ಸಿದ್ರಾಮಣ್ಣ ಕೆಲವೇ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ: ನಳಿನ್ಕುಮಾರ್ ಕಟೀಲ್
ಸಿದ್ದರಾಮಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಗೆಲ್ಲಿಸಲು ಮತ್ತು ಕಾಂಗ್ರೆಸ್ ಸೋಲಿಸಲು ಕರೆ ನೀಡಿದ್ದಾರೆ ಅವರಿಗೆ ಕೃತಜ್ಞತೆಗಳು ಎಂದು ನಳಿನ್ಕುಮಾರ್ ಕಟೀಲ್ ಹೇಳಿದರು.
ರಾಮಚೂರು,ಫೆಬ್ರವರಿ25: ಸಿದ್ರಾಮಣ್ಣನ ಅರ್ಕಾವತಿ ಹಗರಣಕ್ಕೆ ಸಂಬಂಧಿಸಿ ಜಸ್ಟಿಸ್ ಕೆಂಪಣ್ಣನವರ ಆಯೋಗದ ವರದಿಯನ್ನು ನಮ್ಮ ಮುಖ್ಯಮಂತ್ರಿಯವರು ಸದನದಲ್ಲಿ ಮಂಡಿಸಿದ್ದಾರೆ. ಸಿದ್ರಾಮಣ್ಣ ಅವರು ಕೆಲವೇ ದಿನಗಳಲ್ಲಿ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಭಿವೃದ್ಧಿಯ ಹರಿಹಾರ ಯಡಿಯೂರಪ್ಪನವರಿಗೆ ಬೇಡಿಕೆ ಹಾಗೂ ಜನಬೆಂಬಲ ಇದೆ. ಸಿದ್ರಾಮಣ್ಣನಿಗೆ ಇಲ್ಲ. 5 ವರ್ಷ ಆಡಳಿತ ಮಾಡಿದ ಸಿದ್ರಾಮಣ್ಣನ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅವಧಿಯಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿತ್ತು. ಸಿದ್ರಾಮಣ್ಣನ ಕಾಲದಲ್ಲಿ ರೌಡಿರಾಜ್ಯ ಇತ್ತು ಎಂದು ಆರೋಪಿಸಿದರು.

24 ಜನ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಹಿಂದೂ- ಮುಸ್ಲಿಮರ ನಡುವೆ ಕಲಹಕ್ಕಾಗಿ ಟಿಪ್ಪು ಜಯಂತಿ ಆರಂಭಿಸಿದರು. ಗಲಭೆಗಳನ್ನು ಸೃಷ್ಟಿಸಿದರು. ಹಿಂದುಳಿದ ವರ್ಗಗಳನ್ನು, ಕುರುಬರನ್ನು ತುಳಿದರು. ಕನಕ ಜಯಂತಿಯನ್ನು ಯಡಿಯೂರಪ್ಪ ಮಾಡಿದರು ಎಂದರು. ಸಿದ್ರಾಮಣ್ಣ ಸಮಾಜ ಒಡೆಯಲು ಮುಂದಾದರು ಎಂದರು. ಇನ್ನೂ ಸಿದ್ದರಾಮಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಗೆಲ್ಲಿಸಲು ಮತ್ತು ಕಾಂಗ್ರೆಸ್ ಸೋಲಿಸಲು ಕರೆ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು ಎಂದು ತಿಳಿಸಿದರು.
ವಿರೂಪಾಕ್ಷಪ್ಪ, ಪ್ರತಾಪಗೌಡರು ಬಿಜೆಪಿಗೆ ಹೋಗಿದ್ದಾರೆ. ಇನ್ನು ಕಾಂಗ್ರೆಸ್ ಖಾಲಿ ಎಂದು ಅವರಿಗೆ ಗೊತ್ತಾಗಿದೆ. ಅದಕ್ಕಾಗಿಯೇ ಅವರು ಕಾಂಗ್ರೆಸ್ ಸೋಲಿಸಿ, ಬಿಜೆಪಿ ಗೆಲ್ಲಿಸಲು ಹೇಳಿದ್ದಾರೆ. ಸಿದ್ರಾಮಣ್ಣ ಹೇಳಿದ್ದೆಲ್ಲ ನಡೆಯುತ್ತೆ. ಆದ್ದರಿಂದ ಬಿಜೆಪಿ ಗೆಲುವು ಖಚಿತ. ಸಿದ್ರಾಮಣ್ಣ ಆಡಳಿತ ಮಾಡುತ್ತಿದ್ದಾಗ ಜೈಲುಗಳಲ್ಲೂ ಮರ್ಡರ್, ಸಮಾಜದಲ್ಲೂ ಹತ್ಯೆ ನಿರಂತರವಾಗಿತ್ತು. ಅದು ಹಲ್ಲೆ, ಹತ್ಯೆಗಳ, ನರಮೇಧಗಳ ಕಾಲವಾಗಿತ್ತು. ಹಾಸ್ಟೆಲ್ನಲ್ಲಿ ಹಗರಣ, ಪಿಎಸ್ಐ ಹಗರಣ, ಶಿಕ್ಷಕರ ಹಗರಣ, ಅರ್ಕಾವತಿ ನುಂಗಿ ನೀರು ಕುಡಿದವರು ಸಿದ್ರಾಮಣ್ಣ ಎಂದು ಟೀಕಿಸಿದರು.

ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸಿದ್ದರಾಮಣ್ಣ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ. ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಮತ್ತೆ ಬಿಜೆಪಿ ಆಡಳಿತ ಬರಲಿದೆ ಎಂದು ಹುಲಿಯಾ ಕಾಡಿಗೆ ಹೋಗಲಿದೆ. ಬಂಡೆ ಒಡೆದು ಹೋಗಲಿದೆ. ಬಿಜೆಪಿಯ ಕಮಲ ಅರಳಲಿದೆ. ರಾಯಚೂರು ಕಲ್ಯಾಣ ಕರ್ನಾಟಕದ ಅನ್ನದ ಬಟ್ಟಲು. ಚಿನ್ನದ ನಾಡಿದು. ಆದರೆ, 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಚಿನ್ನದ ಬಟ್ಟಲನ್ನು ಕಬ್ಬಿಣದ, ಕಲ್ಲಿನ ಬಟ್ಟಲಾಗಿ ಮಾಡಿದೆ. ಇಲ್ಲಿ ಅಭಿವೃದ್ಧಿ ಮಾಡದೆ ಲೂಟಿ ಹೊಡೆಯುವ ಕಾರ್ಯ ಮಾಡಿದೆ ಎಂದು ಆರೋಪಿಸಿದರು.
ಬಾದಾಮಿಯಿಂದ ಸಿದ್ರಾಮಣ್ಣನನ್ನು ಓಡಿಸಿದ್ದಾರೆ. ವರುಣಾಕ್ಕೆ ಬರಲು ಬಿಡುವುದಿಲ್ಲ. ಕೋಲಾರದಲ್ಲಿ ಜಾಗ ಇಲ್ಲ. ಮಾಜಿ ಮುಖ್ಯಮಂತ್ರಿಗೆ ಸೀಟೇ ಇಲ್ಲ ಎಂಬ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ನಲ್ಲಿ ಅವರು ಅಲೆಮಾರಿಯಾಗಿದ್ದಾರೆ ಎಂದು ಟೀಕಿಸಿದರು. ಮಾಜಿ ಸಿಎಂಗೆ ಕ್ಷೇತ್ರ ಇಲ್ಲದ ಪರಿಸ್ಥಿತಿ ಇದೆ. ಸಿದ್ರಾಮಣ್ಣನಿಗೆ ಸೀಟಿಲ್ಲ. ಕಾಂಗ್ರೆಸ್ಸಿಗೆ ಓಟಿಲ್ಲ ಎಂದು ಕಿಡಿಕಾರಿದರು.
ರೈತರ ಬಜೆಟ್, ಸಂಧ್ಯಾ ಸುರಕ್ಷೆ ಯೋಜನೆ, ಹಾಲಿಗೆ ಬೆಂಬಲ ಬೆಲೆ ನೀಡಿದವರು ಯಡಿಯೂರಪ್ಪನವರು. ಕಲ್ಯಾಣ ಕರ್ನಾಟಕಕ್ಕೆ ಗರಿಷ್ಠ ಅನುದಾನ ಕೊಟ್ಟಿದ್ದಾರೆ. ರೈತ ವಿದ್ಯಾ ನಿಧಿಯನ್ನು ಬೊಮ್ಮಾಯಿ ಸರಕಾರ ಕೊಟ್ಟಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಉಚಿತ ವಿದ್ಯುತ್ ನೀಡಿದೆ. ಅನೇಕ ಕಲ್ಯಾಣ ಯೋಜನೆಗಳನ್ನು ನಮ್ಮ ಸರಕಾರ ಮಾಡಿದೆ ಎಂದ ಅವರು, ಅಧಿಕಾರದಲ್ಲಿದ್ದಾಗ ಕರೆಂಟ್ ಕೊಡದವರು ಈಗ ಉಚಿತ ವಿದ್ಯುತ್ ಕೊಡುವುದು ಎಲ್ಲಿಂದ ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ಜನರು ತಮ್ಮ ದೇಶಕ್ಕೆ ನರೇಂದ್ರ ಮೋದಿಜಿ ಪ್ರಧಾನಿ ಆಗಲಿ ಎಂದು ಬಯಸುವಂತಾಗಿದೆ. ಭಾರತ ಎದ್ದು ನಿಂತಿದೆ. ದೇಶ ಜಗದ್ವಂದ್ಯ ಆಗುತ್ತಿದೆ ಎಂದ ಅವರು, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಮೋದಿಜಿ ಜನಪ್ರಿಯತೆ ಹೆಚ್ಚಾಗಿದೆ. ಅವರ ಜನಪರ ಯೋಜನೆಗಳು, ರಾಜ್ಯದ ಬಿಜೆಪಿ ಸರಕಾರದ ಜನೋಪಯೋಗಿ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಯನ್ನು ಮತ್ತೆ ಗೆಲ್ಲಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications