'ಸಿದ್ದರಾಮಯ್ಯನವರು ಐದು ವರ್ಷ ಅವಧಿ ಪೂರ್ಣಗೊಳಿಸಲ್ಲ'
ಮೈಸೂರು, ಜನವರಿ 17: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಅವರ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ಯುದ್ಧ ಪ್ರಾರಂಭವಾಗಿ 15 ದಿನಗಳಾಗಿವೆ. ಯಾರ್ಯಾರು ಬಡಿಗೆ, ಯಾರ್ಯಾರು ಕುಡುಗೋಲು ತೆಗೆದುಕೊಂಡು ಬರುತ್ತಾರೆ? ಇದು ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಅಚ್ಚರಿ ಹೇಳಿಕೆಯನ್ನ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಕುರಿತ ಬೀದಿರಂಪವು ಮುಂದುವರೆದಿದೆ. ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಇಳಿಯುವುದಿಲ್ಲ ಎಂದರೆ, ಡಿಕೆ ಶಿವಕುಮಾರ್ ತಾವು ಸಿಎಂ ಆಗಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇದು ಯಾವ ತಿರುವನ್ನು ಪಡೆಯಲಿದೆ ಎಂದು ಕಾದುನೋಡಿ ಎಂದು ವಿಜಯೇಂದ್ರ ಅವರು ಹೇಳಿದರು.

ಯಾವುದೇ ಕ್ಷಣದಲ್ಲಿ ಸಿದ್ದರಾಮಯ್ಯನವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು. ಡಿ.ಕೆ.ಶಿವಕುಮಾರ್ ಜೊತೆಗೇ 8 ರಿಂದ 10 ಸಚಿವರು ತಾವೂ ಸಿಎಂ ಆಗಬೇಕೆಂದು ಆಕಾಂಕ್ಷಿಗಳಾಗಿ ಸಾಲಿನಲ್ಲಿ ನಿಂತಿದ್ದಾರೆ. ಇದರ ನಡುವೆ ರಾಜ್ಯವು ಅಭಿವೃದ್ಧಿ ಇಲ್ಲದೆ ಬಡವಾಗಿದೆ ಎಂದು ತಿಳಿಸಿದರು. ಕಿಯೋನಿಕ್ಸ್ ಸಂಬಂಧ ಗುತ್ತಿಗೆದಾರರು ದಯಾಮರಣ ನೀಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ ಎಂದು ಗಮನಕ್ಕೆ ತಂದರು.
ಅಭಿವೃದ್ಧಿ ಬಗ್ಗೆ ಚಿಂತನೆಯನ್ನೂ ಮಾಡದ ರಾಜ್ಯ ಸರಕಾರ ಇಲ್ಲಿದೆ. ರೈತರೂ ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯನವರ ಬುದ್ಧಿವಂತಿಕೆ, ಜಾತಿ ಜನಗಣತಿ ಹೆಸರಿನಲ್ಲಿ ಪಗಡೆಯಾಟ ಎಂದೇ ಭಾವಿಸಿದ್ದಾರೆ. ಅದನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದೆ ಅವರ ಸರಕಾರ ಇದ್ದಾಗ 2016ರಲ್ಲೇ ಜಾತಿಗಣತಿ ವರದಿಯನ್ನು ಅವಸರದಿಂದ ತಯಾರಿಸಿದರು. ಸಿದ್ದರಾಮಯ್ಯನವರೇ ಸಿಎಂ ಆಗಿದ್ದರೂ ಯಾಕೆ ಅದನ್ನು ಅನುಷ್ಠಾನ ಮಾಡಿಲ್ಲ ಎಂದು ಅವರು ಕೇಳಿದರು. ಕುರ್ಚಿ ಅಲ್ಲಾಡುವಾಗ ಜಾತಿ ಜನಗಣತಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ಇದೊಂದು ಅವೈಜ್ಞಾನಿಕ ವರದಿ; ಒಕ್ಕಲಿಗ, ವೀರಶೈವ ಸಮಾಜ ಸೇರಿ ಬೇರೆಬೇರೆ ಸಮಾಜಗಳೂ ಅದನ್ನು ವಿರೋಧಿಸಿವೆ. ಜಾತಿ ಗಣತಿ ಸಂಬಂಧಿತ ವರದಿಯ ಮಾಹಿತಿಗಳು ಸೋರಿಕೆ ಆಗಿವೆ, ಅದರ ಆಧಾರದಲ್ಲಿ ಹೇಳುವುದಾದರೆ ರಾಜಕೀಯ ಪಿತೂರಿ ಇದರ ಹಿಂದೆ ಇರುವುದು ಗೋಚರವಾಗುತ್ತದೆ ಎಂದು ಆಕ್ಷೇಪಿಸಿದರು.
ಅಲ್ಪಸಂಖ್ಯಾತ ದೇಶದ್ರೋಹಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ರಾಜ್ಯದ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಸರಕಾರದ ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ದೂರಿದರು. ಗುಲ್ಬರ್ಗದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕಡಿದು ಹಾಕಿದ್ದಾರೆ. ಬೀದರ್ನಲ್ಲೂ ಎಟಿಎಂ ದರೋಡೆ ನಡೆದಿದೆ ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮತ್ತೊಂದೆಡೆ ಭ್ರಷ್ಟಾಚಾರವೂ ತೀವ್ರವಾಗಿದೆ. ಗುಲ್ಬರ್ಗದಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ನಡೆದಿದೆ. ಬಳಿಕ ಪೊಲೀಸ್ ಗೂಂಡಾಗರ್ದಿ ನಡೆದಿದೆ. ದೂರು ನೀಡಲು ಹೋದ ಗುತ್ತಿಗೆದಾರನ ಸಹೋದರಿಯರ ಜೊತೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ತಿಳಿದೇಇದೆ. ಬಿಜೆಪಿ ಹೋರಾಟ ಮಾಡಿದ್ದರಿಂದ ಕಾಂಗ್ರೆಸ್ ಪುಡಾರಿಯನ್ನು ಬಂಧಿಸಿ ರಾಜಾತಿಥ್ಯ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರ ಸರಕಾರವು ಅಭಿವೃದ್ಧಿ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ; ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಜಿಲ್ಲೆಗೆ ಆದ್ಯತೆ ಕೊಟ್ಟಿದ್ದರು. ಸರ್ವತೋಮುಖ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದರು ಎಂದು ಗಮನ ಸೆಳೆದರು. ಸಿದ್ದರಾಮಯ್ಯನವರು ಈ ಜಿಲ್ಲೆಗೆ ಎಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಕೇಳಿದರು.












Click it and Unblock the Notifications