ಶಿವಮೊಗ್ಗ ಘಟನೆ: ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಫೆ 22: ಕಾಂಗ್ರೆಸ್ಸಿನ ಅಹೋರಾತ್ರಿ ಧರಣಿ, ಕಲಾಪವನ್ನು ಮುಂದೂಡಿದ್ದು, ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತನ ಕೊಲೆ ಮತ್ತು ಇದಾದ ನಂತರ ನಡೆದ ಅಹಿತಕರ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸುದೀರ್ಘವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
"ಎರಡು ರಾಷ್ಟ್ರೀಯ ಪಕ್ಷಗಳ ನಡುವಳಿಕೆ ದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವಂತದ್ದು. ಸದನವು ಗದ್ದಲದಿಂದ ಕೂಡಿದ್ದರಿಂದ ನಾವು ಯಾವ ವಿಚಾರದ ಮೇಲೆ ಚರ್ಚೆ ಮಾಡುವುದು? ಸ್ಪೀಕರ್ ಮತ್ತು ಸಭಾನಾಯಕರಿಗೆ ಎರಡು ಬಾರಿ ಮನವಿ ಮಾಡಿದ್ದೆ, ಈಗ ಕಲಾಪವನ್ನು ಬಜೆಟ್ ದಿನಕ್ಕೆ ಮುಂದೂಡಿದ್ದಾರೆ"ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.
"ಕಾಂಗ್ರೆಸ್ಸಿನವರದ್ದು ಆಡಿದ್ದೇ ಆಟ, ಅದಕ್ಕೆ ಅವಕಾಶ ನೀಡಬಾರದಿತ್ತು, ಉಡುಪಿಯಲ್ಲಿ ಆರಂಭವಾದ ಸಣ್ಣ ಘಟನೆ ಈಗ ರಾಜ್ಯಾದ್ಯಂತ ವ್ಯಾಪಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು, ಆಡಳಿತ ಪಕ್ಷದ ವೈಫಲ್ಯತೆಯನ್ನು ತೋರಿಸಬೇಕಿತ್ತು. ಆದರೆ, ಕಾಂಗ್ರೆಸ್ ಅದಕ್ಕೆ ಅವಕಾಶ ನೀಡಲಿಲ್ಲ, ಅನಾವಶ್ಯಕವಾಗಿ ಸದನದ ಸಮಯವನ್ನು ಹಾಳು ಮಾಡಿ, ತೆರಿಗೆದಾರರ ದುಡ್ಡನ್ನು ಪೋಲು ಮಾಡಿತು"ಎಂದು ಕುಮಾರಸ್ವಾಮಿ ಆರೋಪಿಸಿದರು.
"ಬಜರಂಗದಳದ ಕಾರ್ಯಕರ್ತನ ಕೊಲೆ ಮತ್ತು ಇದಾದ ನಂತರ ನಡೆದ ಘರ್ಷಣೆಯನ್ನು ನಾವು ನೋಡಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಸರಕಾರದ ಮೂಲಕ ಬಹಿರಂಗ ಪಡಿಸುವ ಗುರುತರ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿತು"ಎಂದು ಕುಮಾರಸ್ವಾಮಿ ಹೇಳುವ ಮೂಲಕ, ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಹಲವರು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ
"ಶಿವಮೊಗ್ಗದ ಘಟನೆಯ ನಂತರ ಹಲವರು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ, ಅವರಲ್ಲಿ ಯಾರೂ ಮೇಲ್ಜಾಜಿಗೆ ಸೇರಿದವರಲ್ಲ. ಸರಕಾರ ಯಾಕೆ ವೈಫಲ್ಯವನ್ನು ಕಾಣಿತು ಅದೂ ಗೃಹಸಚಿವರ ಊರಿನಲ್ಲಿ. ಘಟನೆಯ ನಂತರ ಒಬ್ಬೊಬ್ಬರು ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ, ಹಾಗಾದರೆ ಸತ್ಯ ಇದರಲ್ಲಿ ಯಾವುದು"ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಸತ್ಯ ಮರೆಮಾಚದೇ ಸತ್ಯಾಂಶವನ್ನು ಜನರ ಮುಂದೆ ಇಡಿ ಎಂದು ಒತ್ತಾಯಿಸಿದರು.

ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬೇಡಿ ಎಂದು ಕುಮಾರಸ್ವಾಮಿ ಮನವಿ
"ಒಬ್ಬರು ಮೂರು ಜನರನ್ನು ಬಂಧಿಸಲಾಗಿದೆ ಎಂದು ಹೇಳುತ್ತಾರೆ, ಇನ್ನೊಬ್ಬರು ಇಬ್ಬರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹೇಳುತ್ತಾರೆ, ಬಂಧಿಸಿದವರು ಕೊಲೆಗಾರರಲ್ಲ, ಅವರಿಂದ ಮಾಹಿತಿಯನ್ನು ಪಡೆಯಲು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನುವ ಸುದ್ದಿಯೂ ಬರುತ್ತಿದೆ. ಇದನ್ನು ಎಷ್ಟು ದಿನಕ್ಕೆ ಪ್ರಚಾರಕ್ಕೆ ಬಳಸಿಕೊಳ್ಳುತ್ತೀರಾ? ಸರಕಾರದ ಪ್ರಕಾರ ಪ್ರಮುಖ ಕೊಲೆಗಾರರ ಬಂಧನ ಇನ್ನೂ ಆಗಿಲ್ಲ. ಪ್ರತಿನಿತ್ಯ ಸುಳ್ಳು ಹೇಳಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬೇಡಿ" ಎಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದರು.

ಸದನವನ್ನು ಆರ್ಡರಿಗೆ ತರಲು ಸಾಧ್ಯವಾಗದೇ ಮುಂದೂಡುತ್ತಿದ್ದೇನೆ ಎಂದ ಸ್ಪೀಕರ್
"ಸದನವನ್ನು ಆರ್ಡರಿಗೆ ತರಲು ಸಾಧ್ಯವಾಗದೇ ಮುಂದೂಡುತ್ತಿದ್ದೇನೆ ಎಂದು ಸ್ಪೀಕರ್ ಅವರು ಹೇಳುವ ಮೂಲಕ ತಮ್ಮ ಅಸಹಾಯತೆಯನ್ನು ಪ್ರದರ್ಶಿಸಿದ್ದಾರೆ. ಶಿವಮೊಗ್ಗದಲ್ಲಿ ಯಾವ ವಿಚಾರದಲ್ಲಿ ಆ ಯುವಕನ ಜೀವವನ್ನು ತೆಗೆದರು, ಆ ಹುಡುಗ ಬಿಜೆಪಿಗೆ ಪರವಾಗಿ ಕೆಲಸ ಮಾಡುತ್ತಿದ್ದಂತಹವನು. ಅವರ ಕಾರ್ಯಕರ್ತರಿಗೇ ರಕ್ಷಣೆ ಕೊಡಲಾಗದಂತಹ ಗೃಹಸಚಿವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಸರಿದಾರಿಗೆ ತರುತ್ತಾರೆ"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಅಭಿಪ್ರಾಯ
"ಇದುವರೆಗೆ ಕೋಮು ದಳ್ಳುರಿಯಲ್ಲಿ ಮೃತ ಪಟ್ಟವರ ಹೆಸರನ್ನು ಹೇಳಿಕೊಂಡು ಬಿಜೆಪಿಯವರು ಪ್ರಚಾರವನ್ನು ಗಿಟ್ಟಿಸಿಕೊಂಡರೇ ಹೊರತು ಯಾವುದೇ ಕುಟುಂಬಕ್ಕೆ ನ್ಯಾಯವನ್ನು ಒದಗಿಸಲಿಲ್ಲ. ಸಿಎಎ ವಿಚಾರದಲ್ಲಿ ಮಂಗಳೂರಿನಲ್ಲಿ ಇಬ್ಬರು ಮೃತ ಪಟ್ಟರು, ಆ ನಂತರ ಆ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರವನ್ನು ಸರಕಾರ ಘೋಷಿಸಿತು. ಅದಾದ ನಂತರ, ಅವರನ್ನೇ ತಪ್ಪಿತಸ್ಥರು ಎನ್ನುವ ರಿಪೋರ್ಟ್ ಅನ್ನು ಸರಕಾರ ಕೊಟ್ಟಿತು. ಜಿಲ್ಲಾಧಿಕಾರಿಯವರಿಂದ ಬೇಕಾದ ಹಾಗೇ ರಿಪೋರ್ಟ್ ಬರೆಸಿಕೊಂಡಿರಿ"ಎಂದು ಆಡಳಿತ ಪಕ್ಷದ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.












Click it and Unblock the Notifications