ರಾಘವೇಶ್ವರ ಶ್ರೀಗಳ ತೇಜೋವಧೆ ಮಾಡದಂತೆ ಕೋರ್ಟ್ ಆದೇಶ
ರಾಘವೇಶ್ವರ ಶ್ರೀಗಳ ಕುರಿತು ವದಂತಿಗಳನ್ನು ಹಬ್ಬಿಸಿ, ಅವರ ತೇಜೋವಧೆ ಮಾಡುವ ಹಾಗೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಪ್ರಯತ್ನಗಳನ್ನು ಪ್ರತಿಬಂಧಿಸಿ ಸಿದ್ಧಾಪುರದ ಅಧೀನ ನ್ಯಾಯಾಲಯ ಆದೇಶ ನೀಡಿದೆ.
ಸಿದ್ದಾಪುರ (ಉ.ಕನ್ನಡ), ಆ 5: ಆಧಾರ ರಹಿತವಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಕುರಿತು ವದಂತಿಗಳನ್ನು ಹಬ್ಬಿಸಿ, ಅವರ ತೇಜೋವಧೆ ಮಾಡುವ ಹಾಗೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಪ್ರಯತ್ನಗಳನ್ನು ಪ್ರತಿಬಂಧಿಸಿ ಸಿದ್ಧಾಪುರದ ಅಧೀನ ನ್ಯಾಯಾಲಯ ಆದೇಶ ನೀಡಿದೆ.
ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರ ಶ್ರೀಗಳು ಸಮಾಜದಲ್ಲಿ ಧಾರ್ಮಿಕತೆಯನ್ನು ಬೆಳೆಸುವ ಜೊತೆಗೆ ಸರ್ವ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ.
ರಾಮಚಂದ್ರಾಪುರ ಮಠದ ವಿರುದ್ಧ ಷಡ್ಯಂತ್ರ, ವಿಚಾರಣೆಯ ವೇಳೆ ಬಯಲು
ಲಕ್ಷಾಂತರ ಜನರ ಧಾರ್ಮಿಕ ಭಾವನೆ ಹಾಗೂ ಸಾಮಾಜಿಕ ನಂಬಿಕೆಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ಸಲುವಾಗಿ ಸದರಿ, ಸಮಾಜ ವಿರೋಧಿ ಕೃತ್ಯಗಳನ್ನು ಪ್ರತಿಬಂಧಿಸಲು ಸಲ್ಲಿಸಿದ್ದ ಮನವಿಯನ್ನು ಮಾನ್ಯ ಮಾಡಿದ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ನ್ಯಾಯಾಲಯ ಈ ಮೇಲಿನ ಆದೇಶ ನೀಡಿದೆ.
ಸಿದ್ದಾಪುರದ ಗಣಪತಿ ರಾಮಯ್ಯ ಹೆಗಡೆ ಎಂಬುವರು ಸಲ್ಲಿಸಿದ್ದ ಮನವಿ ಹಾಗೂ ಪೂರಕ ದಾಖಲೆಗಳನ್ನು ಸಮಗ್ರವಾಗಿ ಗಮನಿಸಿ, ಪುರಸ್ಕರಿಸಿದ ನ್ಯಾಯಾಲಯ ಬಾಲಕೃಷ್ಣರಾಜ್ ನೀರ್ಚಾಲ್, ಗಣಪತಿ ಭಟ್ ಜಿಗಳೆಮನೆ, ಸನಾತನ ಸಮರ್ಥ ಭಟ್, ಬಾಲಚಂದ್ರ ಹೆಗಡೆ, ಸಿ ಬಿ ಲಕ್ಷ್ಮೀನಾರಾಯಣ, ಸತೀಶ್ ನೆಟ್ಟಾರ್ ಸೇರಿದಂತೆ 11 ಜನರಿಗೆ ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ.
ಸದರಿ ವ್ಯಕ್ತಿಗಳು ಸ್ವತಃ ಅಥವಾ ಅವರ ಪ್ರತಿನಿಧಿಗಳ ಮೂಲಕ ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರ ಶ್ರೀಗಳ ವಿರುದ್ಧ ಮುದ್ರಣ ಮಾಧ್ಯಮ - ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಸೇರಿದಂತೆ, ಯಾವುದೇ ರೀತಿಯಿಂದಲೂ ಹೇಳಿಕೆ, ಸಂದೇಶಗಳನ್ನು ನೀಡದಂತೆ ಪ್ರತಿಬಂಧಿಸಿ ಸಿದ್ಧಾಪುರದ ಅಧೀನ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಠದ ವ್ಯವಹಾರಗಳನ್ನು ಪಾರದರ್ಶಕವಾಗಿ ಇಟ್ಟಿರುವ ಜೊತೆಗೆ ಸುವ್ಯವಸ್ಥಿತ ಆಡಳಿತವನ್ನು ಶ್ರೀಗಳು ನೀಡಿದ್ದಾರೆ. ಗೋಸಂರಕ್ಷಣಾ ಕಾರ್ಯದ ಜೊತೆಗೆ ಸರ್ವಸಮಾಜದ ಉನ್ನತಿಗಾಗಿ ಶ್ರಮ ವಹಿಸಿರುತ್ತಾರೆ. ಆದರೆ ಕೆಲವು ಪಟ್ಟಭದ್ರ ಸ್ವಹಿತಾಸಕ್ತಿಗಳು ಆಧಾರ ರಹಿತವಾಗಿ ಶ್ರೀಗಳ ತೇಜೋವಧೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆಂದು ನ್ಯಾಯಾಲಯದಲ್ಲಿ ದೂರು ಸಲ್ಲಿಕೆಯಾಗಿತ್ತು.