನಸಭೆ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಫೆಬ್ರವರಿ 17 ರಿಂದ 20 ರ ವರೆಗೆ ಹಾಗೂ ಮಾರ್ಚ್ 2 ರಿಂದ 31 ರ ವರೆಗೆ ಅಧಿವೇಶನ ನಡೆಯಲಿದೆ. ಒಟ್ಟು 25 ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಸೋಮವಾರ ಜಂಟಿ ಅಧಿವೇಶನ ಪ್ರಾರಂಭ
ಸೋಮವಾರದಂದು ರಾಜ್ಯಪಾಲ ವಜುಭಾಯಿವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅದೇ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಸದನ ಮುಂದೂಡಲಾಗುತ್ತದೆ. ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.

ಮಾರ್ಚ್ 5 ಕ್ಕೆ ಯಡಿಯೂರಪ್ಪ ಬಜೆಟ್ ಮಂಡನೆ
ಮತ್ತೆ ಮಾರ್ಚ್ 2 ಕ್ಕೆ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 5 ಕ್ಕೆ ಸಿಎಂ ಯಡಿಯೂರಪ್ಪ ಅವರು ಬಜೆಟ್ ಮಂಡಿಸಲಿದ್ದಾರೆ. 31 ರ ವರೆಗೆ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.

ಸ್ಪೀಕರ್ ಕ್ರಮಕ್ಕೆ ಸಿದ್ದರಾಮಯ್ಯ ವಿರೋಧ
ಸ್ಪೀಕರ್ ಕಾಗೇರಿ ಅವರು ಕೆಲವು ದಿನಗಳ ಹಿಂದೆ ನೀಡಿದ್ದ ಸೂಚನೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯಪಾಲರ ಭಾಷಣದ ವೇಳೆ ಯಾರೂ ಗಲಾಟೆ ಮಾಡಬಾರದು, ಪ್ರತಿಭಟನೆ ಮಾಡಬಾರದು, ಭಾಷಣದ ಮಧ್ಯೆ ಮಾತನಾಡಬಾರದು ಹೀಗೊಂದು ವೇಳೆ ಮಾಡಿದರೆ ಕಲಾಪದಿಂದ ಹೊರಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದರು.

ಈ ಬಾರಿಯೂ ಮಾಧ್ಯಮಗಳಿಗೆ ನಿಷೇಧ
ಯಡಿಯೂರಪ್ಪ ಸಿಎಂ ಆದ ನಂತರದ ಮೊದಲ ಅಧಿವೇಶನಕ್ಕೆ ಮಾಧ್ಯಮಗಳಿಗೆ ಕಲಾಪದ ನೇರ ಪ್ರಸಾರ ಮಾಡಲು ಹಾಗೂ ಕಲಾಪದ ಛಾಯಾಚಿತ್ರ ತೆಗೆಯಲು ಹೇರಲಾಗಿದ್ದ ನಿರ್ಭಂದವನ್ನು ಈ ಬಾರಿಯ ಅಧಿವೇಶನದಲ್ಲೂ ಮುಂದುವರೆಸಲಾಗಿದೆ. ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications