ಸೌಜನ್ಯ ಕೊಲೆ ಪ್ರಕರಣ:ಮೊದಲ ಬಾರಿ ಸಿಎಂ ಹೇಳಿದ್ದೇನು?
ಶಿವಮೊಗ್ಗ/ ಬೆಂಗಳೂರು, ಅ 21: ಒಂದು ವರ್ಷದ ಹಿಂದಿನ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಹೋರಾಟಗಳು ತಾರಕಕ್ಕೇರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ವರದಿ ಬರಲಿದೆ. ವರದಿ ಬಂದ ನಂತರ ಗೃಹ ಇಲಾಖೆಯ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ (ಅ 20) ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಿದ್ದರಾಮಯ್ಯ, ಸೌಜನ್ಯ ಕೊಲೆಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನಿಸುತ್ತಿದ್ದೇನೆ.
ಧರ್ಮಸ್ಥಳ ನಾಡಿನ ಪ್ರಸಿದ್ದ ಧಾರ್ಮಿಕ ಸ್ಥಳ ಮತ್ತು ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಾರ್ಯಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಈ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡಲಾಗುವುದಿಲ್ಲ ಎಂದಿದ್ದಾರೆ.
ಸಿಐಡಿ ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ವರದಿ ಬರುವವರೆಗೆ ಪ್ರತಿಭಟನಾಕಾರರು ತಾಳ್ಮೆಯಿಂದ ಇರಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಘಟನೆಯನ್ನು ಸಿಬಿಐಗೆ ವಹಿಸಲಾಗುತ್ತದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಸಿಎಂ ಉತ್ತರಿಸಲಿಲ್ಲ.
ಕನಿಕರವಿಲ್ಲದ ಕರಾವಳಿ ಶಾಸಕರುಗಳು! ಮುಂದೆ ಓದಿ..

ಕರಾವಳಿ ಸಚಿವರು
ಸೌಜನ್ಯಳ ಬಗ್ಗೆ ಮತ್ತು ಅಥವಾ ಆಕೆಯ ಕುಟುಂಬದ ಬಗ್ಗೆ ಎಳ್ಳಷ್ಟೂ ಕನಿಕರ ಕರಾವಳಿ ಶಾಸಕರಿಗಿಲ್ಲ. ಈ ಘಟನೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ತಿಳಿಯಲು ಜನನಾಯಕರಾದ ಇವರುಗಳು ಹೋರಾಟ ಮಾಡಬೇಕೆ ಹೊರತು ಈ ಘಟನೆಯಿಂದ ಇನ್ನೊಬ್ಬರ ಮಾನ ಹೋಯಿತು ಎಂದು ಅನುಕಂಪ ವ್ಯಕ್ತ ಪಡಿಸುವುದಲ್ಲ ಎಂದು ಸಿಪಿಎಂ ಆಕ್ಷೇಪ ವ್ಯಕ್ತ ಪಡಿಸಿದೆ.

ಸಿಐಡಿ ತನಿಖೆಯಿಂದ ನ್ಯಾಯ ಸಿಗುತ್ತಾ?
ರಾಜ್ಯ ಸರಕಾರದ ಅಧೀನದಲ್ಲಿರುವ ಸಂಸ್ಥೆ ಸಿಐಡಿ. ಈ ತನಿಖೆಯಿಂದ ನ್ಯಾಯ ಸಿಗಬಹುದು ಎನ್ನುವ ನಂಬಿಕೆ ಅಷ್ಟಾಗಿಲ್ಲ. ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಮತ್ತು ಇತರ ಅಸಹಜ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯಾಸತ್ಯತೆ ಹೊರ ಬೀಳಬಹುದು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ ಎಂ ಭಟ್ ಹೇಳಿದ್ದಾರೆ.

ಕಠಿಣ ಸಂದೇಶ
ಧರ್ಮಸ್ಥಳದ ಮತ್ತು ಹೆಗ್ಗಡೆಯವರ ವಿರುದ್ದ ನಿಂದನೆ ಮಾಡುವವರಿಗೆ ಕಠಿಣ ಸಂದೇಶ ನೀಡಲಾಗುವುದು. ಹೆಗ್ಗಡೆಯವರ ನಿಂದನೆಯಿಂದ ಅಸಂಖ್ಯಾತ ಭಕ್ತರಿಗೆ ನೋವಾಗಿದೆ - ಮೀನುಗಾರಿಕೆ ಮತ್ತು ಯುವಜನ ಖಾತೆ ಸಚಿವ ಅಭಯಚಂದ್ರ ಜೈನ್.

ಮಾಹಿತಿ ಇದ್ದರೆ ನೀಡಲಿ
ಪ್ರತಿಭಟನಾಕಾರಿಗೆ ಕೊಲೆಯ ಬಗ್ಗೆ ಮಾಹಿತಿ ಇದ್ದರೆ ಅದು ಸಿಐಡಿಗೆ ನೀಡಬೇಕೇ ಹೊರತು ಸುಖಾಸುಮ್ಮನೆ ಆರೋಪ ಹೊರಿಸುವುದು ಸರಿಯಲ್ಲ. ತನಿಖೆಯ ವರದಿ ಬರುವ ಮುನ್ನವೇ ತಾವೇ ತನಿಖಾಧಿಕಾರಿಗಳಂತೆ ವರ್ತಿಸುವುದು ತಪ್ಪು - ಇಸ್ಲಾಂ ಧರ್ಮಗುರು ಅಬು ಸೂಫಿಯಾನ್.

ಸಿಎಂ ಮನೆ ಮುಂದೆ ಪ್ರತಿಭಟನೆ
ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸೋಮವಾರ (ಅ 21) ಮೈಸೂರು ಬ್ಯಾಂಕಿನಿಂದ ಮೆರವಣೆಗೆ ಮೂಲಕ ತೆರಳಿ ಸಿಎಂ ಮನೆ ಮುಂದೆ ಪ್ರತಿಭಟನೆ ಸಲ್ಲಿಸಲಿದ್ದಾರೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಡೆಸುವ ಈ ಹೋರಾಟಕ್ಕೆ ಬೆಂಬಲ ಸೂಚಿಸುವವರು ಸಂಘಟನೆಯ ಕಾರ್ಯದರ್ಶಿ ಮತ್ತು ಅಧ್ಯಕ್ಷರನ್ನು ಈ ಮೊಬೈಲ್ ನಂಬರಿನ ಮೂಲಕ ಸಂಪರ್ಕಿಸಬಹುದು: 99160-33144 or 94801-01468.












Click it and Unblock the Notifications